ಭೀಮಾ ತೀರದ ಕುಖ್ಯಾತ ಹಂತಕ ಬಾಗಪ್ಪ ಹರಿಜನನ ಶಿಷ್ಯ ರೌಡಿಶೀಟರ್ ತುಳಸಿರಾಮ ಹರಿಜನ ವಿರುದ್ಧ ವಿಜಯಪುರ ಜಿಲ್ಲಾಡಳಿತ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಂಡಿದೆ. ಸಮಾಜ ವಿರೋಧಿ ಚಟುವಟಿಕೆ ಮತ್ತು ಇತ್ತೀಚೆಗೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯಾಗಿ ಸುದ್ದಿಯಾಗಿದ್ದ ಈತನನ್ನು ಚಾಮರಾಜನಗರ ಜೈಲಿಗೆ ಕಳುಹಿಸಲು ಆದೇಶಿಸಲಾಗಿದೆ.

ವಿಜಯಪುರ (ಜು.10): ಭೀಮಾ ತೀರದ ಕುಖ್ಯಾತ ಹಂತಕ ಬಾಗಪ್ಪ ಹರಿಜನನ ಶಿಷ್ಯ ಹಾಗೂ ರೌಡಿಶೀಟರ್ ತುಳಸಿರಾಮ ಹರಿಜನ ಅಲಿಯಾಸ್ ಬನಸೋಡೆಗೆ ವಿಜಯಪುರ ಜಿಲ್ಲಾಡಳಿತ ಬಿಸಿ ಮುಟ್ಟಿಸಿದೆ. ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಈತನ ವಿರುದ್ಧ ಗೂಂಡಾ ಕಾಯ್ದೆಯಡಿ (Goonda Act) ಕ್ರಮ ಕೈಗೊಂಡಿರುವ ವಿಜಯಪುರ ಜಿಲ್ಲಾಧಿಕಾರಿ ಡಾ. ಆನಂದ್ ಕೆ., ಈತನನ್ನು ಚಾಮರಾಜನಗರ ಜಿಲ್ಲಾ ಜೈಲಿನಲ್ಲಿರಿಸಲು ಆದೇಶ ಹೊರಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೂಲತಃ ಇಂಡಿ ತಾಲೂಕಿನ ಅರ್ಜನಾಳ ಗ್ರಾಮದವನಾದ ತುಳಸಿರಾಮ ಹರಿಜನ, ಪ್ರಸ್ತುತ ವಿಜಯಪುರದ ಗಣೇಶ್ ನಗರದಲ್ಲಿ ವಾಸವಾಗಿದ್ದನು. ಈತ ವೃತ್ತಿಪರ ಅಪರಾಧಿಯಾಗಿದ್ದು, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತರುತ್ತಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ರವಿ ಮೇಲಿನಕೇರಿ ಮತ್ತು ಸುಶೀಲ್ ಕಾಳೆ ಹತ್ಯೆ ಪ್ರಕರಣಗಳ ಕಿಂಗ್ ಪಿನ್ ಆಗಿದ್ದ ಈತನ ಮೇಲೆ ಭಾರತೀಯ ದಂಡ ಸಂಹಿತೆ (IPC) ಮತ್ತು ಭಾರತೀಯ ನ್ಯಾಯ ಸಂಹಿತೆ-2023ರ ಅಡಿಯಲ್ಲಿ ಹಲವು ಗಂಭೀರ ಪ್ರಕರಣಗಳು ದಾಖಲಾಗಿವೆ.

ವೈರಲ್ ವಿಡಿಯೋ ಮತ್ತು ರಾಜಕೀಯ ನಂಟು:

ಇತ್ತೀಚಿನ ದಿನಗಳಲ್ಲಿ ತುಳಸಿರಾಮ ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಸಕ್ರಿಯನಾಗಿದ್ದನು. ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಬಿಲ್ಡಪ್ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಾಗಿದ್ದನು. ಅಷ್ಟೇ ಅಲ್ಲದೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಹೂಗುಚ್ಛ ನೀಡಿ ಶುಭ ಕೋರಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದನು. ಇದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಹಾಗೂ ಟೀಕೆಗೆ ಕಾರಣವಾಗಿತ್ತು. ಅಪರಾಧ ಲೋಕದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗೆ ರಾಜಕೀಯ ನಾಯಕರು ಪ್ರೋತ್ಸಾಹ ನೀಡುತ್ತಿದ್ದಾರೆಯೇ ಎಂಬ ಪ್ರಶ್ನೆಗಳು ಎದ್ದಿದ್ದವು.

ಈ ಬೆಳವಣಿಗೆಗಳ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ, ಈತನನ್ನು ವಿಜಯಪುರ ಜಿಲ್ಲೆಯಿಂದ ದೂರವಿಡಲು ನಿರ್ಧರಿಸಿದೆ. ಕರ್ನಾಟಕ ಅಕ್ರಮ ಕಳ್ಳಭಟ್ಟಿ ಸರಾಯಿ ವ್ಯವಹಾರ ಹಾಗೂ ಗೂಂಡಾ ಚಟುವಟಿಕೆಗಳ ತಡೆ ಕಾಯ್ದೆ 1985ರ ಅಡಿಯಲ್ಲಿ ಈತನನ್ನು ಬಂಧಿಸಿ ಚಾಮರಾಜನಗರ ಜೈಲಿಗೆ ಕಳುಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಈ ಕಠಿಣ ಕ್ರಮ ಕೈಗೊಂಡಿದ್ದಾರೆ.