ಬೀದರ್‌ನ ಮೈಲೂರ್ ರಸ್ತೆಯಲ್ಲಿ ಕೂಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೈಜನಾಥ ಎಂಬ 60 ವರ್ಷದ ವ್ಯಕ್ತಿಗೆ ಕುದುರೆಯೊಂದು ಒದ್ದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಹೈದರಾಬಾದ್‌ಗೆ ಸಾಗಿಸುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ. 

ಬೀದರ್ (ಮಾ.11): ಕೂಲಿ ಕೆಲಸ ಮುಗಿಸಿಕೊಂಡು ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಕುದುರೆಯೊಂದು ಜಾಡಿಸಿ ಒದ್ದ ಪರಿಣಾಮ, ವ್ಯಕ್ತಿ ಮೃತಪಟ್ಟಿರುವ ದಾರುಣ ಘಟನೆ ಬೀದರ್ ನಗರದ ಮೈಲೂರ್ ರಸ್ತೆ ಬಳಿ ಸಂಭವಿಸಿದೆ. ಮೈಲೂರಿನ ಜಮ್ಮಿ ಕಾಲನಿ ನಿವಾಸಿ ವೈಜನಾಥ (60) ಮೃತಪಟ್ಟ ದುರ್ದೈವಿ.

Add Asianetnews Kannada as a Preferred SourcegooglePreferred

ಕೆಲಸ ಮುಗಿಸಿ ಮನೆಗೆ ಮರಳುವಾಗ ಎದುರಾದ ಮೃತ್ಯು

ಮೃತ ವೈಜನಾಥ ಅವರು ಚಿದ್ರಿಯಲ್ಲಿ ತಮ್ಮ ಕೆಲಸ ಮುಗಿಸಿ, ರಿಂಗ್ ರಸ್ತೆಯ ಮೂಲಕ ಮೈಲೂರಿಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕುದುರೆಯೊಂದು ದಿಢೀರನೆ ಹಿಂದಿನಿಂದ ಬಂದು ವೈಜನಾಥ ಅವರಿಗೆ ಬಲವಾಗಿ ಒದ್ದಿದೆ. ಕುದುರೆ ಒದ್ದ ರಭಸಕ್ಕೆ ವೈಜನಾಥ ಅವರ ತಲೆಗೆ ಗಂಭೀರ ಗಾಯವಾಗಿದೆ.

ಚಿಕಿತ್ಸೆ ಫಲಿಸದೇ ದುರ್ಮರ್ಣ

ಘಟನೆ ನಡೆದ ಕೂಡಲೇ ತೀವ್ರವಾಗಿ ಗಾಯಗೊಂಡಿದ್ದ ವೈಜನಾಥ ಅವರನ್ನು ಬೀದರ್‌ನ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ಆದರೆ ಪರಿಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ಆಸ್ಪತ್ರೆಗೆ ರವಾನಿಸಲಾಗುತ್ತಿತ್ತು. ದುರದೃಷ್ಟವಶಾತ್, ಆಸ್ಪತ್ರೆಗೆ ತಲುಪುವ ಮೊದಲೇ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.

ಕುಟುಂಬಸ್ಥರ ಆಕ್ರಂದನ

ವೈಜನಾಥ ಅವರ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅನಿರೀಕ್ಷಿತವಾಗಿ ಎದುರಾದ ಈ ಘಟನೆಯಿಂದ ಮೈಲೂರು ಸುತ್ತಮುತ್ತಲಿನ ಜನರು ಬೆಚ್ಚಿಬಿದ್ದಿದ್ದಾರೆ. ಈ ಘಟನೆಯು ಗಾಂಧಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.