ತುಂಬಾ ಚೆನ್ನಾಗಿ ಅಡುಗೆ ಮಾಡುವ ಬಾಣಸಿಗನ ಪಾತ್ರಧಾರಿ ಚಿದಂಬರನ ಮನೆಯಲ್ಲಿ ಒಬ್ಬನ ಸಾವು ಆಗಿದೆ. ಆ ಡೆಡ್‌ ಬಾಡಿಗಾಗಿ ಪೊಲೀಸ್‌ ಬರುತ್ತಾನೆ. ಈ ಪೊಲೀಸ್‌ ಅಧಿಕಾರಿಯನ್ನು ದಿಕ್ಕು ತಪ್ಪಿಸುತ್ತಾ ಅಮಾಯಕನಂತೆ ನಟಿಸುವ ಚಿದಂಬರ ಮತ್ತೊಂದು ಸಾವಿನ ಪ್ರಕರಣದಲ್ಲಿ ಸಿಲುಕುತ್ತಾನೆ.

ಆರ್‌. ಕೇಶವಮೂರ್ತಿ

ಆತ ಕೊಲೆಗಾರ ಅಲ್ಲ. ಆದರೂ ಆತನ ಕೈಗೆ ಕ್ರೈಮ್‌ ಅಂಟಿಕೊಳ್ಳುತ್ತದೆ. ಆತ ಯಾರ ರಕ್ತವನ್ನೂ ಹರಿಸಲ್ಲ. ಆದರೂ ಆತನ ಹಿಂದೆ ರಕ್ತದ ಕಲೆಗಳು ಮೂಡುತ್ತವೆ. ಆತನ ಹೆಸರು ಚಿದಂಬರ. ಬಾಣಸಿಗ ವೃತ್ತಿಯ ಈ ಚಿದಂಬರನ ಸುತ್ತ ಹೆಣದ ನೆರಳು ಸುಳಿದಾಡುವುದು ಯಾಕೆ ಮತ್ತು ಹೇಗೆ ಎನ್ನುವುದೇ ‘ಶೆಫ್‌ ಚಿದಂಬರ’ ಚಿತ್ರದ ಕತೆ. ಹಾಸ್ಯ, ಥ್ರಿಲ್ಲರ್‌, ಸಸ್ಪೆನ್ಸ್‌ ಕತೆಯ ಮುಖ್ಯ ಪಿಲ್ಲರ್‌ಗಳು. ಹೆಚ್ಚು ಸಮಯ ತೆಗೆದುಕೊಳ್ಳದೆ ಒಂದು ಸರಳವಾದ ಥ್ರಿಲ್ಲರ್‌ ಕತೆ ಹೇಳಬೇಕು ಎನ್ನುವ ನಿರ್ದೇಶಕ ಎಂ ಆನಂದರಾಜ್‌ ಅವರ ಆಲೋಚನೆ ಇಲ್ಲಿ ಕೈ ಹಿಡಿದಿದೆ.

ತುಂಬಾ ಚೆನ್ನಾಗಿ ಅಡುಗೆ ಮಾಡುವ ಬಾಣಸಿಗನ ಪಾತ್ರಧಾರಿ ಚಿದಂಬರನ ಮನೆಯಲ್ಲಿ ಒಬ್ಬನ ಸಾವು ಆಗಿದೆ. ಆ ಡೆಡ್‌ ಬಾಡಿಗಾಗಿ ಪೊಲೀಸ್‌ ಬರುತ್ತಾನೆ. ಈ ಪೊಲೀಸ್‌ ಅಧಿಕಾರಿಯನ್ನು ದಿಕ್ಕು ತಪ್ಪಿಸುತ್ತಾ ಅಮಾಯಕನಂತೆ ನಟಿಸುವ ಚಿದಂಬರ ಮತ್ತೊಂದು ಸಾವಿನ ಪ್ರಕರಣದಲ್ಲಿ ಸಿಲುಕುತ್ತಾನೆ. ಈ ಎರಡೂ ಸಾವಿನ ಪ್ರಕರಣದಲ್ಲಿ ಚಿದಂಬರ ಹೇಗೆ ಹೊರಗೆ ಬರುತ್ತಾನೆ, ಇಷ್ಟಕ್ಕೂ ಸತ್ತವರು ಯಾರು, ಚಿದಂಬರ ಪಾತ್ರವೇ ಇವರನ್ನು ಸಾಯಿಸಿದ್ದಾ ಎಂಬುದು ಚಿತ್ರದ ಸಸ್ಪೆನ್ಸ್‌.

ಚಿತ್ರ: ಶೆಫ್‌ ಚಿದಂಬರ
ನಿರ್ದೇಶನ: ಎಂ ಆನಂದರಾಜ್‌
ತಾರಾಗಣ: ಅನಿರುದ್ಧ್‌, ನಿಧಿ ಸುಬ್ಬಯ್ಯ, ರಾಚೆಲ್ ಡೇವಿಡ್, ಶರತ್‌ ಲೋಹಿತಾಶ್ವ, ಸಿದ್ಲಿಂಗು ಶ್ರೀಧರ್‌
ರೇಟಿಂಗ್: 3

ಚಿದಂಬರ ಪಾತ್ರದಲ್ಲಿ ಅನಿರುದ್ಧ್‌ ನಟನೆ ಚೆನ್ನಾಗಿದೆ. ನಿಧಿ ಸುಬ್ಬಯ್ಯ ಹಾಗೂ ರಾಚೆಲ್‌ ಡೇವಿಡ್‌ ಪಾತ್ರಗಳು ಕತೆಗೆ ಪೂರಕ. ಕಡಿಮೆ ಅವಧಿಯಲ್ಲಿ ಕತೆ ಹೇಳುವ ಜಾಣತನದ ಜತೆಗೆ ಇನ್ನೊಂದಿಷ್ಟು ರೋಚಕತೆ ಅಗತ್ಯ ಇತ್ತು. ಆಗಾಗ ಕೆಲವು ದೃಶ್ಯಗಳು ಅವಸರದ ಅಡುಗೆಯಂತೆ ಕಾಣುತ್ತವೆ.