ವೈಷಮ್ಯವು ಯುವಕನ ಪ್ರಾಣವನ್ನೇ ಬಲಿ ಪಡೆದುಕೊಂಡಿದೆ. .. ರಾತ್ರಿಯಲ್ಲಿ ಸ್ನೇಹಿತನ ಜೊತೆ ಮನೆಯಿಂದ ಹೋದವನು ಮರಳಿ ವಾಪಸಾಗಲೇ ಇಲ್ಲ. 

ಚನ್ನರಾಯಪಟ್ಟಣ (ಜ.21): ತಾಲೂಕಿನ ಕಸಬಾ ಹೋಬಳಿ ಡಿ.ಕಾಳೇನಹಳ್ಳಿ ಗ್ರಾಮದ ಮಂಚಿನ ಕಟ್ಟೆಬಳಿ ರಾತ್ರಿ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಕಸಬಾ ಹೋಬಳಿ ಯಾಚೇನಹಳ್ಳಿ ಗ್ರಾಮದ ಶಿವಕುಮಾರ್‌ ಎಂಬುವರ ಮಗ ಆನಂದ್‌(24) ಹತ್ಯೆಗೊಳಗಾದ ಯುವಕ.

Add Asianetnews Kannada as a Preferred SourcegooglePreferred

ಘಟನೆಯ ವಿವರ: ಯಾಚೇನಹಳ್ಳಿ ಗ್ರಾಮದ ಯುವಕ ಆನಂದ್‌ ತನ್ನ ತಾಯಿ ಶಶಿಕಲಾ ಅವರ ಬಳಿ, ನನಗೂ ಹಾಗೂ ಡಿ.ಕಾಳೇನಹಳ್ಳಿ ಗ್ರಾಮದ ಕಾರ್ತಿಕ್‌, ವಿಜಯ್‌, ಪುನೀತ್‌ ಹಾಗೂ ಇತರರೊಂದಿಗೆ ಯಾವುದೋ ವಿಚಾರವಾಗಿ ಗಲಾಟೆಯಾಗಿದೆ ಹೋಗಿ ಮಾತನಾಡಿಕೊಂಡು ಬರುತ್ತೇನೆ ಎಂದೇಳಿ ಮಂಗಳವಾರ ಸಂಜೆ 5 ಗಂಟೆ ಸುಮಾರಿನಲ್ಲಿ ಚನ್ನರಾಯಪಟ್ಟಣಕ್ಕೆ ತನ್ನ ಸ್ನೇಹಿತ ರವಿಯೊಂದಿಗೆ ತೆರಳಿದ್ದನು.

ಆದರೆ ರಾತ್ರಿ 10.45ರ ಸುಮಾರಿನಲ್ಲಿ ಆನಂದ್‌ ಹಾಗೂ ರವಿ ಚನ್ನರಾಯಪಟ್ಟಣದಿಂದ ಯಾಚೇನಹಳ್ಳಿಗೆ ತೆರಳುತಿದ್ದ ವೇಳೆ ಡಿ.ಕಾಳೇನಹಳ್ಳಿ ಗ್ರಾಮದ ಮಂಚಿನಕಟ್ಟೆಬಳಿ ಅಲ್ಲಿಯೇ ನಿಂತಿದ್ದ ವಿಜಯ್‌, ಪುನೀತ್‌, ಕಾರ್ತಿಕ್‌, ಚೇತನ್‌(ಕೆಂದ), ಗೌತಮ್‌ ಹಾಗೂ ಇತರರು ಸೇರಿ ಈ ಇಬ್ಬರನ್ನು ಅಡ್ಡಗಟ್ಟಿದ್ದಾರೆ.

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕ ಹಲ್ಲೆ, ವ್ಯಕ್ತಿ ಸಾವು ..

ಒಬ್ಬರಿಗೊಬ್ಬರು ಮಾತಿಗಿಳಿದು ಜಗಳ ಪ್ರಾರಂಭಗೊಂಡು ಕೈ ಕೈ ಮಿಲಾಯಿಸಿ ಹೊಡೆದಾಡಿದ್ದಾರೆ. ಈ ವೇಳೆ ಆನಂದ್‌ ತನ್ನ ಜೇಬಿನಿಂದ ಚಾಕು ತೆಗೆದು ವಿಜಯ್‌ ಮೇಲೆ ಬೀಸಿದ್ದಾನೆ. ಇದರಿಂದ ಕುಪಿತಗೊಂಡ ಎದುರಾಳಿ ಗುಂಪಿನ ಪುನೀತ್‌, ಆನಂದ್‌ನಿಂದ ಚಾಕುವನ್ನು ಕಿತ್ತುಕೊಂಡು ಆನಂದ್‌ನ ಕುತ್ತಿಗೆ, ಎದೆ ಹಾಗೂ ದೇಹದ ಇತರೆ ಭಾಗಗಳಿಗೆ ಇರಿದ್ದಾರೆ. ಇದರಿಂದ ನೆಲಕ್ಕೆ ಕುಸಿದ ಆನಂದ್‌ ಸ್ಥಳದಲ್ಲಿಯೇ ಮೃತಪಟ್ಟಬಗ್ಗೆ ಜೊತೆಯಲ್ಲಿಯೇ ಇದ್ದ ಸ್ನೇಹಿತ ರವಿ ಆನಂದನ ಮನೆಯವರಿಗೆ ವಿಷಯ ತಿಳಿಸಿದ್ದಾನೆ.

ಹಳೇ ದ್ವೇಷ-ವೈಷಮ್ಯದಿಂದ ನನ್ನ ಮಗನನ್ನು ಹತ್ಯೆ ಮಾಡಿರುವ ವಿಜಯ್‌, ಪುನೀತ್‌, ಕಾರ್ತಿಕ್‌, ಚೇತನ್‌(ಕೆಂದ) ಗೌತಮ್‌ ಹಾಗೂ ಇತರರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೃತನ ತಾಯಿ ಶಶಿಕಲಾ ದೂರು ನೀಡಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.