ಗಣೇಶ ತರುವ ಮುನ್ನ ಈ 10 ವಿಷಯಗಳು ನೆನಪಿರಲಿ...
ಮುಂದಿನ ವಾರ ಗಣೇಶನ ಹಬ್ಬ. ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಒತ್ತು ನೀಡುವುದರೊಂದಿಗೆ, ಇನ್ನೂ ಹತ್ತು ಹಲವು ವಿಷಯಗಳ ಕಡೆಗೆ ಗಮನಿಸಬೇಕು. ಏನವು?
ಮಕ್ಕಳಿಗೆ ಮನೆಯಲ್ಲಿ ಗಣೇಶನ್ನು ಕೂರಿಸುವುದು ಎಂದರೆ ಸಂಭ್ರಮವೊ ಸಂಭ್ರಮ. ಸಂಪ್ರದಾಯದೊಂದಿಗೆ, ಮನಕ್ಕೆ ಖುಷಿ ನೀಡುವ ಗಣೇಶ ಮೂರ್ತಿ ತರುವುದೆಂದರೆ ಪೋಷಕರಿಗೂ ಎಲ್ಲಿಲ್ಲದ ಖುಷಿ. ಆದರೆ, ಗಣೇಶ ವಿಗ್ರಹವನ್ನು ಕೂರಿಸುವುದೆಂದರೆ ಮಕ್ಕಳಾಟವಲ್ಲ. ಗಣೇಶನನ್ನು ತರುವಾಗ ವಿಘ್ನವಾದರೆ ಅಥವಾ ವಿರೂಪಗೊಂಡ ಗಣೇಶ ಮೂರ್ತಿಯನ್ನು ಕೂರಿಸಬಾರದು. ಕೆಲವು ವಿಷಯಗಳ ಕಡೆ ಗಮನಿಸದೇ ಹೋದಲ್ಲಿ, ಅಪಾಯ ಕಟ್ಟಿಟ್ಟ ಬುತ್ತಿ. ಏನವು?
- ಮನೆಯಲ್ಲಿ ಗಣೇಶನನ್ನು ಕೂರಿಸುವ ಮುನ್ನ ವಾಸ್ತುವಿನ ಬಗ್ಗೆ ಅರಿತುಕೊಳ್ಳಿ.
- ಬಿಳಿ ಬಣ್ಣದ ಗಣೇಶನ ಮೂರ್ತಿ ಅಥವಾ ಪೋಟೋ ಮನೆಗೆ ತಂದರೆ ಯಶಸ್ಸು, ಕೀರ್ತಿ, ಸುಖ ಮತ್ತು ಸಂತೋಷ ಹೆಚ್ಚುತ್ತದೆ.
- ಹೊಸ ವ್ಯಾಪಾರ ಆರಂಭಿಸಿದರೆ, ಅಭಿವೃದ್ದಿ ಬೇಕು ಎನ್ನುವವರು ಮನೆಯಲ್ಲಿ ಕುಂಕುಮ ಅಥವಾ ಸಿಂಧೂರ ಬಣ್ಣದ ಗಣಪತಿಯನ್ನು ಪೂಜಿಸಿದರೆ ಒಳ್ಳೆಯದಾಗುತ್ತದೆ.
- ಕುಳಿತಿರುವ ಗಣೇಶ ಮೂರ್ತಿಯಿಂದ ಮನೆಯ ಅದೃಷ್ಟ ಮತ್ತು ಯಶಸ್ಸು ಹೆಚ್ಚುತ್ತದೆ.
- ಎಡ ಸೊಂಡಿಲು ಬಾಗಿರುವ ಗಣೇಶನ ವಿಗ್ರಹದಿಂದ ಕೋರಿಕೆಗಳು ಈಡೇರುತ್ತವೆ. ಸೊಂಡಿಲು ಬಲಗಡೆ ಬಾಗಿದ್ದರೆ ಕಷ್ಟ ಹೆಚ್ಚುತ್ತದೆ.
- ಕೆಲಸ ಮಾಡುವ ಸ್ಥಳದಲ್ಲಿ ನಿಂತಿರುವ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿದರೆ, ಉದ್ಯೋಗಿಗಳ ಶಕ್ತಿ, ಹುಮ್ಮಸ್ಸು ಹೆಚ್ಚುತ್ತದೆ.
- ಗಣೇಶನ ಮೂರ್ತಿಯಲ್ಲಿ ಮೋದಕ ಮತ್ತು ಇಲಿ ಹೊಂದಿದ್ದರೆ ಮಂಗಳಕರ.
- ದೇವರ ಕೋಣೆಯಲ್ಲಿ ಒಂದಕ್ಕಿಂತ ಹೆಚ್ಚಾಗಿ ಗಣೇಶನ ವಿಗ್ರಹಗಳನ್ನಿಡಬಾರದು. ಅದರಿಂದ ಗಣೇಶನ ಪತ್ನಿಯರಾದ ರಿದ್ಧಿ ಮತ್ತು ಸಿದ್ದಿ ಅಸಮಾಧಾನಗೊಂಡು ಅತೃಪ್ತರಾಗುತ್ತಾರೆ ಎಂಬ ನಂಬಿಕೆ ಇದೆ.
- ಗಣೇಶನ ವಿಗ್ರಹಕ್ಕೆ ದಿನವೂ ಗರಿಕೆ ಹುಲ್ಲನ್ನು ಅರ್ಪಿಸಿ 'ಓಂ ಗಂ ಗಣಪತಯೇ ನಮಃ' ಎಂದು ಪೂಜಿಸಿದರೆ, ಯಶಸ್ಸು ಕೈ ಹಿಡಿಯುತ್ತದೆ.
- ಗಣೇಶನನ್ನು ಸ್ವಸ್ತಿಕ ಚಿಹ್ನೆಯೊಂದಿಗೆ ಪೂಜಿಸಿದರೆ ಯಾವುದೇ ವಾಸ್ತು ಸಮಸ್ಯೆ ಇದ್ದರೂ ನಿವಾರಣೆಯಾಗುತ್ತದೆ. ಇದನ್ನು ಮನೆಯ ಪ್ರವೇಶ ದ್ವಾರದಲ್ಲಿ ಹಾಕಿದರೆ ಮನೆಗೆ ಯಾವ ಕೆಟ್ಟ ದೃಷ್ಟಿಯೂ ತಾಕುವುದಿಲ್ಲ.