ಎಂಜಿನಿಯರಿಂಗ್ ಓದಿ ಹಲವು ವರ್ಷಗಳ ಕಾಲ ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿದ್ದ ವ್ಯಕ್ತಿಯೊಬ್ಬರು ನಿವೃತ್ತಿಯ ಬಳಿಕ ಕೃಷಿಯತ್ತ ಮುಖ ಮಾಡಿದರು. ಆದರೆ ಕೇವಲ ಕೃಷಿ ಮಾಡುವುದಕ್ಕಿಂತ, ಬೆಳೆದ ಉತ್ಪನ್ನಗಳಲ್ಲಿ ಹೆಚ್ಚಿನ ಆದಾಯ ಗಳಿಸುವ ಹೊಸ ದಾರಿ ಕಂಡುಕೊಂಡರು.

ಎಂಜಿನಿಯರಿಂಗ್ ಓದಿ ಹಲವು ವರ್ಷಗಳ ಕಾಲ ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿದ್ದ ವ್ಯಕ್ತಿಯೊಬ್ಬರು ನಿವೃತ್ತಿಯ ಬಳಿಕ ಕೃಷಿಯತ್ತ ಮುಖ ಮಾಡಿದರು. ಆದರೆ ಕೇವಲ ಕೃಷಿ ಮಾಡುವುದಕ್ಕಿಂತ, ಬೆಳೆದ ಉತ್ಪನ್ನಗಳಲ್ಲಿ ಹೆಚ್ಚಿನ ಆದಾಯ ಗಳಿಸುವ ಹೊಸ ದಾರಿ ಕಂಡುಕೊಂಡರು. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊಲ್ಲಿಪಾರ ಗ್ರಾಮದ ಜೆ. ಶ್ರೀನಿವಾಸ ರೆಡ್ಡಿ ಅವರ ಕಥೆ ಇದು. ಹಣ್ಣು, ತರಕಾರಿ ಮತ್ತು ಸೊಪ್ಪುಗಳನ್ನು ಡಿಹೈಡ್ರೇಟ್ ಮಾಡಿ ದೀರ್ಘಕಾಲ ಸಂಗ್ರಹಿಸಬಹುದಾದ ಉತ್ಪನ್ನಗಳನ್ನಾಗಿ ಪರಿವರ್ತಿಸುತ್ತಿರುವ ಅವರು, ಕೆಲವು ಉತ್ಪನ್ನಗಳನ್ನು ಕೆಜಿಗೆ ₹1,000ವರೆಗೆ ಮಾರಾಟ ಮಾಡುತ್ತಿದ್ದಾರೆ.

3 ದಶಕಗಳ ಡಿಫೆನ್ಸ್ ಕ್ಷೇತ್ರದ ಅನುಭವ

ಶ್ರೀನಿವಾಸ ರೆಡ್ಡಿ 1982ರಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದರು. ಬಳಿಕ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದ ಅವರು, ನಂತರ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ನಲ್ಲಿ ಸುಮಾರು 18 ವರ್ಷಗಳ ಕಾಲ ಕೆಲಸ ಮಾಡಿದರು. ಮುಂದೆ ಖಾಸಗಿ ಡಿಫೆನ್ಸ್ ಕಂಪನಿ VAM Technologiesನಲ್ಲಿ ಕ್ಷಿಪಣಿ ಅಸೆಂಬ್ಲಿ ಮತ್ತು ರಫ್ತು ಸಂಬಂಧಿತ ಕೆಲಸಗಳಲ್ಲಿ ತೊಡಗಿಸಿಕೊಂಡರು. ಹೀಗೆ ಮೂರು ದಶಕಗಳಿಗೂ ಹೆಚ್ಚು ಕಾಲ ಮ್ಯಾನುಫ್ಯಾಕ್ಚರಿಂಗ್ ಮತ್ತು ಡಿಫೆನ್ಸ್ ಕ್ಷೇತ್ರದಲ್ಲಿ ಕೆಲಸ ಮಾಡಿದ ಬಳಿಕ 2020ರಲ್ಲಿ ನಿವೃತ್ತರಾದರು. 60ನೇ ವಯಸ್ಸಿನಲ್ಲಿ ಹೈದರಾಬಾದ್‌ನಿಂದ ತಮ್ಮ ಸ್ವಗ್ರಾಮ ಕೊಲ್ಲಿಪಾರಕ್ಕೆ ಮರಳಿದರು.

ಒಂದು ಎಕರೆ ಜಮೀನಿನಲ್ಲಿ ಕೃಷಿ ಆರಂಭ

ತಮ್ಮ ಕುಟುಂಬದ ಪಾರಂಪರಿಕ ಜಮೀನಿನಲ್ಲಿ ಮೊದಲು ನೈಸರ್ಗಿಕ ಕೃಷಿ ಆರಂಭಿಸಿದರು. ಒಂದು ಎಕರೆ ಜಮೀನಿನಲ್ಲಿ ನಿಂಬೆ, ಮೆಣಸಿನಕಾಯಿ ಮತ್ತು ನಂತರ ಅರಿಶಿನ ಬೆಳೆಯಲು ಶುರುಮಾಡಿದರು. ಆದರೆ ಕೃಷಿ ಮಾಡುವಾಗ ಒಂದು ಪ್ರಮುಖ ಸಮಸ್ಯೆ ಅವರ ಗಮನಕ್ಕೆ ಬಂತು. ಗ್ರಾಮದಲ್ಲಿ ಬಾಳೆಹಣ್ಣು, ಅರಿಶಿನ ಮತ್ತು ವಿವಿಧ ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತು. ಮಾರುಕಟ್ಟೆಗೆ ಒಂದೇ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಉತ್ಪನ್ನ ಬಂದಾಗ ಬೆಲೆ ಕುಸಿಯುತ್ತಿತ್ತು. ಇದರಿಂದ ರೈತರು ಕಡಿಮೆ ಬೆಲೆಗೆ ಉತ್ಪನ್ನ ಮಾರಾಟ ಮಾಡುವ ಅನಿವಾರ್ಯತೆ ಎದುರಿಸುತ್ತಿದ್ದರು. ಇದಕ್ಕೆ ಪರಿಹಾರ ಕಂಡುಕೊಳ್ಳಲು ಶ್ರೀನಿವಾಸ ರೆಡ್ಡಿ ಡಿಹೈಡ್ರೇಷನ್ ತಂತ್ರಜ್ಞಾನದತ್ತ ಮುಖ ಮಾಡಿದರು.

₹10 ಸಾವಿರದ ಯಂತ್ರದಿಂದ ಹೊಸ ಉದ್ಯಮ

ಸುಮಾರು ನಾಲ್ಕು ವರ್ಷಗಳ ಹಿಂದೆ ಅವರು ಕೇವಲ ₹10,000ಕ್ಕೆ 2 ಅಡಿ × 2 ಅಡಿ ಗಾತ್ರದ ಸೋಲಾರ್ ಡ್ರೈಯರ್ ಖರೀದಿಸಿದರು. ಅದರ ಮೂಲಕ ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳಲು ಪ್ರಯೋಗ ಆರಂಭಿಸಿದರು. ನಂತರ ತಾವೇ ದೊಡ್ಡದಾದ 4 ಅಡಿ × 8 ಅಡಿ ಟೇಬಲ್‌ಟಾಪ್ ಸೋಲಾರ್ ಡ್ರೈಯರ್ ನಿರ್ಮಿಸಿಕೊಂಡರು. ಆದರೆ ಸೋಲಾರ್ ಡ್ರೈಯರ್‌ಗೆ ಕೆಲವು ಮಿತಿಗಳಿದ್ದವು. ರಾತ್ರಿ ವೇಳೆ ತೇವಾಂಶದಿಂದ ಉತ್ಪನ್ನದಲ್ಲಿ ಫಂಗಸ್ ಉಂಟಾಗುವ ಸಾಧ್ಯತೆ ಇತ್ತು. ಅವರ ಪ್ರದೇಶದಲ್ಲಿ ವರ್ಷಕ್ಕೆ ಸುಮಾರು 200 ದಿನ ಮಾತ್ರ ಸಾಕಷ್ಟು ಸೂರ್ಯನ ಬೆಳಕು ಸಿಗುತ್ತಿತ್ತು. ಹೀಗಾಗಿ ಮಳೆಗಾಲ ಮತ್ತು ಚಳಿಗಾಲದಲ್ಲಿ ಉತ್ಪಾದನೆ ಮುಂದುವರಿಸುವುದು ಕಷ್ಟವಾಗುತ್ತಿತ್ತು.

ಬಳಿಕ ಖರೀದಿಸಿದರು 100 ಕೆಜಿ ಸಾಮರ್ಥ್ಯದ ಎಲೆಕ್ಟ್ರಿಕ್ ಡ್ರೈಯರ್

ಸಮಸ್ಯೆಗೆ ಪರಿಹಾರವಾಗಿ 2025ರ ಜನವರಿಯಲ್ಲಿ ಶ್ರೀನಿವಾಸ ರೆಡ್ಡಿ 100 ಕೆಜಿ ತಾಜಾ ಉತ್ಪನ್ನ ಸಂಸ್ಕರಿಸುವ ಸಾಮರ್ಥ್ಯದ ಎಲೆಕ್ಟ್ರಿಕ್ ಡಿಹೈಡ್ರೇಟರ್ ಖರೀದಿಸಿದರು. ಈಗ ಅವರು ಸೋಲಾರ್ ಮತ್ತು ಎಲೆಕ್ಟ್ರಿಕ್ ಡ್ರೈಯರ್ ಎರಡನ್ನೂ ಬಳಸುತ್ತಿದ್ದಾರೆ. ಮೊದಲು ಎಲೆಕ್ಟ್ರಿಕ್ ಡ್ರೈಯರ್‌ನಲ್ಲಿ ಉತ್ಪನ್ನವನ್ನು ಬಿಸಿ ಮಾಡಿ, ನಂತರ ಸೋಲಾರ್ ಡ್ರೈಯರ್‌ನಲ್ಲಿ ಮತ್ತಷ್ಟು ಒಣಗಿಸುತ್ತಾರೆ. ಇದರಿಂದ ತಾಪಮಾನವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ವಿಶೇಷವಾಗಿ ಮಾವಿನಹಣ್ಣಿನಂತಹ ಉತ್ಪನ್ನಗಳಲ್ಲಿ ನೈಸರ್ಗಿಕ ಬಣ್ಣ ಮತ್ತು ರುಚಿಯನ್ನು ಉಳಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

100 ಕೆಜಿ ತರಕಾರಿ, ಸಿಗುವುದು ಸುಮಾರು 10 ಕೆಜಿ ಡಿಹೈಡ್ರೇಟ್ ಉತ್ಪನ್ನ

ಡಿಹೈಡ್ರೇಷನ್ ಪ್ರಕ್ರಿಯೆಯಲ್ಲಿ ಉತ್ಪನ್ನದಲ್ಲಿರುವ ನೀರನ್ನು ತೆಗೆದುಹಾಕಲಾಗುತ್ತದೆ. ಶ್ರೀನಿವಾಸ ರೆಡ್ಡಿ ಅವರ ಪ್ರಕಾರ, ಸಾಮಾನ್ಯವಾಗಿ 100 ಕೆಜಿ ತಾಜಾ ಹಣ್ಣು ಅಥವಾ ತರಕಾರಿಗಳಿಂದ ಸುಮಾರು 10 ಕೆಜಿ ಡಿಹೈಡ್ರೇಟ್ ಉತ್ಪನ್ನ ಸಿಗುತ್ತದೆ. ಆದರೆ ಬೆಳೆಗೆ ಅನುಗುಣವಾಗಿ ಪ್ರಮಾಣ ಬದಲಾಗುತ್ತದೆ. ನೀರಿನ ಅಂಶ ಹೆಚ್ಚಿರುವ ಟೊಮೆಟೊದಲ್ಲಿ 100 ಕೆಜಿಗೆ ಕೇವಲ ಸುಮಾರು 5 ಕೆಜಿ ಉತ್ಪನ್ನ ಸಿಗಬಹುದು. ಚಿಕ್ಕು ಮತ್ತು ಪಪ್ಪಾಯಿಯಲ್ಲಿ ರಿಕವರಿ ಪ್ರಮಾಣ ಉತ್ತಮವಾಗಿರುತ್ತದೆ. ಇದರಿಂದ ಉತ್ಪನ್ನದ ತೂಕ ಮತ್ತು ಗಾತ್ರ ಕಡಿಮೆಯಾಗುತ್ತದೆ. ಪರಿಣಾಮವಾಗಿ ಸಂಗ್ರಹಣೆ ಮತ್ತು ಸಾಗಣೆ ಸುಲಭವಾಗುತ್ತದೆ.

ಕೆಜಿಗೆ ₹1,000ವರೆಗೆ ಮಾರಾಟ

ಇದೀಗ ಶ್ರೀನಿವಾಸ ರೆಡ್ಡಿ ಸುಮಾರು 35ರಿಂದ 40 ಬಗೆಯ ಡಿಹೈಡ್ರೇಟ್ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಹಣ್ಣುಗಳು, ತರಕಾರಿಗಳು ಮಾತ್ರವಲ್ಲದೆ ಕರಿಬೇವು, ನುಗ್ಗೆ ಸೊಪ್ಪು, ಗೊಂಗೂರ, ಪುದೀನಾ ಸೇರಿದಂತೆ ಹಲವು ಉತ್ಪನ್ನಗಳನ್ನು ಸಂಸ್ಕರಿಸುತ್ತಿದ್ದಾರೆ. ಅವರ ಉತ್ಪನ್ನಗಳ ಬೆಲೆ ಕೂಡ ಗಮನ ಸೆಳೆಯುತ್ತದೆ.

ಒಣಗಿಸಿದ ಮಾವಿನಹಣ್ಣು – ₹1,000 ಪ್ರತಿ ಕೆಜಿ

ಡಿಹೈಡ್ರೇಟ್ ಬೀಟ್‌ರೂಟ್ – ಸುಮಾರು ₹800 ಪ್ರತಿ ಕೆಜಿ

ಡಿಹೈಡ್ರೇಟ್ ಕ್ಯಾರೆಟ್ – ಸುಮಾರು ₹800 ಪ್ರತಿ ಕೆಜಿ

ಟೊಮೆಟೊ ಉತ್ಪನ್ನಗಳು – ₹600ರಿಂದ ₹700 ಪ್ರತಿ ಕೆಜಿ

ಹಸಿ ಬಾಳೆಹಣ್ಣಿನ ಪುಡಿ – ಸುಮಾರು ₹600 ಪ್ರತಿ ಕೆಜಿ