ಮಲಪ್ರಭಾ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾದ ಕಾರಣ, ಕೃಷಿಗೆ ಹರಿಸಲಾಗುತ್ತಿರುವ ನೀರನ್ನು ಫೆಬ್ರವರಿ 15 ರಂದು ಸ್ಥಗಿತಗೊಳಿಸಲಾಗುವುದು. ಜುಲೈ ಅಂತ್ಯದವರೆಗಿನ ಕುಡಿಯುವ ನೀರಿನ ಅಗತ್ಯಕ್ಕಾಗಿ ನೀರನ್ನು ಕಾಯ್ದಿರಿಸಲಾಗಿದ್ದು, ಉಳಿದ ನೀರನ್ನು ಸದುಪಯೋಗಪಡಿಸಿಕೊಳ್ಳಲು ರೈತರಲ್ಲಿ ಮನವಿ ಮಾಡಲಾಗಿದೆ.
ಬೆಳಗಾವಿ: ಮಲಪ್ರಭಾ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿದಂತೆ ಮಲಪ್ರಭಾ ಜಲಾಶಯದಿಂದ ಕೃಷಿಗೆ ಹರಿಸಲಾಗುತ್ತಿರುವ ನೀರನ್ನು ಮುಂಬರುವ ಫೆ.೧೫ರಂದು ಸ್ಥಗಿತಗೊಳಿಸಲಾಗುತ್ತಿದೆ ಎಂದು ಇಲಾಖೆಯ ಸೂಪರಿಟೆಂಡೆಂಟ್ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಲಪ್ರಭಾ ಜಲಾಶಯದ ಐ.ಸಿ.ಸಿ ಸಭೆಯಲ್ಲಿ ಚರ್ಚಿಸಿದಂತೆ ಹಿಂಗಾರು ಹಂಗಾಮಿಗಾಗಿ ಇಲ್ಲಿಯವರೆಗೆ ಅಂದಾಜು 80 ದಿನಗಳ ವರೆಗೆ ಸತತವಾಗಿ ನೀರನ್ನು ಎಲ್ಲ ಕಾಲುವೆಗಳ ಮೂಲಕ ಹರಿಸಲಾಗುತ್ತಿದೆ. ಸದ್ಯಕ್ಕೆ ಜಲಾಶಯದ ನೀರಿನ ಮಟ್ಟವು 2066.91 ಅಡಿಯಿದ್ದು, ಕೇವಲ 19.333 ಟಿ.ಎಂ.ಸಿಯಷ್ಟು ಉಪಯುಕ್ತ ನೀರಿನ ಸಂಗ್ರಹ ಇದೆ. ಸದರಿ ಪ್ರಸಕ್ತ ಲಭ್ಯವಿರುವ ನೀರಿನಲ್ಲಿ 15.50 ಟಿ.ಎಂ.ಸಿ ನೀರನ್ನು ಮುಂಬರುವ ಜುಲೈ ಅಂತ್ಯದವರೆಗಿನ ಕುಡಿಯುವ ನೀರಿನ ಅವಶ್ಯಕತೆಗಳಿಗೆ ಕಾಯ್ದಿರಿಸಬೇಕಾಗಿದೆ.
ಮುಂದಿನ 15 ದಿನ ಮಾತ್ರ ಸಿಗಲಿದೆ ನೀರು
ಬಾಕಿ ಉಳಿದ ಸುಮಾರು 3.83 ಟಿ.ಎಂ.ಸಿ ನೀರನ್ನು ಮುಂದಿನ 15 ದಿನಗಳವರೆಗೆ ಮಾತ್ರ ಕೃಷಿಗಾಗಿ ಕಾಲುವೆಗಳ ಮೂಲಕ ಹರಿಸಬಹುದಾಗಿದೆ. ಆದ್ದರಿಂದ ಮಲಪ್ರಭಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತ ಬಾಂಧವರು ಸದರಿ ಬಾಕಿ ಪ್ರಮಾಣದ ನೀರನ್ನು ಕೃಷಿಗಾಗಿ ಸದುಪಯೋಗ ಪಡಿಸಿಕೊಳ್ಳಲು ಕೋರಲಾಗಿದೆ.
ಇದನ್ನೂ ಓದಿ: ಬತ್ತಿದ್ದ 40 ವರ್ಷದ ರಾಮನಗುಡ್ಡ ಕೆರೆಗೆ ನೀರು ತುಂಬಿಸುವ ಯೋಜನೆ ಫಲಪ್ರದ; 900 ಎಕರೆ ಜಮೀನಿಗೆ ನೀರಾವರಿ
ನವಿಲುತೀರ್ಥದ ಕನೀನಿನಿ ಸೂಪರಿಟೆಂಡೆಂಟ್ ಇಂಜಿನಿಯರ್ ಪ್ರಕಟಣೆ
ಎಲ್ಲ ಕಾಲುವೆಗಳ ಮೂಲಕ ಕೃಷಿಗೆ ಹರಿಸಲಾಗುತ್ತಿರುವ ನೀರನ್ನು ಫೆ.15ರಂದು ಸ್ಥಗಿತಗೊಳಿಸಲಾಗುತ್ತಿದೆ. ಆದ್ಧರಿಂದ ರೈತ ಬಾಂಧವರು ಸಹಕರಿಸಬೇಕೆಂದು ಸದಸ್ಯ ಕಾರ್ಯದರ್ಶಿಗಳು ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿ ಹಾಗೂ ನವಿಲುತೀರ್ಥದ ಕನೀನಿನಿ ಸೂಪರಿಟೆಂಡೆಂಟ್ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಒಂದೇ ಗ್ರಾಮದ 7 ಕೆರೆಗಳಿಗೆ ನೀರು ತುಂಬಿಸುವ 140 ಕೋಟಿಯ ಯೋಜನೆಗೆ ಸಿಕ್ತು ಚಾಲನೆ: ಅಂತರ್ಜಲಕ್ಕೆ 25 ಕೋಟಿ


