ಕೊಡಗು ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವ್‌ ದರ ಶೇ.2ಕ್ಕಿಂತ ಕಡಿಮೆಯಾದ ಹಿನ್ನೆಲೆ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದ್ದ ವೀಕೆಂಡ್‌ ಕರ್ಫ್ಯೂವನ್ನು ಸೆ.9ರಿಂದ ಅನ್ವಯವಾಗುವಂತೆ ಮುಂದಿನ ಆದೇಶವರೆಗೆ ತೆರವು

ಮಡಿಕೇರಿ (ಸೆ.10): ಕೊಡಗು ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವ್‌ ದರ ಶೇ.2ಕ್ಕಿಂತ ಕಡಿಮೆಯಾದ ಹಿನ್ನೆಲೆ ರಾಜ್ಯದ ಜಿಲ್ಲೆಗಳಲ್ಲಿ ಕೋವಿಡ್‌-19 ಸೋಂಕು ನಿಯಂತ್ರಣ ಸಂಬಂಧ ಸರ್ಕಾರದ ಹೊರಡಿಸಿರುವ ಆದೇಶಗಳನ್ನು ಆಧರಿಸಿ, ಕೊಡಗು ಜಿಲ್ಲೆಯ ಕೋವಿಡ್‌ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಈ ಹಿಂದೆ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದ್ದ ವೀಕೆಂಡ್‌ ಕರ್ಫ್ಯೂವನ್ನು ಸೆ.9ರಿಂದ ಅನ್ವಯವಾಗುವಂತೆ ಮುಂದಿನ ಆದೇಶವರೆಗೆ ಜಾರಿಯಲ್ಲಿರುವಂತೆ ಕರ್ಫ್ಯೂ ತೆರವುಗೊಳಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಆದೇಶ ಹೊರಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಳೇ ಮಾರ್ಗಸೂಚಿಯನ್ನು ಮಾರ್ಪಡಿಸಿ ಪ್ರತಿದಿನ ಬೆಳಗ್ಗೆ 5 ರಿಂದ ರಾತ್ರಿ 9 ರವರೆಗೆ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಸೋಂಕು ಹೆಚ್ಚಿರುವ ಕೇರಳ ರಾಜ್ಯ ಪ್ರಯಾಣವನ್ನು ಸಾರ್ವಜನಿಕರು ಮುಂದೂಡುವಂತೆ ಮನವಿ ಮಾಡಿರುವ ಜಿಲ್ಲಾಡಳಿತ, ಕೋವಿಡ್‌ ವಿರುದ್ಧ ಜಾಗೃತಿ ವಹಿಸುವಂತೆ ಸೂಚಿಸಿದೆ.

ರಾಜ್ಯದಲ್ಲಿ ಕೋವಿಡ್‌ಗೆ ನಾಲ್ಕು ಸಾವು: 172 ದಿನಗಳ ಕನಿಷ್ಠ

ಈ ಸಂದರ್ಭ ಕಂಟೈನ್ಮೆಂಟ್‌ ವಲಯಗಳಲ್ಲಿ ಯಾವುದೇ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ. ವಾರದ ಎಲ್ಲ ದಿನಗಳಲ್ಲಿ ರಾತ್ರಿ 9 ಗಂಟೆಯಿಂದ ಮರುದಿನ ಬೆಳಗ್ಗೆ 5 ಗಂಟೆ ವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಎಲ್ಲ ತರಹದ ಅಂಗಡಿ ಮುಂಗಟ್ಟುಗಳು ಬೆಳಗ್ಗೆ 5 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ಕೋವಿಡ್‌ ಸಮುಚಿತ ವರ್ತನೆಗಳೊಂದಿಗೆ ಕಾರ್ಯಾಚರಿಸಲು ಅನುಮತಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಿಲ್ಲೆಯ ಗಡಿಭಾಗಗಳಲ್ಲಿ ಮತ್ತು ಚೆಕೆಎಪೋಸ್ಟ್‌ಗಳಲ್ಲಿ ನಡೆಸುತ್ತಿರುವ ಸರ್ವೇಕ್ಷಣಾ ಕ್ರಮಗಳು/ನಿರ್ಬಂಧಗಳು ಯಥಾವತ್ತಾಗಿ ಮುಂದುವರೆಯುತ್ತದೆ. ಸಾರ್ವಜನಿಕರು ಕೋವಿಡ್‌ ಸಮುಚಿತ ವರ್ತನೆಗಳಾದ ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್‌ ಬಳಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಕ್ರಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಎಲ್ಲ ಶಿಕ್ಷಣ ಸಂಸ್ಥೆಗಳು / ನರ್ಸಿಂಗ್‌ / ಪ್ಯಾರಾ ಮೆಡಿಕಲ್‌ ಸಂಸ್ಥೆಗಳ ಆಡಳಿತಾಧಿಕಾರಿಗಳು / ಪ್ರಾಂಶುಪಾಲರು ಕರ್ನಾಟಕಕ್ಕೆ ಇದುವರೆಗೂ ಹಿಂದಿರುಗದ ತಮ್ಮ ವಿದ್ಯಾರ್ಥಿ ಹಾಗೂ ಸಿಬ್ಬಂದಿಗಳಿಗೆ ಪ್ರಯಾಣವನ್ನು ಅಕ್ಟೋಬರ್‌ ಅಂತ್ಯದವರೆಗೆ ಮುಂದೂಡುವಂತೆ ಸೂಚಿಸಬೇಕು. ತಮ್ಮ ವಿದ್ಯಾರ್ಥಿ ಹಾಗೂ ಸಿಬ್ಬಂದಿಗೆ ಅಕ್ಟೋಬರ್‌ ಅಂತ್ಯದವರೆಗೆ ಕೇರಳಕ್ಕೆ ಪ್ರಯಾಣವನ್ನು ಮಾಡದಿರುವಂತೆ ಸೂಚಿಸಬೇಕು. ಎಲ್ಲ ಆಸ್ಪತ್ರೆಗಳು / ನರ್ಸಿಂಗ್‌ ಹೋಂಗಳು / ಕಚೇರಿಗಳು / ಹೋಟೆಲ್‌ಗಳು, ಕಾರ್ಖಾನೆಗಳು ಹಾಗೂ ಇತರ ಉದ್ಯಮಗಳ ಆಡಳಿತಾಧಿಕಾರಿಗಳು / ಮಾಲೀಕರು ಕರ್ನಾಟಕಕ್ಕೆ ಇದುವರೆಗೂ ಹಿಂದಿರುಗದ ತಮ್ಮ ಉದ್ಯೋಗಿಗಳ ಪ್ರಯಾಣವನ್ನು ಅಕ್ಟೋಬರ್‌ ಅಂತ್ಯದವರೆಗೆ ಮುಂದೂಡುವಂತೆ ಸೂಚಿಸಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ತಿಳಿಸಿದ್ದಾರೆ.