ನೀರು ಅಮೂಲ್ಯವಾದುದು, ರೈತರ ನಿಜವಾದ ಜೀವನಾಡಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು. 

ಕಲಘಟಗಿ (ಸೆ.04): ನೀರು ಅಮೂಲ್ಯವಾದುದು, ರೈತರ ನಿಜವಾದ ಜೀವನಾಡಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು. ಇತ್ತೀಚಿನ ದಿನಗಳಲ್ಲಿ ಕೆರೆಗಳ ಬಗ್ಗೆ ಸ್ವಲ್ಪ ಅಸಡ್ಡೆ ಮಾಡುತ್ತಿದ್ದೇವೆ, ಕೆರೆಗಳು ಹೂಳು ತುಂಬಿಕೊಂಡಿರುತ್ತವೆ. 'ನಮ್ಮೂರು ನಮ್ಮ ಕೆರೆ' ಮುಖಾಂತರ ನಾವು ವಿವಿಧ ಗ್ರಾಮಗಳ ಕೆರೆಗಳನ್ನು ಅಭಿವೃದ್ಧಿ ಮಾಡುತ್ತಿದ್ದೇವೆ. ಅದರ ಸುತ್ತಮುತ್ತ ಗಿಡಮರಗಳನ್ನು ನೆಡಬೇಕು. ಗ್ರಾಮ ಅಭಿವೃದ್ಧಿ ಹೊಂದಲು ನೀರು ಬೇಕು, ನೀರು ಬೇಕಾದರೆ ಕೆರೆ ಬೇಕು, ಕೆರೆ ಸಂರಕ್ಷಣೆಗೆ ನಾವು ನೀವೆಲ್ಲರೂ ಸೇರಿ ಮಾಡುವ ಕಾರ್ಯಕ್ರಮ 'ನಮ್ಮೂರು ನಮ್ಮ ಕೆರೆ' ಕಾರ್ಯಕ್ರಮ ಎಂದರು.

Add Asianetnews Kannada as a Preferred SourcegooglePreferred

ಕಾರ್ಯಕ್ರಮ ಉದ್ಘಾಟಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ, ಇದೊಂದು ಐತಿಹಾಸಿಕ ಕಾರ್ಯಕ್ರಮ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಕಲಘಟಗಿಗೆ ಬಂದು ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದ ಅಡಿ ಕೆರೆ ಹಸ್ತಾಂತರ ಮಾಡುತ್ತಿರುವುದು ಸಂತಸದ ಸಂಗತಿ. ಮಹಿಳಾ ಸಬಲೀಕರಣದಲ್ಲಿ ಕಲಘಟಗಿಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಇಡೀ ರಾಜ್ಯಕ್ಕೆ ಮಾದರಿಯಾಗಲಿ ಎಂದರು.

ಸಿದ್ದರಾಮಯ್ಯಗೆ ಬಡವರ ಮಕ್ಕಳು ಉದ್ಧಾರವಾಗಬಾರದು: ಪ್ರತಾಪ್‌ ಸಿಂಹ ವಾಗ್ದಾಳಿ

ಅಖಿಲ ಕರ್ನಾಟಕ ಜಿಲ್ಲಾ ಜನ ಜಾಗೃತಿ ಧರ್ಮಸ್ಥಳದ ಟ್ರಸ್ಟ್ ರಾಜ್ಯಾಧ್ಯಕ್ಷ ರಾಜಣ್ಣ ಕೊರವಿ ಮಾತನಾಡಿ, ಪೂಜ್ಯರ ಮಾರ್ಗದರ್ಶನದಲ್ಲಿ ಇಲ್ಲಿಯ ವರೆಗೆ 1.50 ಲಕ್ಷ ಜನರನ್ನು ಮದ್ಯವರ್ಜನ ಶಿಬಿರದಿಂದ ಒಳ್ಳೆಯ ಜೀವನಮಾರ್ಗಕ್ಕೆ ತಂದಿದ್ದೇವೆ. ರಾಜ್ಯದಲ್ಲಿ 618 ಕೆರೆಗಳ ಹೂಳೆತ್ತಿ ಅಭಿವೃದ್ಧಿಪಡಿಸಿದ್ದೇವೆ. ಇನ್ನೂ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ನಮ್ಮ ಸಂಸ್ಥೆ ತೊಡಗಿಕೊಂಡಿದೆ ಎಂದರು . ಡಾ. ವೀರೇಂದ್ರ ಹೆಗ್ಗಡೆಯವರಿಂದ ಬೆಲವಂತರ ಹಾಗೂ ಬೇಗೂರ(ತುಮರಿಕೊಪ್ಪ) ಗ್ರಾಪಂ ಹಾಗೂ ಕೆರೆ ಅಭಿವೃದ್ಧಿ ಸಮಿತಿಗೆ ಕೆರೆ ಹಸ್ತಾಂತರ ಮಾಡಲಾಯಿತು. ಮಾಸಾಶನ ವಿತರಣೆ, ವಿಶೇಷ ಚೇತನರಿಗೆ ವೀಲ್‌ಚೇರ್‌ ಹಾಗೂ ಬಡ ಮಕ್ಕಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ವಿತರಿಸಲಾಯಿತು.

ಬಿಜೆಪಿಯ 26 ಮಂದಿ ಸಂಸದರು ಗುಲಾಮಗಿರಿಯಲ್ಲಿದ್ದಾರೆ: ಮುಖ್ಯಮಂತ್ರಿ ಚಂದ್ರು

ಹನ್ನೆರಡು ಮಠದ ರೇವಣಸಿದ್ದ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಧ.ಗ್ರಾ. ಯೋಜನೆಯ ಟ್ರಸ್ಟಿ ಡಿ. ಸುರೇಂದ್ರಕುಮಾರ, ಯೋಜನೆಯ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ, ಜಿಲ್ಲಾ ಜನಜಾಗೃತಿ ವೇದಿಕೆ ಧಾರವಾಡ ಅಧ್ಯಕ್ಷ ಸಂತೋಷ ಶೆಟ್ಟಿ, ಉಪಾಧ್ಯಕ್ಷ ಪ್ರಭಾಕರ ನಾಯ್ಕ, ಬೇಗೂರ ಗ್ರಾಪಂ ಅಧ್ಯಕ್ಷೆ ನಾಗವ್ವ ಅಂಗಡಿ, ಬೆಲವಂತರ ಗ್ರಾಪಂ ಅಧ್ಯಕ್ಷೆ ಗೀತಾ ಬಸನಕೊಪ್ಪ, ರಾಮಪ್ಪ ಕೌಲಗೇರಿ, ಎಸ್.ವಿ. ಪಾಟೀಲ, ಬೆಲವಂತರ ಹಾಗೂ ತುಮರಿಕೊಪ್ಪ ಗ್ರಾಮದ ಕೆರೆ ಸಮಿತಿ ಸರ್ವ ಸದಸ್ಯರು ತಾಲೂಕಿನ ವಿವಿಧ ಒಕ್ಕೂಟಗಳ ಅಧ್ಯಕ್ಷರು ಪದಾಧಿಕಾರಿಗಳು, ಪ್ರಗತಿ ಬಂಧು ಸ್ವ ಸಹಾಯ ಸಂಘದ ಸರ್ವಸದಸ್ಯರು ಇದ್ದರು. ಪ್ರದೀಪ ಶೆಟ್ಟಿ ಸ್ವಾಗತಿಸಿದರು, ಪ್ರಶಾಂತ ಎಸ್. ವಂದಿಸಿದರು.