ಮಕ್ಕಳ ಡೈಹೇರಿಯಾಕ್ಕೆ ಮದ್ದಿದು...
ಕೊಳಕು ಕೈಯಲ್ಲಿ ನೇರವಾಗಿಯೇ ಮಕ್ಕಳು ಏನಾದ್ರೂ ತಿಂದು ಬಿಡುತ್ತಾರೆ. ಬುದ್ಧಿ ಬರೋವರೆಗೆ ಅವರನ್ನು ಹಿಡಿಯುವುದೇ ಕಷ್ಟ. ಆಗ ವಾಂತಿ-ಭೇದಿಯಂಥ ಸಮಸ್ಯೆಗಳು ಕಾಡುವುದು ಸಹಜ. ಅದಕ್ಕೇನು ಕಾರಣ? ಪರಿಹಾರವೇನು?
ಮಕ್ಕಳಲ್ಲಿ ಡೈಹೇರಿಯಾ ಸಮಸ್ಯೆ ಸಾಮಾನ್ಯವಾಗಿ ಕಾಡುತ್ತದೆ. ಇದಕ್ಕೆ ಮುಖ್ಯ ಕಾರಣ ಮಕ್ಕಳು ತುಂಬಾ ಸೂಕ್ಷ್ಮವಾಗಿರೋದರಿಂದ ತಿನ್ನುವ ಆಹಾರಗಳು ಅವರಿಗೆ ಹಿಡಿಸುವುದಿಲ್ಲ. ಈ ಕಾರಣದಿಂದ ಡೈಹೇರಿಯಾ ಸಮಸ್ಯೆ ಕಾಡುತ್ತದೆ.
ಲಕ್ಷಣಗಳು :
- ಹೆಚ್ಚು ಹೆಚ್ಚು ಬಾಯಾರಿಕೆ.
- ಕಿರಿಕಿರಿಯಾಗಿ ಮಕ್ಕಳು ಅಳುತ್ತವೆ.
- ಮಕ್ಕಳಿಗೆ ಆಯಾಸ ಹೆಚ್ಚುತ್ತದೆ. ದೇಹ ಒಣಗುತ್ತದೆ.
- ಬಾಯಿ, ಗಂಟಲು, ನಾಲಿಗೆ ಒಣಗಲು ಆರಂಭಿಸುತ್ತದೆ. ಈ ಸಂದರ್ಭದಲ್ಲಿ ಮಕ್ಕಳಿಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ನೀಡಿ.
- ಡೈಹೇರಿಯಾ ಸಮಸ್ಯೆ ಹೆಚ್ಚಾದಲ್ಲಿ ಮಕ್ಕಳು ಮೂರ್ಛೆ ಹೋಗುವ ಸಾಧ್ಯತೆಯೂ ಇದೆ.
ಏನು ಮಾಡಬೇಕು?
- ಮಕ್ಕಳಿಗೆ ಒಆರ್ಎಸ್ ನೀಡಿ.
- ನೀರಿಗೆ ಉಪ್ಪು ಮತ್ತು ಸಕ್ಕರೆ ಬೆರೆಸಿ ನೀಡಿ. ಇದು ಮಕ್ಕಳ ದೇಹದಲ್ಲಿ ನೀರು ಹಾಗೆಯೇ ಉಳಿಯುವಂತೆ ಮಾಡುತ್ತದೆ.
- ಬೇಯಿಸಿದ ಸಬ್ಬಕ್ಕಿ, ಉಪ್ಪು ಮಿಶ್ರಿತ ಮಜ್ಜಿಗೆ, ಎಳೆನೀರು, ನೀರು ಕ್ಯಾರೆಟ್ ಸೂಪ್ ನೀಡಿದರೆ ಮಕ್ಕಳಿಗೆ ಶಕ್ತಿ ಬರುತ್ತದೆ.
- ಭೇದಿಯಿಂದ ಅನುಭವಿಸುವ ಮಕ್ಕಳಿಗೆ ಆಹಾರ ನೀಡುವುದನ್ನು ನಿಲ್ಲಿಸಬೇಡಿ. ಬದಲಾಗಿ ಹೆಚ್ಚು ಹೆಚ್ಚು ದ್ರವಾಹಾರ ನೀಡಿ.
- ಎದೆ ಹಾಲು ಉತ್ತಮ ಪೌಷ್ಟಿಕಾಂಶವನ್ನು ಹೊಂದಿರುತ್ತದೆ. ಆದುದರಿಂದ ಇದನ್ನು ಮಕ್ಕಳಿಗೆ ನೀಡುತ್ತಿರಿ.
- ಮಕ್ಕಳು ತಿನ್ನಲು ಆರಂಭಿಸಿದ್ದರೆ, ಅಂಥ ಮಕ್ಕಳಿಗೆ ಡೈಹೇರಿಯಾ ಸಮಸ್ಯೆ ಉಂಟಾದಾಗ ಅನ್ನವನ್ನು ಚೆನ್ನಾಗಿ ಬೇಯಿಸಿ ಮುದ್ದೆ ಮಾಡಿ ನೀಡಿ.
- ಸಮಸ್ಯೆಯ ತೀವ್ರತೆ ಹೆಚ್ಚಾದರೆ ಕೂಡಲೇ ವೈದ್ಯರನ್ನು ಕಂಡು ಚಿಕಿತ್ಸೆ ಆರಂಭಿಸಿ.