ಹಣ-ಹೆಂಡಕ್ಕೆ ಮತ ಮಾರಿಕೊಳ್ಳದಂತೆ ಅರಿವು: ಗಾನಯೋಗಿ ಸಂಘದ ಕಾರ್ಯಕ್ಕೆ ಜನಮೆಚ್ಚುಗೆ 

ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ(ಅ.26): ಮಹಾನಗರ ಪಾಲಿಕೆ ಚುನಾವಣೆಯ ಅಬ್ಬರ ಜೋರಾಗಿದೆ. ಬರುವ ಅ. 28 ರಂದು ಮತದಾನ ನಡೆಯಲಿದ್ದು ಇಂದಿನಿಂದ(ಬುಧವಾರ) ಮನೆ ಮನೆ ಪ್ರಚಾರ ಶುರುವಾಗಿದೆ. ಈ ನಡುವೆ ಅತ್ಯಮೂಲ್ಯವಾದ ಮತವನ್ನ ಮಾರಿಕೊಳ್ಳದಂತೆ ವಿಜಯಪುರದ ಯೂಟ್ಯೂಬ್ ಸ್ಟಾರ್ ತನ್ನ ಸಮಾಜಮುಖಿ ಸಂಘದ ಜೊತೆಗೆ ಅಭಿಯಾನ ನಡೆಸುತ್ತಿದ್ದಾನೆ.

ಗಾನಯೋಗಿ ಸಂಘದಿಂದ ಮತ ಜಾಗೃತಿ

ಒಂದಿಲ್ಲೊಂದು ಸಮಾಜಮುಖಿ ಕೆಲಸಗಳಿಂದ ಗುರುತಿಸಿಕೊಂಡಿರುವ ಗಾನಯೋಗಿ ಕಲಾ ಸಂಘವು ಮಹಾನಗರ ಪಾಲಿಕೆ ಚುನಾವಣೆ ವೇಳೆಯು ಜನರಲ್ಲಿ ಮತಜಾಗೃತಿ ಮೂಡಿಸುವ ಕೆಲಸ ಮಾಡ್ತಿದೆ. ಸಂಘದ ಮುಖಂಡ ಹಾಗೂ ಯೂಟ್ಯೂಬ್ ಸ್ಟಾರ್ ಆಗಿರುವ ಪ್ರಕಾಶ್ ಆರ್.ಕೆ. ತಮ್ಮ ಸಂಗಡಿಗರ ಜೊತೆಗೆ ನಗರದ ಪ್ರಮುಖ ಜಾಗಗಳಲ್ಲಿ ತೆರಳಿ ಮತದಾರರಲ್ಲಿ ಮತದಾನದ ಅರಿವು ಮೂಡಿಸುತ್ತಿದ್ದಾರೆ. ಮತದ ಮೌಲ್ಯವೆನು? ಮತದಾನದಿಂದ ಅಭಿವೃದ್ಧಿಗೆ ಹೇಗೆಲ್ಲ ಕೊಡುಗೆ ನೀಡಬಹುದು ಎನ್ನುವ ಬಗ್ಗೆ ಜಾಗೃತಿ ಮೂಡಿಸುತ್ತಿದೆ. 

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಜತೆಗೆ ಮೈತ್ರಿ ಇಲ್ಲ: ಓವೈಸಿ

ಹಣ ಹೆಂಡಕ್ಕೆ ಮತ ಮಾರಿಕೊಳ್ಳದಿರಿ

ವಿಶೇಷ ರೀತಿಯಲ್ಲಿ ನಾಮ ಫಲಕಗಳನ್ನ ರೆಡಿ ಮಾಡಿರುವ ಸಂಘದ ಸದಸ್ಯರು ಮತದಾನದ ಬಗ್ಗೆ ಅರಿವು ಮೂಡಿಸ್ತಿದ್ದಾರೆ. ಹಣ, ಹೆಂಡಕ್ಕಾಗಿ ಮತಗಳನ್ನ ಮಾರಿಕೊಳ್ಳಬೇಡಿ ಎಂದು ಜಾಗೃತಿ ಮೂಡಿಸುತ್ತಿದ್ದಾರೆ. ಹಣಕ್ಕಾಗಿ, ಹೆಂಡಕ್ಕಾಗಿ, ಆಮಿಷಕ್ಕೆ ಒಳಗಾಗಿ ಮತ ಮಾರಿಕೊಂಡರೆ ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ದ್ರೋಹ ಎಂದು ಮತದಾರರಲ್ಲಿ ಮನವರಿಕೆ ಮಾಡುತ್ತಿದ್ದಾರೆ. 

ನೋಟ್‌ಗೆ NO ಹೇಳಿ.. ಓಟ್‌ಗೆ OK ಹೇಳಿ

ಅಭ್ಯರ್ಥಿಗಳು ನೀಡುವ ನೋಟ್‌ಗೆ ಮಾರು ಹೋಗಬೇಡಿ, ನೋಟ್ ನೋ ಅಂತಾ ಹೇಳಿ ಎಂದು ಫಲಕಗಳನ್ನ ಹಿಡಿದು ಜಾಗೃತಿ ಮೂಡಿಸುವ ಕೆಲಸ ಮಾಡ್ತಿದ್ದಾರೆ. ನೋಟ್ ನೋ... ಓಟ್ ಗೆ ಓಕೆ ಹೇಳಿ ಎನ್ತಿದ್ದಾರೆ. ಹಣಕ್ಕಾಗಿ, ಕ್ವಾಟರ್ ಬಾಟಲ್, ಡಾಬಾದಲ್ಲಿ ಊಟ ಮಾಡಿಸ್ತಾರೆ ಎಂದು ಮತ ಮಾರಿಕೊಳ್ಳಬೇಡಿ, ಮತದಾನದ ಹಕ್ಕು, ಜವಾಬ್ದಾರಿ ಕೂಡ ಆಗಿದೆ ಇದನ್ನ ಮರೆಯಬೇಡಿ ಎಂದು ಸಾರಿ ಸಾರಿ ಹೇಳುವ ಮೂಲಕ ಮತದಾರರಲ್ಲಿ ಅರಿವು ಮೂಡಿಸ್ತಿದ್ದಾರೆ. 

ಮಾರ್ಕೆಟ್, ಸರ್ಕಲ್‌ಗಳಲ್ಲಿ ಜಾಗೃತಿ ಕಾರ್ಯ

ನಿತ್ಯ ಜನರು ಸೇರುವ ಜಾಗದಲ್ಲಿ ಹೋಗುವ ಗಾನಯೋಗಿ ಸಂಘದ ಸದಸ್ಯರು ಮತದಾರರನ್ನ ಭೇಟಿ ಮಾಡ್ತಿದ್ದಾರೆ. ಗಾಂಧಿ ವೃತ್ತದ ಲಾಲ್ ಬಹದ್ದೂರ್ ಶಾಸ್ತ್ರೀ ಮಾರುಕಟ್ಟೆ, ಹೂವಿನ ಮಾರ್ಕೆಟ್, ಕಾಯಿಪಲ್ಲೆ ಮಾರ್ಕೆಟ್, ವಾಜಪೇಯಿ ರಸ್ತೆ, ಸಿದ್ದೇಶ್ವರ ದೇಗುಲ ಸೇರಿದಂತೆ ವಾರ್ಡ್‌ಗಳಲ್ಲು ತೆರಳಿ ಸಂಗಡಿಗರ ಜೊತೆಗೆ ಜಾಗೃತಿ ಮೂಡಿಸುತ್ತಿದ್ದಾರೆ. 

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ, ಮತಗಟ್ಟೆ ವ್ಯಾಪ್ತಿಯ 100 ಮೀ.ಪ್ರದೇಶದಲ್ಲಿ ನಿಷೇಧಾಜ್ಞೆ

ಯೂಟ್ಯೂಬ್ ಸ್ಟಾರ್ ಪ್ರಕಾಶ್ ಆರ್.ಕೆ.ಆಂಡ್ ಟೀಂ

ಕೇವಲ ಮತ ಜಾಗೃತಿ ಅಷ್ಟೇ ಅಲ್ಲ, ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲಿ ಗಾನಯೋಗಿ ಸಂಘ ಗುರುತಿಸಿಕೊಂಡಿದೆ. ಅಷ್ಟೇ ಯಾಕೆ ಗಾನಯೋಗಿ ಕಲಾ ಸಂಘವನ್ನ ಮುನ್ನಡೆಸುತ್ತಿರುವ ಪ್ರಕಾಶ್ ಆರ್ ಕೆ ಎಲ್ಲರಿಗೂ ಚಿರಪರಿಚಿತ. ತನ್ನ ಕಾಮಿಡಿ ವಿಡಿಯೋಗಳ ಮೂಲಕ ಉತ್ತರ ಕರ್ನಾಟಕದಲ್ಲಿ ಮನೆಮಾತಾಗಿದ್ದಾರೆ. ಇದರ ಜೊತೆ ಜೊತೆಗೆ ತಾನೊಬ್ಬ ಯೂಟ್ಯೂಬ್ ಸ್ಟಾರ್ ಅನ್ನೋದನ್ನ ಬದಿಗಿಟ್ಟು ಸಾಮಾಜಿಕ ಕಾರ್ಯಗಳಲ್ಲು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತಮ್ಮದೆ ಯಾದ ಗೆಳೆಯರ ಗುಂಪು ಕಟ್ಟಿಕೊಂಡಿರುವ ಪ್ರಕಾಶ್ ಆರ್ ಕೆ ಹಾಳಾದ ಸರ್ಕಾರಿ ಶಾಲೆ, ಬಸ್ ಬಸ್ ನಿಲ್ದಾಣ, ಸಮುದಾಯ ಭವನ ಸೇರಿದಂತೆ ಅನೇಕ ಕಡೆಗಳಲ್ಲಿ ಪೇಂಟಿಂಗ್ ಜೊತೆಗೆ ಮರು ಅಭಿವೃದ್ಧಿಯ ಮೂಲಕ ಸದ್ದು ಮಾಡಿದ್ದರು. ಈಗ ವಿಶೇಷ ರೀತಿಯಲ್ಲಿ, ತಮ್ಮದೆ ಸ್ಟೈಲ್‌ನಲ್ಲಿ ಮತದಾನ ಜಾಗೃತಿ ಮೂಡಿಸ್ತಿದ್ದಾರೆ.

ಬಿಗ್3 ಯಲ್ಲೂ ಗಾನಯೋಗಿ ಸಂಘ ಹೀರೋ

ಗಾನಯೋಗಿ ಸಂಘದ ಮೂಲಕ ಯೂಟ್ಯೂಬ್ ಕಾಮಿಡಿ ಸ್ಟಾರ್ ಪ್ರಕಾಶ್ ಆರ್ ಮಾಡ್ತಿರುವ ಸಮಾಜಮುಖಿ ಕೆಲಸವನ್ನ ಏಷ್ಯಾನೆಟ್ ಸುವರ್ಣ ನ್ಯೂಸ್ ಗುರುತಿಸಿತ್ತು. ಬಿಗ್3 ಹೀರೋ ಕಾರ್ಯಕ್ರಮದಲ್ಲಿ ಪ್ರಕಾಶ್ ಆರ್ ಕೆ ಹಾಗೂ ತಂಡ ಮಾಡ್ತಿರೋ ಸಾಮಾಜಿಕ ಕಾರ್ಯಗಳನ್ನ ರಾಜ್ಯದ ಜನರಿಗೆ ತಲುಪಿಸುವ ಕಾರ್ಯ ಮಾಡಲಾಗಿದೆ. ಹಳೆ ಸರ್ಕಾರಿ ಶಾಲೆಗಳ ಅಭಿವೃದ್ಧಿ, ಬಸ್ ನಿಲ್ದಾಣಗಳ ನವೀಕರಣ, ಬಡವರಿಗೆ ಸಹಾಯ, ವಾಟರ್ ಟ್ಯಾಂಕ್‌ಗಳಿಗೆ ಪೇಂಟಿಂಗ್, ಹಾಳಾದ ಸರ್ಕಾರಿ ಕಟ್ಟಡಗಳ ದುರಸ್ತಿ ಕಾರ್ಯವನ್ನು ಈ ಸಂಘ ಮಾಡ್ತಿದೆ.. ಇವರ ಸಾಮಾಜಿಕ ಕಾರ್ಯಗಳು ಹೀಗೆ ಮುಂದುವರೆಯಲಿ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಮ್ asianetsuvarnanews.com ಹಾರೈಸುತ್ತದೆ.