ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ನೀಡಿ, ಕರ್ನಾಟಕದ ಹುಬ್ಬಳ್ಳಿ ಮತ್ತು ಬೆಳಗಾವಿ ನಿಲ್ದಾಣಗಳನ್ನು ಕಡೆಗಣಿಸಿರುವುದು ಕೇಂದ್ರದ ತಾರತಮ್ಯ ನೀತಿ ಎಂದು ಸಚಿವ ಎಂ.ಬಿ. ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು (ಮಾ.11): ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರವು ರಾಜ್ಯದ ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ‌ ನಿಲ್ದಾಣಗಳ ಬಗ್ಗೆ ಇಂತಹ ನಿರ್ಧಾರ ಘೋಷಿಸದೆ ಇರುವುದು ತಾರತಮ್ಯ ಧೋರಣೆಯ ಪ್ರದರ್ಶನವಾಗಿದೆ. ಇದು ಸರ್ವಥಾ ಸರಿಯಲ್ಲ. ಅವರಿಗೆ ಬೆಣ್ಣೆ, ನಮಗೆ ಸುಣ್ಣ ಎಂದರೆ ಹೇಗೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕೇಂದ್ರ ಸರಕಾರವು ಹತ್ತಿರದಲ್ಲೇ ಇರುವ ತಮಿಳುನಾಡು ಚುನಾವಣೆಯ ಮೇಲೆ ಕಣ್ಣಿಟ್ಟುಕೊಂಡು ಹೀಗೆ ಮಾಡಿರಬಹುದು. ಆದರೆ ನಮ್ಮ ರಾಜ್ಯದ ಬೇಡಿಕೆ ಬಗ್ಗೆ ಅದು ಉದಾಸೀನ ಮನೋಭಾವ ಪ್ರದರ್ಶಿಸಿರುವುದು ಪ್ರಶ್ನಾರ್ಹ ಎಂದಿದ್ದಾರೆ.

ಕೇಂದ್ರಕ್ಕೆ ಪತ್ರ ಬರೆದರೂ ಕರ್ನಾಟಕ ಕಣ್ಣಿಗೆ ಸುಣ್ಣ

ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಬೇಕು. ಇದರಿಂದ ಉತ್ತರ ಕರ್ನಾಟಕ ಭಾಗಕ್ಕೆ ಅನುಕೂಲ ಆಗುತ್ತದೆ ಎಂದು ಕಳೆದ ವರ್ಷ (2025ರ ಜೂನ್ 24ರಂದು) ಕೇಂದ್ರ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರಿಗೆ ಪತ್ರ ಬರೆಯಲಾಗಿತ್ತು. ಈಗ ನೋಡಿದರೆ ಹೀಗಾಗಿದೆ. ಧಾರವಾಡ ಸಂಸದರಾಗಿ ಕೇಂದ್ರ ಸಂಪುಟದಲ್ಲಿರುವ ಪ್ರಹ್ಲಾದ್ ಜೋಶಿ, ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಮತ್ತು ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಈಗ ನಿರ್ದಿಷ್ಟವಾಗಿ ಧ್ವನಿ ಎತ್ತಿ, ರಾಜ್ಯದ ಹಿತಾಸಕ್ತಿಯ ಪರ ನಿಲ್ಲಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣ ಎರಡರ ಪೈಕಿ ಒಂದನ್ನಾದರೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಘೋಷಿಸಬೇಕು. ಎರಡನ್ನೂ ಉನ್ನತೀಕರಿಸಿದರೆ ಅದು ಇನ್ನೂ ಸ್ವಾಗತಾರ್ಹ. ರಾಜ್ಯದ ಅಗತ್ಯವನ್ನು ಕೇಂದ್ರ ಮನಗಾಣಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಉಡಾನ್ ಯೋಜನೆಯನ್ನು ವಿಸ್ತರಿಸಬೇಕು

ಕೇಂದ್ರ ಸರಕಾರವು ದೇಶೀಯ ವಿಮಾನಯಾನ ಉತ್ತೇಜಿಸಲು ಉಡಾನ್ ಯೋಜನೆ ತಂದಿದೆ. ಅದರಿಂದ ಮೊದಲ ಮೂರು ವರ್ಷಗಳ ಕಾಲ ರಾಜ್ಯದ ವಿಮಾನ ನಿಲ್ದಾಣಗಳು ಚೆನ್ನಾಗಿ ನಡೆದವು. ಇದಾದ ಮೇಲೆ ಬೀದರ್, ಕಲಬುರಗಿ ವಿಮಾನ ನಿಲ್ದಾಣಗಳಿಂದ ವಿಮಾನ ಸೇವೆ ಸ್ಥಗಿತಗೊಂಡಿತು. ಈಗ ಬೀದರ್ ನಡೆಯುತ್ತಿದೆ. ಈ ಪರಿಸ್ಥಿತಿ ಬಳ್ಳಾರಿ ವಿಮಾನ ನಿಲ್ದಾಣಕ್ಕೂ ಬರಬಾರದು ಎನ್ನುವ ಕಾರಣಕ್ಕೆ ಮೂರೂ ಜಿಲ್ಲೆಗಳನ್ನು ಸೇರಿಸಿಕೊಂಡು ಸೂಕ್ತ ಸ್ಥಳದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಉದ್ದೇಶ ಇದೆ ಎಂದು ಸಚೊವ ಎಂ.ಬಿ. ಪಾಟೀಲ್ ಇತ್ತೀಚೆಗೆ ಹೇಳಿದ್ದರು.