ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ನಡೆದ ಯಲ್ಲಮ್ಮ ದೇವಿ ಜಾತ್ರೆಯಲ್ಲಿ ಇಬ್ಬರು ಯುವಕರು ಗಾಳಿಯಲ್ಲಿ ಗುಂಡು ಹಾರಿಸಿ ಪುಂಡಾಟ ಮೆರೆದಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಪೊಲೀಸರು ಮೌನೇಶ್ ನಾಯಕ ಮತ್ತು ಭೀಮಣ್ಣ ನಾಯಕ ಎಂಬುವವರನ್ನು ಬಂಧಿಸಿದ್ದಾರೆ.

ರಾಯಚೂರು (ಫೆ. 20): ಜಿಲ್ಲೆಯ ದೇವದುರ್ಗ ತಾಲೂಕಿನ ಎಚ್ ಸಿದ್ದಾಪುರ ಗ್ರಾಮದಲ್ಲಿ ನಡೆದ ಯಲ್ಲಮ್ಮ ದೇವಿ ಜಾತ್ರೆ ವೇಳೆ ಕಾನೂನು ಬಾಹಿರವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ ಸಂಬಂಧ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

Add Asianetnews Kannada as a Preferred SourcegooglePreferred

ಶಸ್ತ್ರಾಸ್ತ್ರಗಳ ಪ್ರದರ್ಶನ ಮತ್ತು ಫೈರಿಂಗ್

ದೇವದುರ್ಗ ತಾಲೂಕಿನ ಎಚ್ ಸಿದ್ದಾಪುರದಲ್ಲಿ ನಡೆದ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವದ ವೇಳೆ ಭಕ್ತಿಗಿಂತ ಹೆಚ್ಚಾಗಿ ಉದ್ದಟತನವೇ ಎದ್ದು ಕಾಣುತ್ತಿತ್ತು. ಸಂಭ್ರಮದ ನೆಪದಲ್ಲಿ ಮೌನೇಶ್ ನಾಯಕ ಮತ್ತು ಭೀಮಣ್ಣ ನಾಯಕ ಎಂಬ ಯುವಕರು ಸಾರ್ವಜನಿಕ ಸ್ಥಳದಲ್ಲೇ ಕೊಡಲಿ ಹಾಗೂ ಬಂದೂಕುಗಳನ್ನು ಪ್ರದರ್ಶಿಸಿದ್ದಾರೆ. ಅಷ್ಟಕ್ಕೇ ನಿಲ್ಲದ ಈ ಯುವಕರು ಸಾರ್ವಜನಿಕರ ಸಮ್ಮುಖದಲ್ಲೇ ಗಾಳಿಯಲ್ಲಿ ಗುಂಡು ಹಾರಿಸಿ (Air Firing) ಪುಂಡಾಟಿಕೆ ಮೆರೆದಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಧುರಂಧರ್ ಸ್ಟೈಲ್‌ನಲ್ಲಿ ಗನ್ ಹಿಡ್ಕೊಂಡು ಕಾಂಗ್ರೆಸ್ ಮುಖಂಡ ಡ್ಯಾನ್ಸ್: ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಅಸಲಿಗೆ ನಡೆದಿದ್ದೇನು ಅಲ್ಲಿ?

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಯುವಕರು ಕೈಯಲ್ಲಿ ಆಯುಧ ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿದ ದೃಶ್ಯಗಳನ್ನು ಅಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ವಿಡಿಯೋ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತ ಜಾಲಹಳ್ಳಿ ಪೊಲೀಸರು ತಕ್ಷಣವೇ ಕಾರ್ಯಾಚರಣೆ ಕೈಗೊಂಡಿದ್ದಾರೆ. ವಿಡಿಯೋ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಿ ಬಂಧಿಸಿದ್ದಾರೆ.

ಕಾನೂನು ಕ್ರಮಕ್ಕೆ ಮುಂದಾದ ಪೊಲೀಸರು

ಈಗಾಗಲೇ ಮೌನೇಶ್ ನಾಯಕ ಮತ್ತು ಭೀಮಣ್ಣ ನಾಯಕ ಎಂಬ ಇಬ್ಬರೂ ಯುವಕರನ್ನು ಜಾಲಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕ ಶಾಂತಿಗೆ ಭಂಗ ತಂದ ಹಿನ್ನೆಲೆಯಲ್ಲಿ ಹಾಗೂ ಅನುಮತಿಯಿಲ್ಲದೆ ಶಸ್ತ್ರಾಸ್ತ್ರ ಬಳಕೆ ಮಾಡಿದ್ದಕ್ಕಾಗಿ ಇಬ್ಬರ ವಿರುದ್ಧವೂ ಎಆರ್‌ಎಂಎಸ್ (ARMS) ಕಾಯ್ದೆ 1959ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

YouTube video player