ಮಳೆಗಾಲ ಆರಂಭಿಸುತ್ತಿದ್ದಂತೆ ಮತ್ತೆ ತಮ್ಮ ಕಳ್ಳಾಟ ಆರಂಭಿಸಿರುವ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳು, ಕೆಮಿಕಲ್‌ ತ್ಯಾಜ್ಯ ನೀರನ್ನು ಚರಂಡಿ ಮಾರ್ಗದ ಮೂಲಕ ಹಳ್ಳಕ್ಕೆ ಬಿಡುತ್ತಿದ್ದು, ಇದು ಜೀವಸಂಕುಲಕ್ಕೆ..

ಯಾದಗಿರಿ (ಜೂ.01): ಮಳೆಗಾಲ ಆರಂಭಿಸುತ್ತಿದ್ದಂತೆ ಮತ್ತೆ ತಮ್ಮ ಕಳ್ಳಾಟ ಆರಂಭಿಸಿರುವ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳು, ಕೆಮಿಕಲ್‌ ತ್ಯಾಜ್ಯ ನೀರನ್ನು ಚರಂಡಿ ಮಾರ್ಗದ ಮೂಲಕ ಹಳ್ಳಕ್ಕೆ ಬಿಡುತ್ತಿದ್ದು, ಇದು ಜೀವಸಂಕುಲಕ್ಕೆ ಕುತ್ತು ತರುವಂತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೈಗಾರಿಕಾ ಪ್ರದೇಶದಲ್ಲಿನ ಘನತ್ಯಾಜ್ಯ ವಿಲೇವಾರಿ ಘಟಕದಿಂದ ವಿಷಯುಕ್ತ ಕೆಮಿಕಲ್‌ ತ್ಯಾಜ್ಯವನ್ನು ಭಾನುವಾರ ಸಂಜೆ ಸದ್ದಿಲ್ಲದೆ ಹೊರಬಿಡಲಾಗಿತ್ತು. ಕರ್ನಾಟಕ ಸೇರಿದಂತೆ ಐದು ರಾಜ್ಯಗಳ ಕೆಮಿಕಲ್‌ ತ್ಯಾಜ್ಯ ಸಂಗ್ರಹಿಸುವ ಈ ಘಟಕವು, ವೈಜ್ಞಾನಿಕಾಗಿ ತ್ಯಾಜ್ಯ ವಿಲೇವಾರಿ ಮಾಡದೇ, ಯಾರಿಗೂ ಗೊತ್ತಾಗದಂತೆ ಪ್ರತ್ಯೇಕ ಕಳ್ಳಮಾರ್ಗದಿಂದ ಚರಂಡಿ ಮೂಲಕ ಹೊರಬಿಡುತ್ತಿರುವುದರಿಂದ, ಈ ನೀರನ್ನು ಅವಲಂಬಿಸಿರುವ ಗ್ರಾಮಸ್ಥರ ಬದುಕಿಗೆ ಕುತ್ತಾಗಿ ಪರಿಣಮಿಸುವ ಆತಂಕ ಎದುರಾಗಿದೆ. ಜೊತೆಗೆ, ಜೀವಜಂತುಗಳು ಸಾವನ್ನಪ್ಪುವ ಸಾಧ್ಯತೆಯಿದೆ.

ಈ ಹಿಂದೆಯೂ ಕೂಡ, ಘನತ್ಯಾಜ್ಯ ವಿಲೇವಾರಿ ಘಟಕ ಸೇರಿದಂತೆ ಇಲ್ಲಿನ ಕಾರ್ಖಾನೆಗಳ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು. ಹಳ್ಳಕ್ಕೆ ತ್ಯಾಜ್ಯ ಬಿಟ್ಟ ಪರಿಣಾಮ ಸಾವಿರಾರು ಮೀನುಗಳು ಹಾಗೂ ಕುರಿ-ದನಕರುಗಳು ಹಳ್ಳದ ನೀರು ಕುಡಿದು ಮೃತಪಟ್ಟಿದ್ದವು. ಈಗ, ಕಳೆದ ಕೆಲವು ದಿನಗಳಿಂದ ಕಾರ್ಖಾನೆಗಳು ಯಾರಿಗೂ ಗೊತ್ತಾಗದ ಹಾಗೆ ರಾತ್ರಿ ವೇಳೆ ಮತ್ತೇ ತ್ಯಾಜ್ಯ ಹೊರಬಿಡುತ್ತಿರುವುದು ಕಂಡುಬರುತ್ತಿದೆ ಎಂದು ದೂರಿದ ಶೆಟ್ಟಿಹಳ್ಳಿ ಗ್ರಾಮದ ಕಾಶೀನಾಥ್‌, ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಗೂ ನಾವು ಮೊನ್ನೆಯೂ ಕೂಡ ಈ ಬಗ್ಗೆ ತಿಳಿಸಿದ್ದೆವಾದರೂ, ಕ್ರಮ ಕೈಗೊಳ್ಳುವುದಾಗಲೀ, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುವುದಾಗಲೀ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಸ್ಪಂದಿಸಬೇಕಿದೆ

ಮಳೆಗಾಲದ ಈ ಸಂದರ್ಭದಲ್ಲಿ ಮತ್ತೇ ಇಂತಹ ಕೃತ್ಯಗಳು ಜೀವಸಂಕುಲಕ್ಕೆ ಮಾರಕ. ಕಂಪನಿಗಳು ನಿಯಮಗಳ ಪಾಲಿಸುತ್ತಿಲ್ಲ, ಇದ ತಡೆಯಬೇಕಾದ ಅಧಿಕಾರಿಗಳು ಕಂಡೂ ಕಾಣದ ಹಾಗೆ ಮೌನಕ್ಕೆ ಶರಣಾಗಿದ್ದಾರೆ. ಕಾರ್ಖಾನೆಗಳ ಅವೈಜ್ಞಾನಿಕ ಕ್ರಮ ಗೊತ್ತಿದ್ದರೂ, ಮಾಲೀಕರುಗಳ ಪ್ರಭಾವದಿಂದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸ್ಥಳಕ್ಕೆ ಬರುವಲ್ಲಿ ಹಿಂದೇಟು ಹಾಕುತ್ತಿರಬಹುದು ಎಂದು ಸಾಮಾಜಿಕ ಕಾರ್ಯಕರ್ತ ಭೀಮಣ್ಣ ವಡವಟ್‌ ಶಂಕೆ ವ್ಯಕ್ತಪಡಿಸಿದರು. ಕಡೇಚೂರ ಭಾಗದಲ್ಲಿನ ಜನರ ಅಹವಾಲುಗಳಿಗೆ ಜಿಲ್ಲಾಡಳಿತ ಸ್ಪಂದಿಸಬೇಕಿದೆ. ದೊಡ್ಡ ಅನಾಹುತಗಳು ನಡೆಯುವ ಮುನ್ನ ಕ್ರಮಕ್ಕೆ ಮುಂದಾಗಬೇಕಿದೆ ಅಂತಾರೆ.