ವಿಜಯಪುರ ತಾಲ್ಲೂಕಿನ ಸಂಗಾಪುರ ಗ್ರಾಮದಲ್ಲಿ ಒಂದು ಸಮಾರಂಭ

ಕಮರಿಮಠದ ಸ್ವಾಮಿಗಳು ಮತ್ತು ಊರಿನ ಗಣ್ಯರು ಕೂಡಿಕೊಂಡು ಪ್ರತಿವರ್ಷ ೨-೩ ದಿನಗಳವರೆಗೆ ಸತ್ಸಂಗ ಏರ್ಪಡಿಸುತ್ತಾ ಬಂದಿದ್ದಾರೆ. ಮಧ್ಯಾಹ್ನದ ಉರಿಬಿಸಿಲಿನಲ್ಲಿ ಸಮಾರಂಭವು ಶುರುವಾಯಿತು. ಫೆಬ್ರವರಿ ತಿಂಗಳಲ್ಲೇ ಬಿಸಿಲಿನ ಧಗೆ. ಹಾಕಲಾಗಿದ್ದ ಶಾಮಿಯಾನವು ಕಾದು ಹಂಚಿನಂತಾಗಿತ್ತು. ಕಾರ್ಯಕರ್ತರು ಫ್ಯಾನ್ ತಂದಿಟ್ಟಿದ್ದರು. ವಿದ್ಯುತ್ತಿನ ಕಣ್ಣಾಮುಚ್ಚಾಲೆ ಆಟ ನಡೆದೇ ಇತ್ತು. ವೇದಿಕೆಯ ಮುಂಭಾಗದಲ್ಲಿ ಸಾವಿರಾರು ಭಕ್ತರು ನೆರೆದಿದ್ದರು. ಸಿಂಹಪಾಲು ಮಹಿಳೆಯರದು.

Add Asianetnews Kannada as a Preferred SourcegooglePreferred

ಅಲ್ಲೊಂದು ಬಿಳಿ ಬಣ್ಣದ ನಾಯಿ, ಮುಧೋಳ ನಾಯಿಯ ಮಾಟವನ್ನು ಹೋಲುವಂತಿತ್ತು. ದೇವರಿಗೆ ಎಡೆ ತರುವವರೊಂದಿಗೆ ಬಂದು ಅದರ ಹತ್ತಿರಕ್ಕೆ ಹೋಗಲು ಯತ್ನಿಸುತ್ತಿತ್ತು. ಅಲ್ಲಿದ್ದವರು ಕೈಯೆತ್ತುವುದರ ಮುಖಾಂತರ ‘ಹಚಾ’ ಅನ್ನುವುದ ರೊಂದಿಗೆ ಗದರಿಸುತ್ತಿದ್ದರು. ಆಗ ಅದು ಅಲ್ಲಿಂದ ಜಾಗ ಕೀಳುತ್ತಿತ್ತು. ೩-೪ ಜನರು ಗುಂಪಿನಲ್ಲಿ ಬಂದು ಭಾಗವಹಿಸುತ್ತಿದ್ದರು. ಕುಳಿತವರ ಕಣ್ಣಿಗೆ ಬೀಳಬಾರದೆಂದು ನಾಯಿಯ ತಂತ್ರವನ್ನು ಮಾಡಿದ್ದರು. ಗುಂಪಿನೊಳಗೆ ತೂರಿಕೊಂಡು ಬರಲು ಆರಂಭಿಸಿದರು. ಅವರು ಕುಳಿತಾಕ್ಷಣ ನಾಯಿಯು ಎಲ್ಲರ ಕಣ್ಣಿಗೆ ಬೀಳುತ್ತಿತ್ತು. ಅದರ ಉದ್ದೇಶವು ಹೇಗಾದರೂ ಮಾಡಿ, ಕರಿಗಡಬು ತಿನ್ನಬೇಕೆಂಬುದು. ನಾಯಿಯಲ್ಲೂ ಗ್ರಹಿಸುವ ಶಕ್ತಿ. ಅದರಲ್ಲಿ ಅದು ಪಾಸಾಗುತ್ತಿತ್ತು. ಆದರೆ ತಿನ್ನಲು ಹೋಗಿ ಜನರಿಂದ ಒದೆಸಿಕೊಳ್ಳುತ್ತಿತ್ತು. ಇದನ್ನೆಲ್ಲ ನೋಡುತ್ತಿದ್ದ ನನಗೆ ರಂಜನೆ ಆಗಿತ್ತು; ನಾಯಿಗೆ ಕರಿಗಡಬು ತಿನ್ನಲು ಆಗುತ್ತಿಲ್ಲವಲ್ಲ! ಎಂಬ ವಿಷಾದವು ಕಾಡುತ್ತಿತ್ತು. ಒಮ್ಮೆ ಸ್ವಾಮಿ ರಾಮತೀರ್ಥರು ಕಾಶಿಗೆ ಪ್ರಯಾಣಿಸುತ್ತಿದ್ದರು. ದಾರಿಯಲ್ಲಿ ಕತ್ತೆಯೊಂದು ನಿಸ್ತೇಜವಾಗಿ ಬಿದ್ದಿತ್ತು. ಅದಕ್ಕೆ ಏಳಲೂ ಆಗುತ್ತಿರಲಿಲ್ಲ. ಅದರ ಅಸಹಾಯಕತೆಯನ್ನು ನೋಡಿ ತಮ್ಮ ಕಮಂಡಲದಲ್ಲಿದ್ದ ಪವಿತ್ರ ಗಂಗೆಯನ್ನು ಅದಕ್ಕೆ ಕುಡಿಸುತ್ತಾರೆ. ‘ಕಾಶಿ ವಿಶ್ವೇಶ್ವರನೇ ಕತ್ತೆಯ ರೂಪದಲ್ಲಿ ಬಂದು ನನಗೆ ದರ್ಶನ ಕೊಟ್ಟಿದ್ದಾನೆ. ನಾನು ಧನ್ಯನಾದೆ’ ಎನ್ನುತ್ತ ಅಲ್ಲಿಂದ ಮರಳುತ್ತಾರೆ. ನಮ್ಮ ನಡುವೆ ಇಂಥನ ಆದರ್ಶದ ಉದಾಹರಣೆಗಳಿವೆ. ಪ್ರಾಣಿ ದಯೆ ತೋರಿದ ಸಂದರ್ಭಗಳು. ಸರ್ವ ದರ್ಶನ, ಧರ್ಮ, ಶಾಸ್ತ್ರಗಳು ಜೀವ ಪ್ರೀತಿಯನ್ನು ಬೋಧಿಸುತ್ತವೆ. ಅವುಗಳತ್ತ ಗಮನ ಕೊಡಬೇಕಷ್ಟೆ.