ಮೇಘನಾ ಸುಧೀಂದ್ರ ಅವರ 'ಮಿಲೇನಿಯಲ್ ಅಮ್ಮ' ಕೃತಿಯು ತಾಯ್ತನದ ಸವಾಲುಗಳು, ಹಿರಿಮೆ, ನೋವು-ಸಂಕಟಗಳನ್ನು ಅನಾವರಣಗೊಳಿಸುತ್ತದೆ. ಅವಳಿ ಮಕ್ಕಳ ಹೆರಿಗೆ ಸಮಯದಲ್ಲಿ ಉಂಟಾದ ಎರಡು ತಲೆಮಾರಿನ ಸಂಪ್ರದಾಯಗಳ ತೊಳಲಾಟವನ್ನು ಲೇಖಕಿ ವಿವರಿಸಿದ್ದಾರೆ. 

ಬೆಂಗಳೂರು (ಆ.3): ತಾಯ್ತನದ ಹಿರಿಮೆ ದೊಡ್ಡದು. ಇದಕ್ಕೆ ಮೇಘನಾ ಸುಧೀಂದ್ರ ಅವರು ಸೊಗಸಾಗಿ ಅಕ್ಷರರೂಪ ನೀಡಿದ್ದಾರೆ ಎಂದು ‘ಕನ್ನಡಪ್ರಭ’ ಪುರವಣಿ ಸಂಪಾದಕ ಗಿರೀಶ್‌ರಾವ್‌ ಹತ್ವಾರ್‌ (ಜೋಗಿ) ಅಭಿಪ್ರಾಯಪಟ್ಟರು.

Add Asianetnews Kannada as a Preferred SourcegooglePreferred

‘ಹರಿವು ಬುಕ್ಸ್‌’ನಿಂದ ಬಸವನಗುಡಿಯ ವಾಡಿಯಾ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಓದುಗೆ ಸುಗ್ಗಿ’ ಮೂರು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೇಘನ ಸುಧೀಂದ್ರ ಅವರ ತಾಯ್ತನದ ಅನುಭವಗಳನ್ನು ಆಧರಿಸಿದ ‘ಮಿಲೇನಿಯಲ್ ಅಮ್ಮ’ ಕೃತಿಯ ಕುರಿತು ಮಾತನಾಡಿದ ಅವರು, ಈ ಕೃತಿಯನ್ನು ಓದಿದರೆ ತಾಯ್ತನ ಎಷ್ಟು ಸವಾಲಿನದು, ತಾಯ್ತನದ ಹಿರಿಮೆ, ನೋವು-ಸಂಕಟ ಏನು ಎನ್ನುವುದು ಪುರುಷನಾಗಿ ನನಗೆ ತಿಳಿಯಿತು ಎಂದು ಅಭಿಪ್ರಾಯಪಟ್ಟರು.

ಲೇಖಕಿ ಮೇಘನಾ ಸುಧೀಂದ್ರ ಮಾತನಾಡಿ, ಅವಳಿ ಮಕ್ಕಳ ಹೆರಿಗೆ ಸಮಯದಲ್ಲಿ ಉಂಟಾದ ಎರಡು ತಲೆಮಾರಿನ ಸಂಪ್ರದಾಯ, ಆಚಾರ-ವಿಚಾರಗಳು ಮತ್ತು ವೈದ್ಯಕೀಯ ಚಿಕಿತ್ಸೆ ನಡುವಿನ ಅಂತರ, ಈ ಎರಡರ ನಡುವಿನ ಆಯ್ಕೆಯ ತೊಳಲಾಟದ ಬಗ್ಗೆ ವಿವರಿಸಿದರು.

ಹೃದಯ ಶಿವ ಅವರ ಕಥೆಗಳ ಸಂಕಲನವಾದ ‘ಸೂಪರ್ ಗಾಡ್ ಸಣ್ಣಯ್ಯ’ ಮತ್ತು ದಾದಾಪೀರ್ ಜೈಮನ್ ಅವರ ಬೆಂಗಳೂರಿನ ಅನುಭವಗಳನ್ನು ಒಳಗೊಂಡ ‘ಜಂಕ್ಷನ್ ಪಾಯಿಂಟ್’ ಕೃತಿಗಳನ್ನು ಸಹ ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು.