ಈ ಯೋಜನೆಗೆ ಈಗಾಗಲೇ 800 ಕೋಟಿ ಬಿಡುಗಡೆಯಾಗಿದೆ. ಎರಡು ಹಂತದಲ್ಲಿ ಈ ಯೋಜನೆ ಕೈಗೊಳ್ಳಲಾಗುವುದು. ಎರಡು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ. ಈ ಯೋಜನೆಯಿಂದ ವಿಜಯಪುರ, ಇಂಡಿ ಹಾಗೂ ಚಡಚಣ ಮೂರು ತಾಲೂಕಿನ 43 ಹಳ್ಳಿಗಳಿಗೆ ಕುಡಿಯುವ ನೀರು ಹಾಗೂ ನೀರಾವರಿಗೆ ಅನುಕೂಲವಾಗಲಿದೆ: ರಮೇಶ ಜಿಗಜಿಣಗಿ 

ವಿಜಯಪುರ(ಮಾ.08): ಮಾರ್ಚ್‌ 9ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಯ ಹೊರ್ತಿ ಗ್ರಾಮಕ್ಕೆ ಆಗಮಿಸಿ ಸುಮಾರು .3200 ಕೋಟಿ ವೆಚ್ಚದ ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.

Add Asianetnews Kannada as a Preferred SourcegooglePreferred

ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಗೆ ಈಗಾಗಲೇ 800 ಕೋಟಿ ಬಿಡುಗಡೆಯಾಗಿದೆ. ಎರಡು ಹಂತದಲ್ಲಿ ಈ ಯೋಜನೆ ಕೈಗೊಳ್ಳಲಾಗುವುದು. ಎರಡು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ. ಈ ಯೋಜನೆಯಿಂದ ವಿಜಯಪುರ, ಇಂಡಿ ಹಾಗೂ ಚಡಚಣ ಮೂರು ತಾಲೂಕಿನ 43 ಹಳ್ಳಿಗಳಿಗೆ ಕುಡಿಯುವ ನೀರು ಹಾಗೂ ನೀರಾವರಿಗೆ ಅನುಕೂಲವಾಗಲಿದೆ. 28,000 ಹೆಕ್ಟೇರ್‌ ಪ್ರದೇಶ ನೀರಾವರಿಗೆ ಒಳಪಡಲಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಆಲಮಟ್ಟಿ ಅಣೆಕಟ್ಟೆಯಿಂದ 3.245 ಟಿಎಂಸಿ ನೀರು ಈ ಯೋಜನೆಗೆ ಹಂಚಿಕೆಯಾಗಿದೆ ಎಂದು ಹೇಳಿದರು.

ವಿಜಯಪುರದ ಅತಿರಥರ ಅಖಾಡ: ಹೈವೋಲ್ಟೇಜ್ ಕ್ಷೇತ್ರದಲ್ಲಿ ಪ್ರಬಲರು ಯಾರು..?

ಈ ಯೋಜನೆಗೆ ಈ ಭಾಗದ ರೈತರಿಂದ ಬಹು ವರ್ಷಗಳಿಂದ ಬೇಡಿಕೆ ಇತ್ತು. ಈ ಸಂಬಂಧ ರೈತರು ಸಾಕಷ್ಟುಹೋರಾಟ ನಡೆಸಿದ್ದರು. ರೈತರ ಈ ಭಾವನೆಯನ್ನು ಬಿಜೆಪಿ ಸರ್ಕಾರ ಅರಿತುಕೊಂಡು ಸುಮಾರು . 3200 ಕೋಟಿ ಯೋಜನೆಗೆ ಮಂಜೂರಾತಿ ನೀಡಿದೆ ಎಂದರು.

ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಜಾರಿಯಾಗಬೇಕಾದರೆ ರಾಜಕೀಯ ಇಚ್ಚಾಶಕ್ತಿ ಅವಶ್ಯವಾಗಿತ್ತು. ಅದಕ್ಕೆ ನಮ್ಮ ಉತರ ಕರ್ನಾಟಕದವರೇ ನೀರಾವರಿ ಮಂತ್ರಿಯಾಗಬೇಕಾಗಿತ್ತು. ಇಂದು ನಮ್ಮ ಸಹೋದರ ಗೋವಿಂದ ಕಾರಜೋಳ ನೀರಾವರಿ ಮಂತ್ರಿಯಾಗಿದ್ದರಿಂದ ಇಷ್ಟುದೊಡ್ಡ ಯೋಜನೆ ಜಾರಿಗೊಳಿಸಲು ಸಾಧ್ಯವಾಗಿದೆ. ಈ ಯೋಜನೆಗೆ ಮೊದಲ ಹಂತದಲ್ಲಿ .800 ಕೋಟಿ ಬಿಡುಗಡೆಯಾಗಿದೆ. ಇಂಡಿ ತಾಲೂಕಿನ 19 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೂ ಅಂದೇ ಚಾಲನೆ ನೀಡಲಾಗುವುದು ಎಂದರು.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಮೇಲೆ ಹಾಗೂ ಗೋವಿಂದ ಕಾರಜೋಳ ಅವರು ಜಲ ಸಂಪನ್ಮೂಲ ಸಚಿವರಾದ ಮೇಲೆ ಈ ಯೋಜನೆ ಕಾರ್ಯಗತವಾಗಿದೆ. ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಜಾರಿಗೊಳಿಸಿದ ಶ್ರೇಯಸ್ಸು ರೈತಪರ ಹೋರಾಟ ಮಾಡಿಕೊಂಡು ಉಪವಾಸ ಧರಣಿ ಮಾಡಿದ್ದ ಅಣ್ಣಪ್ಪ ಖೈನೂರ ಹಾಗೂ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿಅವರಿಗೆ ಸಲ್ಲುತ್ತದೆ ಎಂದು ಜಿಗಜಿಣಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅವರು ಜನರಿಗೆ ಮನವಿ ಮಾಡಿಕೊಂಡರು.

ವಿಜಯಪುರ ರೈಲ್ವೆಗೆ 50 ಕೋಟಿ:

ವಿಜಯಪುರ ಮಾರ್ಗದಲ್ಲಿ ರೈಲುಗಳ ಓಡಾಟ ಹೆಚ್ಚಾಗಿರುವುದರಿಂದ ರೈಲಿನ ವೇಳಾ ಪಟ್ಟಿಗೆ ರೈಲು ಓಡಾಟ ನಿರ್ವಹಣೆಯಲ್ಲಿ ತೊಂದರೆ ಆಗುತ್ತಿತ್ತು. ಆ ತೊಂದರೆ ನಿವಾರಣೆ ಮಾಡಲು ಕೇಂದ್ರ ಸರ್ಕಾರ 50 ಕೋಟಿ ವೆÜಚ್ಚದಲ್ಲಿ ಹೊಸ ಡಿಫೋ ಕೋಚ್‌ ನಿರ್ಮಾಣ ಮಾಡಲಾಗುತ್ತಿದೆ. ದೇಶಾದ್ಯಂತ 1275 ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಕಗೇರಿಸಲು ವರದಿ ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರ 1118 ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ಅನುಮತಿ ನೀಡಿತ್ತು. ಈ ಪೈಕಿ ವಿಜಯಪರ ರೈಲು ನಿಲ್ದಾಣವೂ ಒಂದಾಗಿದೆ ಎಂದು ಮಾಹಿತಿ ನೀಡಿದರು.

ಹೊಸ ಡಿಪೋ ಕೋಚ್‌ ಸ್ಥಾಪನೆಯಿಂದ ಪ್ರಯಾಣಿಕರಿಗೆ ಮೂಲಭೂತ ಸೌಕರ್ಯಗಳು ದೊರೆಯಲಿವೆ. ರೈಲು ನಿಲ್ದಾಣಕ್ಕೆ ಸಂಪರ್ಕಿಸುವ ಮಹಾನಗರಪಾಲಿಕೆಗೆ ಸೇರಿದ ರಸ್ತೆಯನ್ನು ದುರಸ್ಥಿ ಮಾಡಲು ಮಹಾನಗರಪಾಲಿಕೆ ಅಧಿಕಾರಿಗಳಿಗೆ ಕೋರಿದ್ದೇನೆ. ಶೀಘ್ರದಲ್ಲಿಯೇ ಈ ರಸ್ತೆಯೂ ದುರಸ್ತಿಯಾಗಲಿದೆ ಎಂದು ಹೇಳಿದರು.

ಅಭಿವೃದ್ಧಿ ವಿರೋಧಿ ಸಿದ್ದರಾಮಯ್ಯ: ಸಂಸದ ಪ್ರತಾಪ್ ಸಿಂಹ ಕಿಡಿ

ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪಸಾಹೇಬ ಪಟ್ಟಣಶೆಟ್ಟಿ, ರೈತ ಹೋರಾಟಗಾರ ಅಣ್ಣಪ್ಪ ಖೈನೂರ, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜ್ಯೋಶಿ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರು ಭಾಗಿ

ಜಲಸಂಪನ್ಮೂಲ ಇಲಾಖೆ, ಕೃಷ್ಣಾಭಾಗ್ಯ ಜಲ ನಿಗಮ ನಿಯಮಿತದ ಸಹಯೋಗದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಹಂತ-1 ಹಾಗೂ ಇಂಡಿ ತಾಲೂಕಿನ 16 ಕೆರೆ ತುಂಬುವ ಕಾಮಗಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಚ್‌ರ್‍ 9ರಂದು ಮಧ್ಯಾಹ್ನ 12 ಗಂಟೆಗೆ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಗ್ರಾಮದಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ಜಲ ಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲೆ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಕನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷರೂ ಆದ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ಪ್ರಕಾಶ ರಾಠೋಡ, ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಡಾ.ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ಬಸನಗೌಡ ಪಾಟೀಲ ಯತ್ನಾಳ, ಹನಮಂತ ನಿರಾಣಿ, ಸೋಮನಗೌಡ ಪಾಟೀಲ ಸಾಸನೂರ, ಡಾ.ದೇವಾನಂದ ಚವ್ಹಾಣ, ಸುನೀಲಗೌಡ ಪಾಟೀಲ, ರಮೇಶ ಭೂಸನೂರ, ಪಿ.ಎಚ್‌.ಪೂಜಾರ, ಪ್ರಕಾಶ ಹುಕ್ಕೇರಿ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ಹೊರ್ತಿ ಗ್ರಾಮ ಪಂಚಾಯತಿ ಅಧ್ಯಕ್ಷ ರೇವಣಸಿದ್ದಪ್ಪ ತೇಲಿ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಲಿದ್ದಾರೆ.