ನಮ್ಮ ಆಸ್ತಿಗಷ್ಟೇ ಬೇಲಿ ಹಾಕಿದ್ದೇವೆ: ರಾಜವಂಶಸ್ಥೆ ಪ್ರಮೋದಾದೇವಿ | ಯಾರಿಗೂ ತೊಂದರೆ ಕೊಡುವ ಉದ್ದೇಶದಿಂದ ಅಲ್ಲ ಎಂದ ಪ್ರಮೋದಾದೇವಿ

ಮೈಸೂರು(ಜ.03): ಲಲಿತಮಹಲ್‌ ಸುತ್ತಮುತ್ತಲಿನ ಜಮೀನಿನ ಮಾಲೀಕತ್ವದ ಕುರಿತು ಕೋರ್ಟ್‌ ತೀರ್ಪಿನ ಅನ್ವಯ ನಾವು ಬೇಲಿ ಹಾಕಿಕೊಂಡಿದ್ದೇವೆಯೇ ಹೊರತು, ಯಾರಿಗೂ ತೊಂದರೆ ಕೊಡುವ ಉದ್ದೇಶದಿಂದ ಅಲ್ಲ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಸ್ಪಷ್ಟಪಡಿಸಿದರು.

Add Asianetnews Kannada as a Preferred SourcegooglePreferred

ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿ, ಲಲಿತಮಹಲ್‌ ಸಮೀಪ ಹೆಲಿಪ್ಯಾಡ್‌ ನಿರ್ಮಿಸಲಾಗಿದೆ. ಅದಕ್ಕೂ ನಾವು ಯಾವುದೇ ಅಡ್ಡಿಯನ್ನುಂಟು ಮಾಡಿಲ್ಲ. ಸಾರ್ವಜನಿಕರಿಗೆ ತಪ್ಪು ಮಾಹಿತಿ ಹೋಗಬಾರದು ಎಂಬ ಉದ್ದೇಶದಿಂದ ಈ ಮಾಹಿತಿ ನೀಡುತ್ತಿದ್ದೇವೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಇಳಿಕೆ, ಗುಣಮುಖ ಸಂಖ್ಯೆ ಹೆಚ್ಚಳ

2020ರ ಜೂ.19ರಂದು ಕೋರ್ಟ್‌ ಆದೇಶ ನೀಡಿದ್ದು, ಕಾನೂನು ತಜ್ಞರ ಸಲಹೆ ಪಡೆದು ನಮಗೆ ಸೇರಿದ ಆಸ್ತಿಗೆ ಬೇಲಿ ಹಾಗೂ ನಾಮಫಲಕ ಅಳವಡಿಸಲಾಗಿದೆ ಎಂದರು. ಕೆಲವು ಮಾಧ್ಯಮಗಳಲ್ಲಿ ಸರ್ಕಾರ ಜಾಗವನ್ನು ಅತಿಕ್ರಮಿಸಿಕೊಂಡಂತೆ ವರದಿಯಾಗಿದೆ.

ಇದರಿಂದ ಸಾರ್ವಜನಿಕರಿಗೆ ತಪ್ಪು ಮಾಹಿತಿ ಹೋಗುತ್ತದೆ ಎಂಬ ಕಾರಣಕ್ಕೆ ನಾವು ಈ ವಿಷಯ ತಿಳಿಸುತ್ತಿದ್ದೇವೆ. ನ್ಯಾಯಾಲಯದ ಆದೇಶದ ಬಳಿಕವೂ ಹೆಲಿಪ್ಯಾಡ್‌ ಅನ್ನು ಕೆಲವರು ಬಳಸಿಕೊಂಡಿದ್ದಾರೆ. ಆದರೆ ನಾವು ಅದಕ್ಕೆ ಅಡ್ಡಿಪಡಿಸಿಲ್ಲ. ಮುಂದೆಯೂ ಅಡ್ಡಿಪಡಿಸುವುದಿಲ್ಲ.

ಈ ತಿಂಗಳಲ್ಲೇ ಕೊರೋನಾ ಲಸಿಕೆ: ಡಾ.ಸುಧಾಕರ್‌

ಆದರೆ ಆಸ್ತಿಯ ಸಂರಕ್ಷಣೆಯ ದೃಷ್ಟಿಯಿಂದ ಬೇಲಿ ಹಾಕಿದ್ದು, ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಜಾಗ ಬಿಟ್ಟಿದ್ದೇವೆ. ತೊಂದರೆ ಕೊಡುವುದೇ ನಮ್ಮ ಉದ್ದೇಶವಾಗಿದ್ದರೆ ನ್ಯಾಯಾಲಯದ ತೀರ್ಪಿನ ಅನ್ವಯ ಜೆಸಿಬಿ ತಂದು ಹೆಲಿಪ್ಯಾಡ್‌ ತೆರವುಗೊಳಿಸಬಹುತ್ತು. ಆದರೆ ಆ ಕೆಲಸ ಮಾಡಿಲ್ಲ ಎಂದು ತಿಳಿಸಿದರು.