ತುಮಕೂರು ಜಿಲ್ಲೆಯಲ್ಲಿ ಮಲ ಹೊರುವ ಪದ್ಧತಿ ಇನ್ನೂ ಜೀವಂತವಾಗಿದ್ದು ಮುಗ್ದ ಕಾರ್ಮಿಕರಿಂದ ಬರಿಗೈಲಿ ಮಲ ಬಾಚಿಸಿದ ಘಟನೆ ಇಲ್ಲಿನ ಕೆಇಬಿ ಎಂಜಿನಿಯರ್ಸ್ ಸಂಘದ ಆವರಣದಲ್ಲಿ ನಡೆದಿದೆ.

  •  ಬರೀ ಗೈ, ಬರಿಗಾಲಲ್ಲಿ ಸ್ವಚ್ಛ ಮಾಡಿದ ಕಾರ್ಮಿಕರು
  • ಕೆಇಬಿ ಎಂಜಿನಿಯರ್‌ಗಳ ಸಂಘದ ಆವರಣದಲ್ಲಿ ಘಟನೆ

ತುಮಕೂರು (ಜೂ.27): ತುಮಕೂರು ಜಿಲ್ಲೆಯಲ್ಲಿ ಮಲ ಹೊರುವ ಪದ್ಧತಿ ಇನ್ನೂ ಜೀವಂತವಾಗಿದ್ದು ಮುಗ್ದ ಕಾರ್ಮಿಕರಿಂದ ಬರಿಗೈಲಿ ಮಲ ಬಾಚಿಸಿದ ಘಟನೆ ಇಲ್ಲಿನ ಕೆಇಬಿ ಎಂಜಿನಿಯರ್ಸ್ ಸಂಘದ ಆವರಣದಲ್ಲಿ ನಡೆದಿದೆ.

ಬರಿಗೈ, ಬರಿಗಾಲಲ್ಲೇ ಮಲ ತುಂಬುತ್ತಿದ್ದ ಕಾರ್ಮಿಕರು

ನಗರದ ಕೆಇಬಿ ಎಂಜಿನಿಯರ್‌ಗಳ ಸಂಘದ ಆವರಣದಲ್ಲಿರುವ ಎರಡು ಕಕ್ಕಸು ಗುಂಡಿಗಳಲ್ಲಿನ ಮಲವನ್ನು ಕಾರ್ಮಿಕರು ಯಾವುದೇ ಗ್ಲೌಸ್, ಮಾಸ್ಕ್, ಗಮ್ ಬೂಟ್‌ಗಳಂತ ಸುರಕ್ಷಾ ಸಾಧನಗಳಿಲ್ಲದೇ ಬರಿಗೈ, ಬರಿಗಾಲಿನಲ್ಲಿ ನಿಂತು ಟ್ರ್ಯಾಕ್ಟರ್‌ಗೆ ತುಂಬುತ್ತಿದ್ದ ಅಮಾನವೀಯ ಘಟನೆ ನಡೆದಿದೆ.

ತುಮಕೂರಿನ ನಂದೀಶ್, ಅರುಣ್, ಮಧುಗಿರಿ ಮೂಲದ ಮೂರ್ತಿ ನಾಯ್ಕ ಹಾಗೂ ನವೀನ ಕಳೆದ ಮೂರು ದಿನಗಳಿಂದ ಈ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಮಣ್ಣು ತುಂಬಲೆಂದು ಕರೆತಂದರು. ಆದರೆ ಇಲ್ಲಿಗೆ ಬಂದು ನೋಡಿದಾಗ ಶೌಚ ಗುಂಡಿ ಎಂದು ತಿಳಿಯಿತು. ಹೊಟ್ಟೆ ಪಾಡಿಗಾಗಿ ಒಪ್ಪಿಕೊಂಡು ಈ ಕೆಲಸ ಮಾಡುತ್ತಿದ್ದೇವೆ. ಈ ಕೆಲಸ ಮಾಡಬಾರದು ಅಂತಾ ನಮಗೆ ಗೊತ್ತಿರಲಿಲ್ಲ. ಇನ್ನು ಮುಂದೆ ಇಂತಹ ಕೆಲಸಕ್ಕೆ ಕರೆದರೆ ಹೋಗುವುದಿಲ್ಲ ಎಂದು ಕಾರ್ಮಿಕರು ತಿಳಿಸಿದ್ದಾರೆ.

ಸ್ವಯಂಪ್ರೇರಿತ ದೂರು ದಾಖಲು

ಇತ್ತೀಚೆಗೆ ಕೊರಟಗೆರೆ ಬಸ್ ನಿಲ್ದಾಣದಲ್ಲಿ ಬಾಲ ಕಾರ್ಮಿಕನಿಂದ ಶೌಚ ಗುಂಡಿಯ ಮಲ ಸ್ವಚ್ಛಗೊಳಿಸಲಾಗಿತ್ತು. ಇದೀಗ ತುಮಕೂರಲ್ಲೂ ಇಂತಹ ಅನಿಷ್ಟ ಪದ್ಧತಿ ಬೆಳಕಿಗೆ ಬಂದಿದ್ದು ಪೊಲೀಸರು ಸ್ವಯಂ ಪ್ರೇರಿತ ಕೇಸ್‌ ದಾಖಲಿಸಿದ್ದಾರೆ.