ಗ್ರಾಮಗಳಲ್ಲೇ ಹಾಜರಿದ್ದು, ಸಮಸ್ಯೆಗಳ ಬಗೆಹರಿಸುವಿಕೆಗೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿರುವುದಾಗಿ ಸುಳ್ಳು ಹೇಳುತ್ತ, ಬಯೋಮೆಟ್ರಿಕ್‌ ಹಾಜರಿಯನ್ನು ಬೇರೊಬ್ಬರಿಗೆ ನೀಡಿ, ದಿನನಿತ್ಯದ..

ಯಾದಗಿರಿ (ಮೇ.23): ಗ್ರಾಮಗಳಲ್ಲೇ ಹಾಜರಿದ್ದು, ಸಮಸ್ಯೆಗಳ ಬಗೆಹರಿಸುವಿಕೆಗೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿರುವುದಾಗಿ ಸುಳ್ಳು ಹೇಳುತ್ತ, ಬಯೋಮೆಟ್ರಿಕ್‌ ಹಾಜರಿಯನ್ನು ಬೇರೊಬ್ಬರಿಗೆ ನೀಡಿ, ದಿನನಿತ್ಯದ ಹಾಜರಿಗೆ "ಕಳ್ಳ"ಮಾರ್ಗ ಅನುಸರಿಸುತ್ತಿದ್ದ 80ಕ್ಕೂ ಹೆಚ್ಚು ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಕಳ್ಳಾಟವನ್ನು ಪತ್ತೆ ಹಚ್ಚಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ ಒರಡಿಯಾ, ನೋಟೀಸ್‌ ಜಾರಿ ಮಾಡಿದ್ದಾರಲ್ಲದೆ, ಸರ್ಕಾರಕ್ಕೇ ವಂಚನೆ, ನಕಲಿ ದಾಖಲೆ ಸೃಷ್ಟಿ ಆರೋಪದಡಿ ಪೊಲೀಸ್‌ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಪಿಡಿಒಗಳು ಕರ್ತವ್ಯ ನಿರ್ವಹಿಸದೇ, ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುತ್ತಿರಲಿಲ್ಲ. ಅಲ್ಲದೆ, ಪಿಡಿಒಗಳು ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸದೇ ಇರುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿದ್ದವು. ಇಂತಹ ದೂರುಗಳ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸಿದ ಸಿಇಒ ಲವೀಶ್‌, ಜಿಲ್ಲೆಯ ಗ್ರಾಮ ಪಂಚಾಯತ್‌ಗಳಲ್ಲಿ ಹಾಜರಿ ಬಗ್ಗೆ ಅಳವಡಿಸಿರುವ ಬಯೋಮೆಟ್ರಿಕ್‌ ತಂತ್ರಾಂಶ (ಸಾಫ್ಟವೇರ್‌)ದ ಅನುಮತಿ ಪಡೆದು, ಸತ್ಯಾಸತ್ಯತೆ ಪರಿಶೀಲಿಸಲು ಮುಂದಾದಾಗ, ಪಿಡಿಒಗಳು ತಮ್ಮದಲ್ಲದ "ನಕಲಿ" ಹಾಜರಿ ನೀಡಿ, ಸರ್ಕಾರಕ್ಕೆ ವಂಚಿಸುತ್ತಿದ್ದುದು ಬೆಳಕಿಗೆ ಬಂದಿದೆ.

ನೀರಿನ ಸಮಸ್ಯೆ ಬಗ್ಗೆ ಸಭೆ ಕರೆದು, ಬಯೋಮೆಟ್ರಿಕ್‌ ಪತ್ತೆ !

ಕುಡಿವ ನೀರಿನ ಸಮಸ್ಯೆ, ಕರವಸೂಲಾತಿ ಸೇರಿದಂತೆ ತುರ್ತು ವಿಷಯಗಳ ಬಗ್ಗೆ ಪರಿಶೀಲನೆ ನಡೆಸಲೆಂದು ಶುಕ್ರವಾರ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಗ್ರೇಡ್-1 & 2 ಕಾರ್ಯದರ್ಶಿಗಳು ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳ ಸಭೆ ಕರೆಯಲಾಗಿತ್ತು. ಎಂದಿನಂತೆ ಸಿಇಒ ಸಭೆ ಹಿನ್ನೆಲೆ ಎಲ್ಲ ಪಿಡಿಒಗಳು ಹಾಜರಾಗಿದ್ದರು.

ಸಭೆಯಲ್ಲಿ ಕುಡಿವ ನೀರಿನ ಪೂರೈಕೆ ಬಗ್ಗೆ, ಚರಂಡಿಗಳ ಸ್ವಚ್ಛತೆಯ ಬಗ್ಗೆ, ನೀರಿನ ಮಾದರಿಗಳ ಪರೀಕ್ಷೆ ಬಗ್ಗೆ, ಕರವಸೂಲಾತಿ ಬಗ್ಗೆ ಹಾಗೂ ಮನರೇಗಾ ಯೋಜನೆಯಡಿ ಕಡಿಮೆ ಮಾನವ ದಿನಗಳ ಸೃಜನೆ ಬಗ್ಗೆ ಚರ್ಚೆ ಮಾಡಿದ, ಮುಂಬರುವ ದಿನಗಳಲ್ಲಿ ಎಲ್ಲಾ ವಿಷಯಗಳ ಬಗ್ಗೆ ಅತೀ ಗಂಭೀರವಾಗಿ ಎಚ್ಚರಿಕೆ ವಹಿಸಿ ಕರ್ತವ್ಯದಲ್ಲಿ ಯಾವುದೇ ರೀತಿಯ ಲೋಪದೋಷವಾಗದಂತೆ ಕ್ರಮವಹಿಸಲು ಎಲ್ಲರಿಗೂ ಸೂಚಿಸಲಾಯಿತು.

ಇನ್ನೇನು, ಸಭೆ ಮುಗಿಯಿತು ಎಂದುಕೊಂಡು ಹೊರಡಲುನುವಾದ ಅಧಿಕಾರಿಗಳಿಗೆ ಸ್ಥಳದಲ್ಲೇ ಬಯೋಮೆಟ್ರಿಕ್‌ ಹಾಜರಿ ಪಡೆಯಲು ಸಿಇಒ ಸೂಚಿಸಿದರು. ಇದನ್ನು ನಿರೀಕ್ಷಿಸಿದ ಅನೇಕರು ಕಸಿವಿಸಿಗೊಂಡರು. ಬಯೋಮೆಟ್ರಿಕ್ "ಬಂಡವಾಳ" ಬಯಲಾಗುತ್ತದಲ್ಲಾ ಎಂದು ಕೈಕೈ ಹಿಚುಕಿಕೊಂಡು, ನೆಪಗಳ ಹೇಳಲು ಮುಂದಾದರಾದರೂ, ತಕ್ಷಣವೇ ಸಭಾಂಗಣದ ಬಾಗಿಲು ಮುಚ್ಚಿಸಿ, ಬಯೋಮೆಟ್ರಿಕ್ ಸಾಧನ ತರಿಸಿದ ಸಿಇಒ ಪ್ರತಿಯೊಬ್ಬರು ಹಾಜರಿ ನೀಡುವಂತೆ ಕಟ್ಟಪ್ಪಣೆ ನೀಡಿದರು.

ಈ ವೇಳೆ, ಕೆಲವರು ಬೆರಳಿಗೆ ಗಾಯ, ಮುಂತಾದ ಪಿಳ್ಳೆನೆಪಗಳ ಸಾರಿಸಲು ಯತ್ನಿಸಿದರಾದರೂ, ಸತ್ಯ ಹೊರಬಿದ್ದಿತ್ತು. ಶೇ.80 ರಷ್ಟು ಪಿಡಿಒಗಳು ನಕಲಿ ಹಾಜರಿ ನೀಡುತ್ತಿದ್ದುದು ಪತ್ತೆಯಾಯಿತು. ಜಿಲ್ಲೆಯಲ್ಲಿ 120ಕ್ಕೂ ಹೆಚ್ಚು ಪಿಡಿಒಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಗ್ರಾಮದಲ್ಲಿ ಇರದೇ ಪಿಡಿಒಗಳು ನಕಲಿ ಬಯೋಮೆಟ್ರಿಕ್ ನೀಡುತ್ತಿದ್ದರು. ತಮ್ಮ ಪರವಾಗಿ ಗ್ರಾಮದ ಸಿಬ್ಬಂದಿ ಅಥವಾ ಮತ್ತ್ಯಾರದ್ದೋ ಬಯೆಮಟ್ರಿಕ್‌ ನೀಡಿ, ಮೋಸ ಮಾಡುತ್ತಿದ್ದರು. ಅವರಿಗೆ ನೋಟೀಸ್‌ ನೀಡಲಾಗುತ್ತಿದೆ. ವಂಚನೆ ಹಾಗೂ ಐಟಿ ಕಾಯ್ದೆ ದುರುಪಯೋಗದಡಿ ಪ್ರಕರಣ ದಾಖಲಿಸಲು ಸಿದ್ಧತೆ ನಡೆದಿದೆ.
- ಲವೀಶ್‌ ಒರಡಿಯಾ, ಸಿಇಓ, ಜಿ.ಪಂ. ಯಾದಗಿರಿ.