ಉತ್ತರದ ರಾಜ್ಯಗಳಾದ ಗುಜರಾತ್ ರಾಜಸ್ತಾನದಲ್ಲಿ ಹೈನುಗಾರರನ್ನು ಸಂಕಷ್ಟಕ್ಕೆ ತಳ್ಳಿದ ಜಾನುವಾರುಗಳ ಜೀವಕ್ಕೆ ಎರವಾಗಿರುವ ಚರ್ಮ ಗಂಟು ರೋಗ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗೂ ವ್ಯಾಪಿಸಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 
ಚಿಕ್ಕಮಗಳೂರು: ಉತ್ತರದ ರಾಜ್ಯಗಳಾದ ಗುಜರಾತ್ ರಾಜಸ್ತಾನದಲ್ಲಿ ಹೈನುಗಾರರನ್ನು ಸಂಕಷ್ಟಕ್ಕೆ ತಳ್ಳಿದ ಜಾನುವಾರುಗಳ ಜೀವಕ್ಕೆ ಎರವಾಗಿರುವ ಚರ್ಮ ಗಂಟು ರೋಗ ರಾಜ್ಯದ ಉತ್ತರ ಕರ್ನಾಟಕದಲ್ಲಿಯೂ ಕಾಣಿಸಿಕೊಂಡಿತ್ತು. ಈಗ ಇದು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗೂ ವ್ಯಾಪಿಸಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ. ಜಿಲ್ಲೆಯ ಕಡೂರು, ಚಿಕ್ಕಮಗಳೂರು ಮತ್ತು ನರಸಿಂಹರಾಜಪುರ ತಾಲೂಕಿನಲ್ಲಿ ಒಟ್ಟು 834 ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಒಂದು ಜಾನುವಾರು ಬಲಿ, 8 ಜಾನುವಾರಗಳಿಗೆ ಚಿಕಿತ್ಸೆ

ಜಾನುವಾರಗಳಿಗೆ ಚರ್ಮ ಗಂಟುರೋಗ (Lampi skin decease) ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರೈತಾಪಿ ವರ್ಗದಲ್ಲಿ ಆತಂಕ ಹೆಚ್ಚಾಗಿದೆ. ಜಿಲ್ಲೆಯಲ್ಲಿ 834 ಜಾನುವಾರುಗಳಿಗೆ ಚರ್ಮ ಗಂಟುರೋಗ ಕಾಣಿಸಿಕೊಂಡಿದ್ದು 1 ಜಾನುವಾರು ಸಾವಪ್ಪಿದೆ. 826 ಜಾನುವಾರುಗಳು ಗುಣಮುಖವಾಗಿವೆ. 8 ಚಿಕಿತ್ಸೆ ಪಡೆದುಕೊಳ್ಳುತ್ತಿವೆ. ಜಿಲ್ಲೆಯಲ್ಲಿ ಒಟ್ಟು 3,24, 369 ಜಾನುವಾರುಗಳಿದ್ದು, ಗೋಟ್ಪಾಕ್ಸ್ ವೈರಸ್ ಇದಾಗಿದೆ. ಕಡೂರು ತಾಲೂಕಿನ ದೇವನೂರು ಮತಿಘಟ್ಟ ಪಶು ಆಸ್ಪತ್ರೆ ವ್ಯಾಪ್ತಿಯಲ್ಲಿ 827 ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, 825 ಜಾನುವಾರುಗಳು ಗುಣವಾಗಿವೆ. 1 ಜಾನುವಾರು ಚಿಕಿತ್ಸೆಯಲ್ಲಿದೆ, ಮತ್ತೊಂದು ಅಸು ನೀಗಿದೆ. ಚಿಕ್ಕಮಗಳೂರು (Chikkamagaluru) ತಾಲೂಕಿನ ಬೆಳವಾಡಿ (belawadi), ಮಾಚೇನಹಳ್ಳಿ ಪಶು ಆಸ್ಪತ್ರೆಯ (Veterinary Hospital) ವ್ಯಾಪ್ತಿಯಲ್ಲಿ 6 ಜಾನುವಾರುಗಳು ಮತ್ತು ನರಸಿಂಹರಾಜಪುರ ತಾಲೂಕಿನಲ್ಲಿ 1 ಜಾನುವಾರಿಗೆ ಚರ್ಮಗಂಟು ರೋಗ ಉಂಟಾಗಿದ್ದು, ಪಶು ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.

ಚರ್ಮಗಂಟಿಗೆ ಬಲಿಯಾದ ಜಾನುವಾರಿಗೆ ಪರಿಹಾರ: ಸಿಎಂ ಬೊಮ್ಮಾಯಿ ಘೋಷಣೆ

ಆತಂಕ ಬೇಡ ಈ ಕ್ರಮ ಕೈಗೊಳ್ಳಿ

ಚರ್ಮಗಂಟು ರೋಗ ವೈರಸ್‌ ಕಾಯಿಲೆ ಆಗಿದ್ದು, ನೊಣಗಳು(Flies), ಉಣ್ಣೆಯಿಂದ ಕಾಯಿಲೆ ಬರುತ್ತದೆ. ಇದು ಸಿಡುಬು ಜಾತಿಯ ರೋಗವಾಗಿದೆ. ಈ ರೋಗವು ಎಮ್ಮೆಗಳಿಗೆ ಬರುವುದು ಕಡಿಮೆ. ಬಂದರೂ ಅದು ಅಪರೂಪವಾಗುತ್ತದೆ. ರೋಗ ಬಂದಿರುವ ಜಾನುವಾರುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರೆದೊಯ್ಯಬಾರದು. ಜಾನುವಾರು ಜಾತ್ರೆಗಳಿಗೆ ವೈರಸ್‌ ಕಾಣಿಸಿಕೊಂಡಿರುವ ಜಾನುವಾರುಗಳನ್ನು ಹೊಡೆದುಕೊಂಡು ಹೋಗಬಾರದು. ಚರ್ಮ ಗಂಟುರೋಗ ಬಂದ ಜಾನುವಾರುಗಳನ್ನು ಕೊಟ್ಟಿಗೆಯ ಇತರೆ ಜಾನುವಾರುಗಳೊಂದಿಗೆ ಕಟ್ಟಬಾರದು. ಮುಖ್ಯವಾಗಿ ಕೊಟ್ಟಿಗೆಯನ್ನು ಶುಚಿಯಾಗಿಡಲು ಹೆಚ್ಚಿನ ಗಮನ ಹರಿಸಬೇಕಿದೆ.

ಜಾನುವಾರು ಜೀವ ಹಿಂಡುತ್ತಿದೆ Lumpy Skin disease!

ಜಾಗೃತಿ ಕರಪತ್ರ:

ಚರ್ಮಗಂಟು ರೋಗಕ್ಕೆ ತುತ್ತಾದ ಜಾನುವಾರುಗಳನ್ನು ಉಪಚರಿಸುವ ಕುರಿತು ರೈತರಿಗೆ ಮಾಹಿತಿ ನೀಡಲು ಸರ್ಕಾರ ಕರಪತ್ರಗಳನ್ನು(Government brochures) ಹೊರಡಿಸಿದೆ. ಈ ರೋಗದಿಂದ ಸಾವನ್ನಪ್ಪುವ ಜಾನುವಾರುಗಳಿಗೂ ಪರಿಹಾರ ನೀಡಲು ಮುಂದಾಗಿದೆ. ಈಗಾಗಲೇ ಕರಪತ್ರಗಳು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಕಚೇರಿ ತಲುಪಿವೆ.

ಚರ್ಮಗಂಟು ರೋಗದ ಲಕ್ಷಣಗಳು

ಜಾನುವಾರುಗಳಿಗೆ ಮೊದಲು ಜ್ವರ ಕಾಣಿಸಿಕೊಳ್ಳುತ್ತಿದ್ದು, ಆಹಾರಗಳನ್ನು ಬಿಡುತ್ತವೆ. ಆಹಾರ ತಿನ್ನುವುದಿಲ್ಲ ಹಾಗಾಗಿ ಹಾಲು ಕಡಿಮೆಯಾಗುತ್ತದೆ ಜೊತೆಗೆ ಕಂಗಾಲಾಗುತ್ತವೆ. ಮೈನಲ್ಲಿ ಗಂಟು ಕಾಣಿಸಿಕೊಳ್ಳುತ್ತವೆ. 

ಇಲ್ಲಿದೆ ಮನೆ ಮದ್ದು
ಈ ಕಾಯಿಲೆ ಬಗ್ಗೆ ಸಾರ್ವಜನಿಕರು ಮತ್ತು ರೈತರು ಹೆದರುವ ಅಗತ್ಯವಿಲ್ಲ. ಮನೆ ಮದ್ದಿನಿಂದ ಗುಣಪಡಿಸಿಕೊಳ್ಳಬಹುದಾಗಿದೆ. ಬೇವಿನ ಎಲೆ,ತೆಂಗಿನ ಎಣ್ಣೆ, ವೀಳ್ಯೆದೆಲೆ ಅರೆದು ಕೊಬ್ಬರಿ ಎಣ್ಣೆಯಿಂದ ಗಂಟು ಇರುವ ಸ್ಥಳಕ್ಕೆ ಹಚ್ಚುವುದರಿಂದ ರೋಗವನ್ನು ಕಡಿಮೆ ಮಾಡಬಹುದಾಗಿದೆ ಎಂದು ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. 


ಲೋಳೇಸರ(ಅಲೋವೆರಾ), 100 ಗ್ರಾಂ, ಅರಿಶಿನ,50 ಗ್ರಾಂ ಅನ್ನು ಕಲಸಿ, ಅದರ ಕಾಲು ಭಾಗ ತೆಗೆದುಕೊಂಡು 100 ಗ್ರಾಂ ಬೆಲ್ಲದ ಜೊತೆಗೆ ತಿನ್ನಿಸಿ ಇದನ್ನು ದಿನಕ್ಕೆ 3 ರಿಂದ 4 ಬಾರಿ ನೀಡಬೇಕು. 7 ದಿನಗಳವರೆಗೆ ನೀಡಿ ಮತ್ತು ಗಾಯದ ಮೇಲೆ ಇದನ್ನೇ ಪೇಸ್ಟ್ ರೀತಿ ಹಚ್ಚಿರಿ. ಬೇವಿನ ಎಲೆಗಳನ್ನು ಕುದಿಸಿದ ನಂತರ, ದನದ ಕೊಟ್ಟಿಗೆ ಮತ್ತು ಹಸುವಿನ ದೇಹದ ಮೇಲೆ ಆ ನೀರನ್ನು ಸಿಂಪಡಿಸಿ. ಗೋ ಶಾಲೆಯಲ್ಲಿ ಗುಗ್ಗಲ್ ಕರ್ಪೂರದ ಹೊಗೆ ಹಾಕಿ.