Asianet Suvarna News Asianet Suvarna News

Dakshina Kannada: ರಸ್ತೆ ಅಪಘಾತ: ಯಕ್ಷಗಾನ ಕಲಾವಿದ ವಾಮನ ಕುಮಾರ್ ದಾರುಣ ಸಾವು

*  ದಕ್ಷಿಣ ಕನ್ನಡ ಜಿಲ್ಲೆಯ ‌ಮೂಡುಬಿದಿರೆ ತಾಲೂಕಿನ ಗಂಟಾಲಕಟ್ಟೆ ಸಮೀಪ ನಡೆದ ಘಟನೆ
*  ಸ್ತ್ರೀ ವೇಷ, ಕಥಾ ನಾಯಕನ ಪಾತ್ರ ಮಾಡುತ್ತಿದ್ದ ವೇಣೂರು ವಾಮನ ಕುಮಾರ್
*  ಯಕ್ಷಗಾನ ಮುಗಿಸಿ ಬೈಕ್‌ನಲ್ಲಿ ವಾಪಾಸಾಗುತ್ತಿದ್ದ ವೇಳೆ ನಡೆದ ದುರ್ಘಟನೆ 
 

Yakshagana Artist Venuru Vamana Kumar Passed Away Due to Road Accident in Dakshina Kannada grg
Author
Bengaluru, First Published Jan 20, 2022, 11:01 AM IST

ದಕ್ಷಿಣ ಕನ್ನಡ(ಜ.20):  ರಸ್ತೆ ಅಪಘಾತದಲ್ಲಿ(Accident) ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್(46) ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ‌ಮೂಡುಬಿದಿರೆ ತಾಲೂಕಿನ ಗಂಟಾಲಕಟ್ಟೆ ಸಮೀಪ ಇಂದು(ಗುರುವಾರ) ಬೆಳಿಗ್ಗೆ 6.30 ರ ಸುಮಾರಿಗೆ ನಡೆದಿದೆ. 

ಬೆಳ್ತಂಗಡಿಯ ವೇಣೂರು ನಿವಾಸಿ ವಾಮನ ಕುಮಾರ(Venuru Vamana Kumar) ಅವರು ಉಡುಪಿ(Udupi) ಜಿಲ್ಲೆಯ ಕುಂದಾಪುರದಲ್ಲಿ ಯಕ್ಷಗಾನ ಮುಗಿಸಿ ಬೈಕ್‌ನಲ್ಲಿ ವಾಪಾಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. 

Bengaluru Road Accidents: ಬೆಂಗ್ಳೂರಲ್ಲಿ ಅಪಘಾತ ಇಳಿಕೆ: ಸಾವು ಏರಿಕೆ

ವೇಣೂರು ವಾಮನ ಕುಮಾರ್ ಅವರು ಹಿರಿಯಡ್ಕ ಯಕ್ಷಗಾನ ಮೇಳದ ಸ್ತ್ರೀ ವೇಷ ಮತ್ತು ಕಥಾನಾಯಕ ಪಾತ್ರಧಾರಿಯಾಗಿದ್ದರು. ವೇಣೂರು ವಾಮನ ಕುಮಾರ್ ಯಕ್ಷಗಾನದಲ್ಲಿ ಸ್ತ್ರೀ ವೇಷ, ಕಥಾ ನಾಯಕನ ಪಾತ್ರ ಮಾಡುತ್ತಿದ್ದರು ಪ್ರೇಕ್ಷಕರನ್ನ ಮನರಂಜಿಸುತ್ತಿದ್ದರು. 

ಉಡುಪಿ ಜಿಲ್ಲೆಯ ಕುಂದಾಪುರದ ಕೊಂಕಿ ಎಂಬಲ್ಲಿ ನಿನ್ನೆ(ಬುಧವಾರ) ರಾತ್ರಿ ಯಕ್ಷಗಾನವನ್ನು ಮುಗಿಸಿ ಮನೆಗೆ ಹೋಗುವಾಗ ಬೆಳಗಿನ ಜಾವ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. 

ನಿಜಕ್ಕೂ ದುಃಖಕರ. ಮಂಗಳಾದೇವಿ ಮೇಳದಲ್ಲಿ  ನೀಲಾವರ ನೀಲಾಃಬರಿ ಪ್ರಸಂಗದಲ್ಲಿ ರಾಜಕುಮಾರನಾಗಿ ತಾನು ತಪ್ಪು ಮಾಡದಿದ್ದರೂ ತನ್ನ ಮೇಲೆ ಆಪಾದನೆ ಮಾಡಿದಾಗ ಸರಸಿಜಾಸನ ಬರೆದ ಬರಹವ ನರರು ಮೀರುವದುಂಟೆ ನಿರಪರಾಧಿಯು ಶಿಕ್ಷೆಯನುಭವಿಸಿ ಬಂದ ಎಂಬ ಕನ್ನಡಿಕಟ್ಟೆಯವರ ಪದ್ಯಕ್ಕೆ ವೇಣೂರು ವಾಮನ ಕುಮಾರರ ಅಭಿನಯ ಇಂದಿಗೂ ಕಣ್ಮುಂದೆ ಕಂಡಂತಾಗುತ್ತದೆ. ಅಗಲಿದ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಅನುಗ್ರಹಿಸಲಿ ಅಂತ ವಸಂತ್ ದೇವಾಡಿಗ ಅವರು ಸಂತಾಪ ಸೂಚಿಸಿದ್ದಾರೆ. 

ಕೆರೆಗೆ ಬಿದ್ದ ಕಾರು, ಮೂವರು ಪಾರು

ದಾವಣಗೆರೆ(Davanagere):  ಕೆರೆ ಏರಿಯ ಮೇಲೆ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಪರಿಣಾಮ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾದ ಘಟನೆ ತಾಲೂಕಿನ ದೊಡ್ಡಬಾತಿ ಬುಧವಾರ ಬೆಳಿಗ್ಗೆ ಸಂಭವಿಸಿದೆ.

ನಗರದ ಹುಲ್ಮನಿ ಕನ್ಸಟ್ರಕ್ಷನ್‌ಗೆ ಸೇರಿದ್ದು ಎನ್ನಲಾದ ಕಾರು ಹರಿಹರ ಕಡೆಯಿಂದ ದಾವಣಗೆರೆಯತ್ತ ಬರುತ್ತಿತ್ತು. ಕಾರು ಬಾತಿ ಕೆರೆ ಏರಿಯ ಮೇಲೆ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಏರಿಯ ಬಲಭಾಗದಲ್ಲಿದ್ದ ಕೆರೆಗೆ ಉರುಳಿ ಬಿದ್ದಿದ್ದೆ. ಘಟನೆಯಲ್ಲಿ ಕಾರಿನಲ್ಲಿದ್ದ ಚಾಲಕ ಸೇರಿದಂತೆ ಮೂವರು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರು ಕೆರೆಗೆ ಪಲ್ಟಿಯಾಗಿ ಬೀಳುತ್ತಿದ್ದಂತೆ ಹರಸಾಹಸ ಮಾಡಿ, ಕಾರಿನಿಂದ ಮೂವರೂ ಹೊರ ಬಂದರೂ ಸಾಕಷ್ಟು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು(Injured) ತಕ್ಷಣವೇ ಸ್ಥಳೀಯರು, ದಾರಿ ಹೋಕರು ಆಸ್ಪತ್ರೆಗೆ ಕಳಿಸಿದರು. ಕನ್ಸಟ್ರಕ್ಷನ್‌ ಕಂಪನಿಯವರಿಗೆ ಕಾರು ಅಪಘಾತದ(Accident) ವಿಷಯ ಮುಟ್ಟಿಸಿದ್ದು, ಗ್ರಾಮಾಂತರ ಪೊಲೀಸರೂ ಸ್ಥಳಕ್ಕೆ ಧಾವಿಸಿದರು.

Haveri Road Accident: ರಟ್ಟಿಹಳ್ಳಿ ಬಳಿ ಭೀಕರ ಅಪಘಾತ: 4 ಮಂದಿ ಸಾವು

ಕ್ರೇನ್‌ ಸಹಾಯದಿಂದ ಸುಮಾರು ಹೊತ್ತು ಪ್ರಯಾಸ ಮಾಡಿ, ಕೆರೆಯಲ್ಲಿ ಮುಳುಗಿದ್ದ ಕಾರಿನ ಗಾಜುಗಳನ್ನು ಒಡೆದು, ಪಟ್ಟಿಯನ್ನು ಕಟ್ಟುವ ಮೂಲಕ ಜಾಗ್ರತೆಯಿಂದ ಕಾರನ್ನು ಕೆರೆ ನೀರಿನಿಂದ ಎತ್ತಲಾಯಿತು. ಕೆರೆಗೆ ಕಾರು ಉರುಳಿದ್ದು, ಕ್ರೇನ್‌ನಿಂದ ಅದನ್ನು ಎತ್ತಿ ತೆಗೆಯುವುದನ್ನು ನೋಡಲೆಂದು ಸಾಕಷ್ಟುಸಂಖ್ಯೆಯಲ್ಲಿ ಕೆರೆ ಏರಿ ಮೇಲೆ ವಾಹನಗಳನ್ನು ನಿಲ್ಲಿಸಿ, ನಿಂತಿದ್ದರಿಂದ ಹಳೆ ಪಿಬಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ವ್ಯತ್ಯಯವಾಗಿತ್ತು. ಪೊಲೀಸರು ಎಷ್ಟೇ ಹೇಳಿದರೂ ಜನರು ಮಾತ್ರ ರಸ್ತೆ ಬಿಟ್ಟು ಕದಲದೇ ನಿಂತಿದ್ದರು. ಕ್ರೇನ್‌ ನೆರವಿನಿಂದ ಕಾರು ಹೊರ ತೆಗೆದ ನತರವೇ ಜನರು ಅಲ್ಲಿಂದ ಚದುರಿದರು. ಘಟನೆಯಲ್ಲಿ ಕಾರು ಜಕಂ ಆಗಿದ್ದು, ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತಕ್ಕೆ ಮಹಿಳೆ ಬಲಿ

ಬ್ರಹ್ಮಾವರ: ಇಲ್ಲಿನ ಕೋಟದ ಸರಿತಾ ಪಿಂಟೋ(38) ಎಂಬವರು ಹಬ್ಬಕ್ಕೆ ಚಚ್‌ರ್‍ಗೆ ಹೋಗುತ್ತಿದ್ದಾಗ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ.
ಅವರ ಪತಿ ಅನಿಲ್‌ ಪಿಂಟೋ ಕೆಲವೇ ದಿನಗಳ ಹಿಂದೆ ಕುವೈಟ್‌ನಿಂದ ಊರಿಗೆ ಆಗಮಿಸಿದ್ದು, ಸೋಮವಾರ ದ್ವಿಚಕ್ರ ವಾಹನದಲ್ಲಿ ಪತ್ನಿ ಮತ್ತು ಮತ್ತು ಮಗನೊಂದಿಗೆ ಚರ್ಚಿಗೆ ಹೋಗುತಿದ್ದಾಗ ಬ್ರಹ್ಮಾವರದಲ್ಲಿ ಅಪಘಾತಕ್ಕೀಡಾಗಿದ್ದರು. ತಲೆಗೆ ತೀವ್ರ ಗಾಯಗೊಂಡಿದ್ದ ಸರಿತಾ ಬುಧವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅನಿಲ್‌ ಮತ್ತು ಮಗ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
 

Follow Us:
Download App:
  • android
  • ios