ಕಾಫಿನಾಡು ಚಿಕ್ಕಮಗಳೂರಿನಲ್ಲಿ ಹೊಸದಾಗಿ ಮೂರು ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಚಿಕ್ಕಮಗಳೂರು(ಮೇ. 28): ಹಸಿರು ವಲಯದಿಂದ ಹಿಂಬಡ್ತಿ ಪಡೆದಿರುವ ಕಾಫಿ ನಾಡಿನಲ್ಲಿ ಕೊರೋನಾ ಪಾಸಿಟಿವ್‌ ಸಂಖ್ಯೆ ನಿಧಾನಗತಿಯಲ್ಲಿ ಏರತೊಡಗಿದ್ದು, ಬುಧವಾರ ಹೊಸದಾಗಿ 3 ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಿಂದ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 9 ರಿಂದ 12ಕ್ಕೆ ಏರಿದೆ. ಈ ಎಲ್ಲ ಪ್ರಕರಣಗಳು ಮುಂಬೈ ನಂಟು ಹೊಂದಿವೆ.

Add Asianetnews Kannada as a Preferred SourcegooglePreferred

ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಮೇ 19ರಂದು 5 ಪ್ರಕರಣಗಳು ಪತ್ತೆಯಾಗಿವೆ. 2ನೇ ದಿನ ಮತ್ತೆ 5 ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪೈಕಿ ಮೂಡಿಗೆರೆ ತಾಲೂಕಿನ ನಂದೀಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ವರದಿ ನೆಗೆಟಿವ್‌ ಬಂದಿದ್ದರಿಂದ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 10 ರಿಂದ 9ಕ್ಕೆ ಇಳಿದಿತ್ತು.

ಬುಧವಾರ ಮತ್ತೆ 3 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಸೋಂಕಿತರ ಸಂಖ್ಯೆ 9ರಿಂದ 12ಕ್ಕೆ ಏರಿದೆ. ಇದರಲ್ಲಿ ಒಂದು ಪ್ರಕರಣ ತರೀಕೆರೆ, 9 ಪ್ರಕರಣ ಎನ್‌.ಆರ್‌.ಪುರ, ಬುಧವಾರ ಪತ್ತೆಯಾಗಿರುವ 2 ಪ್ರಕರಣಗಳು ಕೊಪ್ಪ ತಾಲೂಕಿಗೆ ಸೇರಿದ್ದಾಗಿವೆ.

ಪೂರ್ವ ಮುಂಗಾರು ಹಾವಳಿ ಚಿಕ್ಕಮಗಳೂರು ಜಿಲ್ಲೆಯಲ್ಲಿ 59 ಲಕ್ಷ ರುಪಾಯಿ ನಷ್ಟ

ಕಪ್ಪುಚುಕ್ಕಿ ಇಟ್ಟ ಮುಂಬೈ:

ಜಿಲ್ಲೆಯಲ್ಲಿ ಈವರೆಗೆ ಮಹಾರಾಷ್ಟ್ರದಿಂದ 317 ಮಂದಿ ಬಂದಿದ್ದಾರೆ. ಪಾಸ್‌ ಪಡೆದು ಬಂದಿರುವ ಈ ಎಲ್ಲರನ್ನೂ ಕ್ವಾರೆಂಟೈನ್‌ ಮಾಡಲಾಗಿದೆ. ಇದರ ಜತೆಗೆ ಗಂಟಲ ದ್ರವ ಪರೀಕ್ಷೆ ಮಾಡಲು ಮೈಸೂರಿನಲ್ಲಿರುವ ಲ್ಯಾಬ್‌ಗೆ ಕಳಿಸಲಾಗಿದೆ. ಈವರೆಗೆ 150 ಮಂದಿಯ ವರದಿ ಬಂದಿದ್ದು, ಪಾಸಿಟಿವ್‌ ಸೋಂಕಿರುವ 11 ಮಂದಿ ಮುಂಬೈ ನಂಟು ಹೊಂದಿರುವವರು. ಕಾಫಿಯ ನಾಡಿಗೆ ಮುಂಬೈ ನಂಟು ಕಪ್ಪು ಚುಕ್ಕಿ ಇಟ್ಟಿದೆ. ಆದರೆ, ಇವರಿಂದ ಬೇರೆ ಜನರಿಗೆ ಯಾವುದೇ ತೊಂದರೆ ಇಲ್ಲ. ಕಾರಣ, ಮುಂಬೈನಿಂದ ಬಂದಿದ್ದವರೆಲ್ಲರೂ ಕ್ವಾರೆಂಟೈನ್‌ನಲ್ಲಿ ಇದ್ದಾರೆ. ಪಾಸಿಟಿವ್‌ ಬರಲಿ, ನೆಗೆಟಿವ್‌ ಬರಲಿ, ಕನಿಷ್ಠ 14 ದಿನ ಕ್ವಾರೆಂಟೈನ್‌ನಲ್ಲಿದ್ದು ಚಿಕಿತ್ಸೆ ಪಡೆಯುವುದು ಕಡ್ಡಾಯ. ಆದ್ದರಿಂದ ಕಾಫಿಯ ನಾಡು ಆತಂಕ ಪಡುವಂತಿಲ್ಲ.