Asianet Suvarna News Asianet Suvarna News

ಮಕ್ಕಳು ಅವರಿಗಿಷ್ಟವಾದ ಪುಸ್ತಕ ಓದಿಕೊಳ್ಳಲಿ, ನಿಮಗೇನು ಕಷ್ಟ?

ಮಕ್ಕಳು ಯಾವ ಸ್ಕೂಲ್‍ಗೆ ಸೇರಬೇಕು ಎಂಬ ನಿರ್ಧಾರ ಪೋಷಕರದ್ದೇ ಆಗಿರಲಿ, ಯಾರೂ ಬೇಡ ಅನ್ನಲ್ಲ. ಆದರೆ, ಮಕ್ಕಳು ಪಠ್ಯೇತರ ಪುಸ್ತಕಗಳನ್ನು ಕೈಯಲ್ಲಿ ಹಿಡಿದು ಆಸಕ್ತಿಯಿಂದ ಓದುತ್ತಿದ್ದರೆ, ಅಲ್ಲೂ ಮೂಗು ತೂರಿಸಿ ಇಂಥದ್ದೇ ಪುಸ್ತಕ ಓದಬೇಕು ಎಂಬ ನಿರ್ಬಂಧ ವಿಧಿಸುವುದು ಎಷ್ಟು ಸರಿ?

Let the children to read their favourite books
Author
Bangalore, First Published Jan 29, 2020, 10:58 AM IST

ಮಕ್ಕಳು ಪಠ್ಯಪುಸ್ತಕ ಬಿಟ್ಟು ಕಥೆ ಅಥವಾ ಇನ್ನಿತರ ಪುಸ್ತಕಗಳನ್ನು ಕೈಯಲ್ಲಿ ಹಿಡಿದಿರುವುದನ್ನು ಕಂಡರೆ ಇಂದು ಅಚ್ಚರಿ ಮೂಡುತ್ತದೆ. ಏಕೆಂದರೆ, ಅಂಕಗಳ ಹಿಂದೆ ಬಿದ್ದಿರುವ ನಾವು, ಮಕ್ಕಳು ಬೇರೆ ಪುಸ್ತಕಗಳತ್ತ ಒಲವು ಹೆಚ್ಚಿಸಿಕೊಂಡರೆ ಎಲ್ಲಿ ಕಡಿಮೆ ಅಂಕ ಗಳಿಸುತ್ತಾರೇನೋ ಎಂಬ ಭಯಕ್ಕೆ ಬಿದ್ದು ಬಿಟ್ಟಿದ್ದೇವೆ. ಇಂಥ ಪರಿಸ್ಥಿತಿಯಲ್ಲಿ ಇತ್ತೀಚೆಗೆ ಬಾಲಿವುಡ್ ಮಾಜಿ ನಟಿ, ಅಂಕಣಗಾರ್ತಿ ಟ್ವಿಂಕಲ್ ಖನ್ನಾ ತಮ್ಮ ಪುತ್ರಿ ಕಥೆ ಪುಸ್ತಕ ಹಿಡಿದು ಓದುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೋಗೆ ‘ಮಕ್ಕಳ ಓದಿಗೆ ಯಾವ ಪುಸ್ತಕ ಸೂಕ್ತವೆಂದು ನೀವು ನಿರ್ಧರಿಸುವ ಬದಲು ಅವರಿಗೆ ಯಾವುದು ಇಷ್ಟವೋ ಅದನ್ನು ಓದಲು ಬಿಡಿ’ ಎಂಬ ಕ್ಯಾಪ್ಷನ್ ನೀಡುವ ಮೂಲಕ ಆಧುನಿಕ ಪೋಷಕರಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ.

ಎಲ್ಲರೊಂದಿಗೂ ಬೆರೆತು ಬಾಳಲು ಕಣ್ತುಂಬಾ ನಿದ್ರಿಸಿ

‘ಡವ್ ಪಿಲ್ಕೆ ಅವರ ‘ರಿಕ್ಕಿ ರಿಕೊಟ್ಟ ಮೈಟಿ ರೋಬೋಟ್’ ಸರಣಿಯ ಕಥೆಗಳನ್ನು ನಿತಾರಾ ಓದುತ್ತಿದ್ದಾಳೆ.ಇದು ಗ್ರಾಫಿಕ್ ಸರಣಿಯ ಕಾದಂಬರಿಯಾಗಿದ್ದು,ಇದರಲ್ಲಿ ಇಲಿಯೊಂದು ರೋಬೋಟ್ ನೆರವಿನಿಂದ ವಿಲನ್ ವಿರುದ್ಧ ಹೋರಾಡಿ ಜಗತ್ತನ್ನು ಹೇಗೆ ರಕ್ಷಿಸುತ್ತದೆ ಎಂಬ ಕಥೆಯಿದೆ’ಎಂದು ತನ್ನ ಮಗಳು ಓದುತ್ತಿರುವ ಪುಸ್ತಕದ ಮಾಹಿತಿ ಹಂಚಿಕೊಂಡಿದ್ದಾರೆ ಟ್ವಿಂಕಲ್. ಮಕ್ಕಳು ಅವರ ಆಸಕ್ತಿಯ ವಿಷಯಗಳನ್ನು ಓದಲು ನಿರ್ಬಂಧ ವಿಧಿಸುವುದು ಅವರ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯದ್ದಲ್ಲ. ಪ್ರತಿ ಪುಸ್ತಕದಿಂದಲೂ ಒಂದಿಷ್ಟು ಮಾಹಿತಿಯಂತೂ ಸಿಕ್ಕೇಸಿಗುತ್ತದೆ. ಹೀಗಿರುವಾಗ ಪೋಷಕರು ಪುಸ್ತಕ ಆಯ್ಕೆ ವಿಷಯದಲ್ಲಿ ತಮ್ಮ ನಿರ್ಧಾರಗಳನ್ನು ಮಕ್ಕಳ ಮೇಲೆ ಹೇರುವುದು ಖಂಡಿತಾ ಸರಿಯಲ್ಲ ಎಂಬುದು ಟ್ವಿಂಕಲ್ ಖನ್ನಾ ಅವರ ಸಂದೇಶದ ಹಿಂದಿರುವ ಕಾಳಜಿ.

ಮಕ್ಕಳು ಅಂದರೆ ಇಷ್ಟಾನೇ ಆಗಲ್ಲ! 

ಮರೆಯಾಗುತ್ತಿರುವ ಓದಿನ ಹವ್ಯಾಸ: ಇಂದಿನ ಗಜೆಟ್ ಯುಗದಲ್ಲಿ ಪೋಷಕರ ಜೊತೆಗೆ ಮಕ್ಕಳು ಕೂಡ ಮೊಬೈಲ್, ಟಿವಿಗೆ ಅಂಟಿಕೊಂಡು ಬಿಟ್ಟಿದ್ದಾರೆ. ದಿನಪತ್ರಿಕೆ,ಕಥೆ ಪುಸ್ತಕಗಳನ್ನು ಓದುವ ಅಭ್ಯಾಸವಾಗಲಿ,ಆಸಕ್ತಿಯಾಗಲಿ ಇಂದಿನ ಮಕ್ಕಳಲ್ಲಿ ಅಷ್ಟಾಗಿ ಕಾಣಿಸುತ್ತಿಲ್ಲ.ಇನ್ನು ಶಾಲೆಗಳಂತೂ ಅಂಕಗಳ ಬೆನ್ನು ಬಿದ್ದಿರುವ ಕಾರಣ ಅಲ್ಲಿಯೂ ಪಠ್ಯಪುಸ್ತಕಗಳನ್ನು ಹೊರತುಪಡಿಸಿ ಬೇರೆ ಪುಸ್ತಕಗಳ ಪರಿಚಯ ಮಾಡಿಸುವ ಕಾರ್ಯವೂ ಆಗುತ್ತಿಲ್ಲ.ಬಹುತೇಕ ಹೆತ್ತವರು ಕೂಡ ನನ್ನ ಮಗ, ಮಗಳು ಉತ್ತಮ ಅಂಕ ಗಳಿಸಿದರೆ ಸಾಕು,ಅವರ ಭವಿಷ್ಯ ಸುಭದ್ರವಾಗುತ್ತದೆ ಎಂಬ ಭಾವನೆ ಹೊಂದಿರುವ ಕಾರಣ ಪಠ್ಯಪುಸ್ತಕ ಬಿಟ್ಟು ಬೇರೆ ಬುಕ್‍ಗಳತ್ತ ಕಣ್ಣು ಹಾಯಿಸುವುದೇ ಬೇಡ ಎಂಬಂತಹ ನಿರ್ಧಾರಕ್ಕೆ ಬಂದಿದ್ದಾರೆ.ಇನ್ನೂ ಕೆಲವರು ಮಕ್ಕಳು ಏನು ಓದಬೇಕು ಎಂಬುದನ್ನು ತಾವೇ ನಿರ್ಧರಿಸುತ್ತಾರೆ. ಹೀಗಾಗಿ ಬುಕ್‍ಸ್ಟೋರ್‍ಗೆ ಹೋಗಿ ತಾವು ಬಯಸಿದ ಪುಸ್ತಕಗಳನ್ನು ಆಯ್ಕೆ ಮಾಡಿ,ಮಕ್ಕಳಿಗೆ ತಂದು ಕೊಟ್ಟು ಓದುವಂತೆ ಹೇಳುತ್ತಾರೆ. ಆದರೆ, ಮಕ್ಕಳಿಗೆ ಆ ಪುಸ್ತಕಗಳಲ್ಲಿ ಆಸಕ್ತಿಯಿಲ್ಲದೆ ಹೋದರೆ ಓದಬೇಕು ಎಂಬ ಬಯಕೆ ಮೂಡುವುದಾದರೂ ಹೇಗೆ? 

ಮಕ್ಕಳಲ್ಲಿ ದೇಶ ಪ್ರೇಮದ ಬೀಜ ಬಿತ್ತೋದು ಹೇಗೆ?

ಓದಿನಿಂದ ಎಷ್ಟೆಲ್ಲ ಲಾಭ: ‘ದೇಶ ಸುತ್ತಿ ನೋಡು, ಕೋಶ ಓದಿ ನೋಡು’ ಎಂಬ ಮಾತನ್ನು ನೀವು ಕೇಳಿರಬಹುದು. ಓದು ಜ್ಞಾನದ ಹಸಿವನ್ನು ನೀಗಿಸುವ ಜೊತೆಗೆ ಅರಿವನ್ನು ಹೆಚ್ಚಿಸುತ್ತದೆ. ಮಕ್ಕಳು ಬರೀ ಪಠ್ಯಪುಸ್ತಕಕ್ಕೆ ಅಂಟಿಕೊಂಡರೆ ಅದರಾಚೆಗಿನ ಹಲವು ಸಂಗತಿಗಳು ಅವರ ಅರಿವಿಗೆ ಬರುವುದೇ ಇಲ್ಲ. ಅದೇ ಸಾಹಿತ್ಯ, ಸಂಸ್ಕøತಿ, ವಿಜ್ಞಾನ, ಪರಿಸರಕ್ಕೆ ಸಂಬಂಧಿಸಿದ ಪುಸ್ತಕಗಳ ಕುರಿತು ಅವರಲ್ಲಿ ಅಭಿರುಚಿ ಮೂಡಿಸಿದರೆ ಅವರ ಜ್ಞಾನದ ಪರಿಧಿ ಹೆಚ್ಚುತ್ತದೆ. ಹೆಚ್ಚೆಚ್ಚು ಪುಸ್ತಕಗಳನ್ನು ಓದಿದಂತೆ ಹೊಸ ಹೊಸ ಪದಗಳ ಪರಿಚಯವಾಗುವ ಜೊತೆಗೆ ಭಾಷೆಯ ಮೇಲೆ ಉತ್ತಮ ಹಿಡಿತ ಸಿಗುತ್ತದೆ. ಓದಿನಿಂದ ಅನೇಕ ವಿಷಯಗಳ ಕುರಿತು ಮಾಹಿತಿ ಸಿಗುವ ಕಾರಣ ಮಕ್ಕಳಲ್ಲಿ ಸಹಜವಾಗಿ ಆತ್ಮವಿಶ್ವಾಸ ಹೆಚ್ಚುತ್ತದೆ. ಪಠ್ಯದಲ್ಲಿರುವ ವಿಷಯಗಳಿಗೆ ಹೊರತಾದ ಮಾಹಿತಿ ಮಕ್ಕಳನ್ನು ಅವರ ಸ್ನೇಹಿತರ ಗುಂಪಿನಲ್ಲಿ ಭಿನ್ನವಾಗಿ ಗುರುತಿಸಿಕೊಳ್ಳುವಂತೆ ಮಾಡುತ್ತದೆ. ಹೀಗಾಗಿ ಇನ್ನು ಮುಂದೆ ಮಕ್ಕಳು ಯಾವುದಾದರೂ ಪುಸ್ತಕ ಹಿಡಿದು ಓದುತ್ತ ಕುಳಿತರೆ, ಅವರನ್ನು ಡಿಸ್ಟರ್ಬ್ ಮಾಡದೆ ಅವರಷ್ಟಕ್ಕೆ ಬಿಡಿ. ಹಾಗೆಯೇ ಮಕ್ಕಳಿಗೆ ನೀವೇ ಪುಸ್ತಕ ಆರಿಸಿ ತಂದುಕೊಡುವ ಬದಲು ಬುಕ್‍ಸ್ಟಾಲ್‍ಗೆ ಮಕ್ಕಳನ್ನೇ ಕರೆದುಕೊಂಡು ಹೋಗಿ ಅವರ ಬಳಿಯೇ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಹೇಳಿ.

Follow Us:
Download App:
  • android
  • ios