ವಿಭಿನ್ನ ಶೈಲಿಯ ತಿಂಡಿ ಮತ್ತು ಊಟವನ್ನು ನೀಡುತ್ತಿದ್ದ ವಿವಿ ಪುರಂ ಫುಡ್ ಸ್ಟ್ರೀಟ್ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ಈ ನಡುವೆ  ಜುಲೈ 15ರೊಳಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ರೀ ಓಪನ್ ಮುಂದಿನ ತಿಂಗಳು ಆಗಲಿದೆ.

ಬೆಂಗಳೂರು (ಜೂ.18): ಪ್ರವಾಸಿಗರು ಮತ್ತು ವಿದೇಶಿಗರು ಸೇರಿದಂತೆ ಬೆಂಗಳೂರಿನ ನಿವಾಸಿಗಳಿಗೆ ವಿಭಿನ್ನ ಶೈಲಿಯ ತಿಂಡಿ ಮತ್ತು ಊಟವನ್ನು ನೀಡುತ್ತಿದ್ದ ವಿವಿ ಪುರಂ ಫುಡ್ ಸ್ಟ್ರೀಟ್ ( VV Puram Food Street ) ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿದೆ. ಕಮರ್ಷಿಯಲ್ ಸ್ಟ್ರೀಟ್, ಚರ್ಚ್ ಸ್ಟ್ರೀಟ್ ಮಾದರಿ ವಿವಿ ಪುರಂ ಫುಡ್ ಸ್ಟ್ರೀಟ್ ಅನ್ನು ನವೀಕರಿಸಲು ಬಿಬಿಎಂಪಿ 2022 ರಲ್ಲಿ 6 ಕೋಟಿ ರೂ. ಮೀಸಲಿಟ್ಟಿತ್ತು. ಆದರೆ ಇನ್ನೂ ವಿವಿ ಪುರಂ ಫುಡ್ ಸ್ಟ್ರೀಟ್‌ಗೆ ಹೊಸ ಸ್ಪರ್ಶ ಸಿಕ್ಕಿಲ್ಲ. ಜುಲೈ 15ರೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿದೆ.

Add Asianetnews Kannada as a Preferred SourcegooglePreferred

ವಿವಿ ಪುರಂ ಫುಡ್ ಸ್ಟ್ರೀಟ್‌ಗೆ ಪ್ರತಿದಿನ ಸಾವಿರಾರು ಜನರು ಭೇಟಿ ನೀಡುತ್ತಾರೆ. ಸಾಯಂಕಾಲ ಇಲ್ಲಿ ಬೀದಿ ಬದಿಯಲ್ಲಿ ನಿಂತು ರುಚಿಕರವಾದ ಊಟ ಸವಿಯಲು ಜನ ಸೇರುತ್ತಾರೆ. ಅಲ್ಲದೆ ಈ ರಸ್ತೆ ಪ್ರವಾಸಿಗರು ಮತ್ತು ಯೂಟ್ಯೂಬರ್‌ಗಳಿಗೆ ನೆಚ್ಚಿನ ಸ್ಥಳವಾಗಿದೆ. ಸಜ್ಜನ್ ರಾವ್ ವೃತ್ತದಿಂದ ಮಿನರ್ವ ವೃತ್ತದವರೆಗೆ ಫುಡ್ ಸ್ಟ್ರೀಟ್ 40ಕ್ಕೂ ಹೆಚ್ಚು ಆಹಾರ ಮಳಿಗೆಗಳನ್ನು ಹೊಂದಿದೆ. ಅಲ್ಲದೆ ತಳ್ಳುಗಾಡಿಗಳಲ್ಲಿ ವಿವಿಧ ತಿಂಡಿಗಳನ್ನು ಮಾರಾಟ ಮಾಡಲಾಗುತ್ತದೆ.

ಮತ್ತೆ ರಾಜಕೀಯ ಸನ್ಯಾಸತ್ವದ ಬಗ್ಗೆ ಡಿ.ಕೆ. ಸುರೇಶ್ ಮಾತು: ಡಿಕೆಶಿ ತಮ್ಮನಿಗಿರುವ ಕೊರಗಾದ್ರೂ ಏನು?

ಸಂಜೆಯ ವೇಳೆಗೆ ಈ ರಸ್ತೆಯಲ್ಲಿ ಆಹಾರ ಪ್ರಿಯರ ದಂಡೇ ಹರಿದು ಬರುತ್ತಿರುತ್ತದೆ. ಆದರೆ, ಈ ಭಾಗದಲ್ಲಿ ಮೂಲ ಸೌಕರ್ಯಗಳಿಲ್ಲದೆ ಗ್ರಾಹಕರು ಹಾಗೂ ಅಂಗಡಿ ಮಾಲೀಕರು ದಿನವೂ ಒಂದಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ವಾಹನ ನಿಲುಗಡೆಗೂ ಸರಿಯಾದ ವ್ಯವಸ್ಥೆ ಇಲ್ಲಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳು ಅಡ್ಡಾದಿಡ್ಡಿಯಾಗಿ ನಿಂತಿವೆ. 

7 ಮೀಟರ್ ಇದ್ದ ರಸ್ತೆಯನ್ನು 5 ಮೀಟರ್‌ಗೆ ಇಳಿಸಿ, ಪಾದಚಾರಿಗಳು, ಆಹಾರ ಪ್ರಿಯರನ್ನು ಗಮನದಲ್ಲಿಟ್ಟುಕೊಂಡು ಹಲವು ಮೂಲ ಸೌಕರ್ಯಗಳನ್ನು ಒದಗಿಸಿ ವಿವಿ ಪುರಂ ಫುಡ್‌ಸ್ಟ್ರೀಟ್‌ಗೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ವಾಹನ ನಿಲುಗಡೆ ವ್ಯವಸ್ಥೆ, ಪ್ರತಿ ಮಳಿಗೆಗೆ ಕೈ ತೊಳೆಯಲು ವ್ಯವಸ್ಥೆ, ರಸ್ತೆ ಬದಿಯಲ್ಲಿಯೇ ಕುಳಿತು/ ನಿಂತು ಆಹಾರ ಸೇವಿಸಲು ವ್ಯವಸ್ಥೆ ಸೇರಿ ಹಲವು ಅಭಿವೃದ್ಧಿ ಕಾರ್ಯ ಮಾಡಲಾಗಿದೆ.

ಹಲವೆಡೆ ಫುಟ್‌ಪಾತ್‌ ಒತ್ತುವರಿಯಾಗಿದ್ದು, ಜನ ಸಂಚಾರಕ್ಕೆ ತೊಂದರೆಯಾಗಿದೆ. ಮತ್ತೊಂದೆಡೆ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಹೀಗಾಗಿ, ಫುಡ್ ಸ್ಟ್ರೀಟ್ ಅನ್ನು ಮರುವಿನ್ಯಾಸಗೊಳಿಸಲು ಬಿಬಿಎಂಪಿ ನಿರ್ಧರಿಸಿತ್ತು. 2022ರ ಡಿಸೆಂಬರ್‌ನಲ್ಲಿ ಬಿಬಿಎಂಪಿ ಈ ಕುರಿತು ಪ್ರಸ್ತಾವನೆ ಸಲ್ಲಿಸಿತ್ತು. ಅದರಂತೆ ನಾಲ್ಕು ತಿಂಗಳೊಳಗೆ ನವೀಕರಣ ಮಾಡಬೇಕಿತ್ತು.

ವಿದ್ಯುತ್ ದರ ಕಡಿಮೆಯಾಗಲ್ಲ ಎಂದ ಸಿಎಂ: ಕರ್ನಾಟಕ ಬಂದ್‌ಗೆ ಕರೆಕೊಟ್ಟ ಕೆಸಿಸಿಐ

ಆದರೆ ಕಾಮಗಾರಿ ಪ್ರಗತಿಯಲ್ಲಿದ್ದು, ರಸ್ತೆಗಳನ್ನು ಅಗೆದು ಪೈಪ್ ಅಳವಡಿಸಲಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಣಿಕಾಂತ್ ಗುಪ್ತಾ ಮಾತನಾಡಿ, ‘ಬೆಂಗಳೂರು ಮಳೆ ಹಾಗೂ ಚುನಾವಣೆಯೇ ಕಾಮಗಾರಿ ವಿಳಂಬಕ್ಕೆ ಕಾರಣ ಎಂದಿದ್ದಾರೆ. 

ಕಾಮಗಾರಿ ನಡೆಯುತ್ತಿರುವ ಕಾರಣ ಸಂಜೆ 6 ರಿಂದ ಅಂಗಡಿಗಳನ್ನು ತೆರೆಯಲು ಅನುಮತಿಸಲಾಗಿದೆ. ಈ ಹಿಂದೆ ಇಲ್ಲಿ ಸಂಜೆ 4 ಗಂಟೆಗೆ ಅಂಗಡಿಗಳು ತೆರೆಯುತ್ತಿದ್ದವು. ಬಿಬಿಎಂಪಿ ವಲಯ ಆಯುಕ್ತ (ದಕ್ಷಿಣ) ಜೈರಾಮ್ ರಾಜಪುರ ಮಾತನಾಡಿ, ಚುನಾವಣೆಯಂತಹ ಅನಿವಾರ್ಯ ಕಾರಣಗಳಿಂದ ನವೀಕರಣ ವಿಳಂಬವಾಗಿದೆ ಆದರೆ ಜುಲೈ 15 ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ ಎಂದಿದ್ದಾರೆ.