ಯಾರು ಎಷ್ಟೇ ದೊಡ್ಡವರಾದರೂ ಬಾಲ್ಯದಲ್ಲಿ ಪುಟ್ಟ ಮಕ್ಕಳೇ. ಆಗ ಎಲ್ಲರೂ ತಂಟೆಕೋರರೇ. ಎಲ್ಲರೂ ಬಾಲ್ಯದಲ್ಲಿ ಹುಡುಗಾಟ ಮಾಡಿಕೊಂಡೇ ಬೆಳೆದವರು. ಸಾಹಿತಿ ಯು ಆರ್ ಅನಂತಮೂರ್ತಿಯವರ ಬಾಲ್ಯದ ಕಥೆ ಬಹಳ ಮಜವಾಗಿದೆ. ಅದೇನು ಅಂತ ತಿಳ್ಕೋಳೋಕೆ ಇದನ್ನು ಓದಿ. 

ಒಂದು ದಿನ ಅಪ್ಪ ಪೆನ್ ತಂದರು. ನನಗದು ಬಹಳ ಇಷ್ಟವಾಗಿಬಿಟ್ಟಿತು. ಆ ಪೆನ್ನಿನ ಕ್ಯಾಪ್ ಮೇಲೆ ಅಯಸ್ಕಾಂತ ದಿಕ್ಸೂಚಿ. ಪೆನ್ನನ್ನು ಹೇಗೇ ತಿರುಗಿಸಿದರೂ ಅಯಸ್ಕಾಂತೀಯ ಬಲದಿಂದ ಉತ್ತರಕ್ಕೆ ಮುಖ ಮಾಡಿ ನಿಲ್ಲುತ್ತಿತ್ತು. ಆ ಪೆನ್ನು ನನಗೆ ಬೇಕು ಎಂದು ತೀವ್ರವಾಗಿ ಅನಿಸಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಪ್ಪನ ಬಳಿ ಕೇಳಿದೆ. ಅವರು ಸುತರಾಂ ಕೊಡಲು ಒಪ್ಪಲಿಲ್ಲ. ‘ಮೊದಲು ಬಳಪ ಹಿಡಿಯೋದು ಕಲಿ, ಆಮೇಲೆ ಪೆನ್ನು’ ಎಂದು ಗದರಿಸಿದರು. ಹಾಗೆ ಬೈಗುಳ ತಿಂದ ಕೆಲವೇ ಹೊತ್ತಿಗೆ ನನಗೆ ತೀವ್ರ ಚಳಿ ಜ್ವರ. ಎದ್ದು ಕೂರಲಾಗದಷ್ಟು ನಡುಕ. ಔಷಧ, ತಣ್ಣೀರು ಬಟ್ಟೆ ಸೇವೆಯೆಲ್ಲ ಆದರೂ ಜ್ವರ ಇಳಿಯಲಿಲ್ಲ. ಆ ಜ್ವರದಲ್ಲೂ ಪೆನ್ನಿಗಾಗಿ ಕನವರಿಸುತ್ತಿದ್ದದ್ದು ಕೇಳಿ ಅಪ್ಪ ಪೆನ್ನು ತಂದು ಕೈಯೊಳಗಿಟ್ಟರು. ಗಟ್ಟಿಯಾಗಿ ಹಿಡಿದೆ. ಸ್ವಲ್ಪಹೊತ್ತಿಗೆಲ್ಲ ಮೈ ಬೆವರಿ ಜ್ವರ ಇಳಿಯಿತು. ನನಗಾಗ ಬೇಕೆಂದಾಗ ಜ್ವರ ಬರಿಸಿಕೊಳ್ಳುವ ಶಕ್ತಿ ಇತ್ತು. ರಜೆ ಬೇಕೆನಿಸಿದಾಗ ಈ ಜ್ವರ ಬಹಳ ಉಪಯೋಗಕ್ಕೆ ಬರುತ್ತಿತ್ತು.

- ಡಾ.ಯು.ಆರ್ ಅನಂತಮೂರ್ತಿ, (ಬಾಲ್ಯದ ಮೆಲುಕು ಬರಹದಿಂದ ಆರಿಸಿದ್ದು)