Asianet Suvarna News Asianet Suvarna News

ಸಾಮಾಜಿಕ ಕಳಕಳಿ ಇರುವ ಈ ಪೊಲೀಸ್ ಅಧಿಕಾರಿಗೆ ನಮ್ಮದೊಂದು ಸಲಾಂ!

ಜನ ಮೆಚ್ಚಿದ ಪೊಲೀಸ್ ಬಳ್ಳಾರಿಯರಿ ಮಹಮ್ಮದ್  ರಫಿ | ಗುಡ್ ಸಮಾರಿಟನ್ ಆಂದೋಲನದ ರುವಾರಿ ಇವರು | ಇವರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ . 

Bellary sub-inspector Mahammad Rafi starts Good Samaritan campaign
Author
Bengaluru, First Published Dec 12, 2018, 4:30 PM IST

ಬೆಂಗಳೂರು (ಡಿ. 12): ಅಪಘಾತ ದುರಂತದಲ್ಲಿ ಜೀವ ಉಳಿವಿಕೆಗೆ ಸಿಗುವ ‘ಗೋಲ್ಡನ್ ಅವರ್’ನ ಮಹತ್ವ ಕುರಿತು ಜನರಲ್ಲಿ ಅರಿವು ಮೂಡಿಸಲು ಸರ್ಕಾರ ಮತ್ತು ನ್ಯಾಯಾಲಯಗಳು ಕಾಯ್ದೆ ರೂಪಿಸುವ ಮುನ್ನವೇ ಈ ಪೊಲೀಸ್ ಅಧಿಕಾರಿ, ಆ ನಿಟ್ಟಿನಲ್ಲಿ ಕೆಲಸ ಶುರು ಮಾಡಿದ್ದರು. ಅವರು ಎರಡು ವರ್ಷಗಳ ನಿರುತ್ಸಾಹಿಗಳಾಗದೆ ನಡೆಸಿದ ಪ್ರಚಾರಕ್ಕೆ ಫಲಿತಾಂಶ ಸಮಯ ಬಂದಿದೆ. ಗಣ್ಯರು ಈ ಸಬ್ ಇನ್‌ಸ್ಪೆಕ್ಟರ್ ಮಹಮ್ಮದ್ ರಫೀಕ್ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ.

ಜಿದ್ದಾಜಿದ್ದಿನ ರಾಜಕೀಯ ಕಾದಾಟ, ಗಣಿಧಣಿಗಳ ವೈಭವೋಪೇತ ಜೀವನ ಶೈಲಿಗಳಿಂದಲೇ ಗಮನ ಸೆಳೆಯುವ ಬಳ್ಳಾರಿ ಸೀಮೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಸಾಮಾಜಿಕ ಜಾಗೃತಿ ಅಭಿಯಾನಕ್ಕೆ ಸದ್ದಿಲ್ಲದೆ ಜನ ದನಿಗೂಡುತ್ತಿದೆ. ಅಪಘಾತ ದುರಂತದಲ್ಲಿ ಜೀವ ಉಳಿವಿಕೆಗೆ ಸಿಗುವ ‘ಗೋಲ್ಡನ್ ಅವರ್’ನ ಮಹತ್ವವ ಕುರಿತು ಜನರಲ್ಲಿ ಅರಿವು ಮೂಡಿಸಲು ಸರ್ಕಾರ ಮತ್ತು ನ್ಯಾಯಾಲಯಗಳು ಕಾಯ್ದೆ ರೂಪಿಸುವ ಮುನ್ನವೇ ಈ ಪೊಲೀಸ್ ಅಧಿಕಾರಿ, ಆ ನಿಟ್ಟಿನಲ್ಲಿ ಕೆಲಸ ಶುರು ಮಾಡಿದ್ದರು. ಕೊನೆಗೆ ಅದರಲ್ಲಿ ಅವರಿಗೆ ಪ್ರಥಮ ಯಶಸ್ಸು ಸಿಕ್ಕಿದೆ.

ಈ ಮೂಲಕ ಪೊಲೀಸ್ ಇಲಾಖೆಗೂ ಅವರು ಮಾದರಿಯಾಗಿದ್ದಾರೆ. ಇಂತಹ ಸಾಮಾಜಿಕ ಕಳಕಳಿವುಳ್ಳ ಅಭಿಯಾನದ ರೂವಾರಿ ಬಳ್ಳಾರಿ ಜಿಲ್ಲೆ ತೋರಣಗಲ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಮಹಮ್ಮದ್ ರಫಿ. ರಾಜ್ಯ ಮಾತ್ರವಲ್ಲ ದೇಶದ ಪೊಲೀಸ್ ವ್ಯವಸ್ಥೆಯಲ್ಲಿ ಮೊದಲ ಬಾರಿಗೆ ‘ಗೋಲ್ಡನ್ ಅವರ್’ ಕುರಿತು ‘ಗುಡ್ ಸಮರಿಟಾನ್ ಲಾ’ ಹೆಸರಿನಲ್ಲಿ ಅವರು ಕ್ಯಾಂಪೇನ್ ಹುಟ್ಟು ಹಾಕಿದ್ದರು. ಇದಕ್ಕೆ ಸರ್ಕಾರ ಮತ್ತು ನ್ಯಾಯಾಲಯಗಳು ರೂಪಿಸಿದ ಕಾಯ್ದೆಗಳು ಮತ್ತಷ್ಟು ಉತ್ತೇಜನ ನೀಡಿದ್ದವು. ಇದರ ಪರಿಣಾಮ ಈಗ ತಮ್ಮೂರಿನಲ್ಲಿ ಅಪಘಾತವಾದರೆ ಬಳ್ಳಾರಿ ಜನ ಫೋಟೋ ಕ್ಲಿಕ್ಕಿಸೋದಿಲ್ಲ ಕಷ್ಟದಲ್ಲಿದ್ದವರಿಗೆ ನೆರವಿನ ಹಸ್ತ ನೀಡುತ್ತಾರೆ.

ರಫಿ ಕಾರ್ಯಕ್ಕೆ ನಟರಾದ ಪುನೀತ್ ರಾಜ್‌ಕುಮಾರ್, ಉಪೇಂದ್ರ, ದಿಗಂತ್, ಐಂದ್ರಿತಾ ರೇ, ಬಾಲಿವುಡ್‌ನ ಲಾರಾ ದತ್ತಾ, ಕ್ರೀಡಾಪಟುಗಳಾದ ಮಹೇಶ್ ಭೂಪತಿ, ಅಭಿನವ್ ಬಿಂದ್ರಾ ಮಾತ್ರವಲ್ಲದೆ ವೆಸ್ಟ್ ಇಂಡೀಸ್ ಸ್ಟಾರ್ ಕ್ರಿಕೆಟಿಗ ಕ್ರೀಸ್ ಗೇಲ್, ರವಿಶಂಕರ ಗುರೂಜಿ, ಬಾಬಾ ರಾಮದೇವ್ ಸೇರಿದಂತೆ ಹಲವು ಗಣ್ಯಾತಿಗಣ್ಯರು ಪಿಎಸ್‌ಐ ಬೆನ್ನುತಟ್ಟಿದ್ದಾರೆ. ಮಾತ್ರವಲ್ಲದೆ ಅಭಿಯಾನಕ್ಕೆ ಸ್ಥಳೀಯ ಸಂಘ ಸಂಸ್ಥೆಗಳು, ಶಾಲಾ- ಕಾಲೇಜುಗಳು ಸಹ ಕೈ ಜೋಡಿಸಿದರು. ಇದರಿಂದಾಗಿ ‘ಗುಡ್ ಸಮರಿಟಾನ್ ಲಾ’ (ಉತ್ತಮ ಪರೋಪಾಕಾರಿ ಕಾಯ್ದೆ) ಕುರಿತು ಜನ ಜಾಗೃತಿ ಮೂಡಿಸುವಲ್ಲಿ ಅಲ್ಪಮಟ್ಟಿಗೆ ಯಶಸ್ಸು ಕಂಡಿದ್ದಾರೆ.

ಅಪಘಾತಕ್ಕೆ ತುತ್ತಾದವರ ರಕ್ಷಣೆಗೆ ತಕ್ಷಣವೇ ಸ್ಪಂದಿಸಿದರೆ ಪ್ರಾಣಹಾನಿ ತಪ್ಪಿಸಬಹುದು. ಆದರೆ ಕೋರ್ಟ್-ಕಚೇರಿ, ಪೊಲೀಸ್ ಠಾಣೆ ಅಲೆಯಬೇಕು ಎಂದು ಭಯಗೊಂಡು ಸಾರ್ವಜನಿಕರು ನೆರವಿಗೆ ಧಾವಿಸುವುದಿಲ್ಲ. ಇದರಿಂದ ದೇಶದಲ್ಲಿ ದಾಖಲಾಗುವ ಒಟ್ಟು ಅಪಘಾತ ಪ್ರಕರಣಗಳಲ್ಲಿ ಶೇ.60 ರಷ್ಟು ಪ್ರಕರಣಗಳಲ್ಲಿ ಸಕಾಲಕ್ಕೆ ನೆರವು ಸಿಗದೆ ಜನರು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಗುಡ್ಸಮರೀಟನಾ ಲಾ (ಉತ್ತಮ ಪರೋಪಕಾರಿ ಕಾಯ್ದೆ) ಜಾರಿಗೆ ತಂದಿದೆ. ಈ ಕಾಯ್ದೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ‘ಗುಡ್ ಸಮರಿಟಾನ್’ ಎಂಬ ಅಭಿಯಾನ ಆರಂಭಿಸಿದ್ದೇವೆ ಎಂದು ಮಹಮ್ಮದ್ ರಫಿ ಹೇಳುತ್ತಾರೆ.

ನಾನು ಪೊಲೀಸ್ ಇಲಾಖೆಗೆ ಸೇರಿದ ಮೊದಲ ದಿನದಿಂದಲೇ ‘ಗೋಲ್ಡನ್ ಅವರ್’ ಕುರಿತು ಜನರಲ್ಲಿ ಅರಿವು ಮೂಡಿಸಲಾರಂಭಿಸಿದೆ. ಬಳಿಕ 2016 ರಲ್ಲಿ ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿ ಹಾಗೂ ೨೦೧೭ರಲ್ಲಿ ರಾಜ್ಯದ ಪರೋಪಕಾರಿ ಕಾಯ್ದೆಯು ನನಗೆ ಉತ್ತೇಜನ ನೀಡಿದ್ದವು. 2017 ರ ಫೆಬ್ರವರಿ 27 ರಂದು ಅಧಿಕೃತವಾಗಿ ಅಭಿಯಾನಕ್ಕೆ ಚಾಲನೆ ಸಿಕ್ಕಿತು. ಅಂದಿನ ಎಸ್ಪಿ ಆರ್. ಚೇತನ್ ಅವರಿಂದ ಹಿರಿಯ-ಕಿರಿಯ ಅಧಿಕಾರಿಗಳ ಪ್ರೋತ್ಸಾಹ ಲಭಿಸಿದೆ. ಸಂಘ ಸಂಸ್ಥೆಗಳು, ಶಾಲಾ-ಕಾಲೇಜುಗಳು ಕೈ ಜೋಡಿಸಿವೆ.

ಈಗ ನಮ್ಮ ಠಾಣಾ ವ್ಯಾಪ್ತಿ ಅಲ್ಲದೆ ಸುತ್ತಮುತ್ತಲು ಅಪಘಾತ ಸಂಭವಿಸಿದರೆ ತಕ್ಷಣವೇ ಜನರು, ಆ್ಯಂಬುಲೆನ್ಸ್‌ಗೆ ಕರೆ ಮಾಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುತ್ತಿದ್ದಾರೆ. ವಾರದ ಹಿಂದಷ್ಟೆ ಮಧ್ಯೆ ರಾತ್ರಿ ಜಿಂದಾಲ್ ಸಮೀಪ ಅಪಘಾತವಾಗಿ ಇಬ್ಬರಿಗೆ ತೀವ್ರ ಸ್ವರೂಪದ ಪೆಟ್ಟಾಗಿತ್ತು. ಅಷ್ಟೊತ್ತಿನಲ್ಲಿ ಸಾರ್ವಜನಿಕರ ಸಹಕಾರ ಪಡೆದು ಬಳ್ಳಾರಿಗೆ ಗಾಯಾಳುಗಳನ್ನು ಕರೆದೊಯ್ದು ಆಸ್ಪತ್ರೆ ಸೇರಿಸಲಾಯಿತು. ಎರಡು ಜೀವಗಳು ಉಳಿದವು ಎನ್ನುವಾಗ ರಫಿ ಅವರ  ದನಿಯಲ್ಲಿ ತಮ್ಮ ಕೈಂಕರ್ಯದಲ್ಲಿ ಸಾರ್ಥಕತೆ ಭಾವ ವ್ಯಕ್ತವಾಯಿತು.

ಏನೇನ್ ಮಾಡಿದ್ದಾರೆ?

‘ಗುಡ್ ಸಮರಿಟಾನ್ ಲಾ’ ಕುರಿತು ಫೇಸ್‌ಬುಕ್, ವ್ಯಾಟ್ಸ್ ಆ್ಯಪ್ ಹಾಗೂ ಟ್ವಿಟರ್ ಸೇರಿದಂತೆ ವಿಡಿಯೋ, ಪೋಟೋಗಳನ್ನು ಹಾಕಲಾಗಿದೆ. ಅಲ್ಲದೆ, ಅಭಿಯಾನಕ್ಕಾಗಿಯೇ ಲೋಗೋ ಸಹ ಸಿದ್ಧಪಡಿಸಲಾಗಿದೆ. ಆ ಲೋಗೋವನ್ನು ಸರ್ಕಾರಿ ವಾಹನಗಳು ಮಾತ್ರವಲ್ಲದೆ ಆಟೋಗಳು, ಕ್ಯಾಬ್‌ಗಳ ಸೇರಿ ಖಾಸಗಿ ವಾಹನಗಳ ಮೇಲೆ ಅಂಟಿಸಲಾಗುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಉಪನ್ಯಾ ಕಾರ್ಯಕ್ರಮ ಆಯೋಜಿಸಿ ಪಿಎಸ್‌ಐ ತಿಳುವಳಿಕೆ ಮೂಡಿಸುತ್ತಿದ್ದಾರೆ.

-ಗಿರೀಶ್ ಮಾದನಹಳ್ಳಿ 

Follow Us:
Download App:
  • android
  • ios