* ಕೋವಿಡ್ 4ನೇ ಅಲೆ ಭೀತಿ* ವಿಜಯಪುರದಲ್ಲಿ ಮುಂಜಾಗ್ರತೆ ಕ್ರಮ* ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ

ವರದಿ: ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಏಪ್ರಿಲ್ 28): ಕೋವಿಡ್ 19 ನಾಲ್ಕನೇ ಅಲೆ ಆರಂಭವಾಗ್ತಿರೋ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತುರ್ತು ಸಭೆ ನಡೆಸಿದರು. ಕೊರೋನಾ 4ನೇ ಅಲೆಯ ಕುರಿತಂತೆ ತೆಗೆದುಕೊಂಡ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಗ್ರ ಚರ್ಚಿಸಿದರು.

Add Asianetnews Kannada as a Preferred SourcegooglePreferred

4ನೇ ಅಲೆಯನ್ನು ಎದುರಿಸಲು ಅವಶ್ಯವಿರುವ ಮಾಸ್ಕ, ಸ್ಯಾನಿಟೈಜರ್ ಮತ್ತು ಔಷಧಿ ಸಾಮಗ್ರಿಗಳನ್ನು ಅಗತ್ಯ ಪ್ರಮಾಣದಲ್ಲಿ ಸಿದ್ದತೆ ಮಾಡಿಕೊಳ್ಳಲು ಸೂಚನೆ ಕೊಟ್ಟರು. ಈಗಾಗಲೇ ನೋಡಲ್ ಅಧಿಕಾರಿಗಳು ನೇಮಕವಾಗಿದ್ದಲ್ಲಿ ಅವರು ಖಾಸಗಿ ಆಸ್ಪತ್ರೆಗಳ ಬೆಡ್ ಮ್ಯಾನೇಜಮೇಂಟ್ ವ್ಯವಸ್ಥೆಯನ್ನು ಸರಿಯಾಗಿ ನೋಡಿಕೊಳ್ಳಬೇಕು. ಜಿಲ್ಲಾ ತಜ್ಞರ ಸಮಿತಿಯ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳಿಗೆ ಕಾಲಕಾಲಕ್ಕೆ ಅಗತ್ಯ ಸೂಚನೆಗಳನ್ನು ಪಾಲನೆ ಮಾಡಲು ತಿಳಿಸಬೇಕು ಎಂದು ತಿಳಿಸಿದರು. ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಕೆ ಸರಾಗವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

Covid 19 Spike: ಕೋವಿಡ್ 4ನೇ ಅಲೆ ಭೀತಿ ಎದುರಿಸಲು ರಾಜ್ಯ ಸರ್ಕಾರದಿಂದ ಸಿದ್ದತೆ!

ಚಿಕ್ಕಮಕ್ಕಳ ತುರ್ತುನಿಗಾ ಘಟಕ ನಿರ್ಮಾಣ ಕುರಿತು ಮಾಹಿತಿ.!
ಜಿಲ್ಲಾಸ್ಪತ್ರೆಯಲ್ಲಿನ ಹಳೆಯ ಡಯಾಲಿಸಿಸ್ ವಾರ್ಡ ಬದಲಾಯಿಸಿ 10 ವೆಂಟಿಲೇಟರಗಳುಳ್ಳ ಚಿಕ್ಕಮಕ್ಕಳ ತುರ್ತು ನಿಗಾಘಟಕ ಮತ್ತು ಹೆಚ್ಚುವರಿ 14 ಹಾಸಿಗೆಯ ಎಚ್ಡಿಯು ಸಮಾನ್ಯ ತೀವ್ರ ನಿಗಾ ಘಟಕ ಸ್ಥಾಪನೆಯ ಬಗ್ಗೆಯೂ ಜಿಲ್ಲಾಸ್ಪತ್ರೆ ಮುಖ್ಯಸ್ಥರ ಜೊತೆಗೆ ಚರ್ಚೆ ನಡೆಸಿದರು.‌ ಈ ಬಗ್ಗೆ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದುಕೊಂಡರು. 

ಸಾರ್ವಜನಿಕರಲ್ಲೂ ಮುನ್ನೆಚ್ಚರಿ ತೆಗೆದುಕೊಳ್ಳಲು ಮನವಿ.!
 ಕೋವಿಡ್ ತಡೆಗೆ ಮಾಸ್ಕ್ ಕೂಡ ರಾಮಭಾಣವಿದ್ದಂತೆ. ಸಾರ್ವಜನಿಕರು ಇನ್ಮುಂದೆ ಕಡ್ಡಾಯ ಮಾಸ್ಕ ಧರಿಸಬೇಕು. ಸಾಮಾಜಿಕ ಅಂತರ ಪಾಲನೆ ಮಾಡಬೇಕು. ಮಾಸ್ಕ ಧರಿಸದೇ ಇದ್ದರೆ ದಂಡವಿದಿಸಲು ಕ್ರಮ ವಹಿಸಲಾಗುವುದು. ಹೀಗಾಗಿ ಸಾರ್ವಜನಿಕರು ಕಡ್ಡಾಯ ಮಾಸ್ಕ ಧರಿಸಿ, ಸಾಮಾಜಿಕ ಅಂತರ ಪಾಲನೆ ಮಾಡಿ ಜಿಲ್ಲಾಡಳಿತಕ್ಕೆ ಸಹಕರಿಸಬೆಕು ಎಂದು ಜಿಲ್ಲೆಯ ಸಾರ್ವಜನಿಕರಲ್ಲಿ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

ಚೆಕ್ ಪೋಸ್ಟ್‌ನಲ್ಲಿ ಬಿಗಿಕ್ರಮಕ್ಕೆ ಸೂಚನೆ.! 
ವಿಜಯಪುರ ಜಿಲ್ಲೆ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿದೆ. ಹೀಗಾಗಿ ಗಡಿಗಳ ಚೆಕ್ ಪೋಸ್ಟ್ ಗಳಲ್ಲಿ ಬಿಗಿಕ್ರಮ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿರು. 4ನೇ ಅಲೆಯು ಬೆಂಗಳೂರು, ಮಂಗಳೂರು, ವಿಜಯಪುರ ಹೀಗೆ ಗಡಿ ಜಿಲ್ಲೆಗಳಲ್ಲೆ ಹೆಚ್ಚಿಗೆ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಯಾವುದೇ ಸಂದರ್ಭದಲ್ಲಿಯಾದರು ಪ್ರಕರಣಗಳು ಏರಿಕೆಯಾಗಬಹುದಾಗಿದೆ. ಆದ್ದರಿಂದ ನಾವುಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದರು. ಜಿಲ್ಲೆಯ ಎಲ್ಲಾ ಚೆಕ್ ಪೋಸ್ಟನಲ್ಲಿ ಬಿಗಿ ಕ್ರಮಗಳನ್ನು ತೆಗೆದುಕೊಳ್ಳಿರಿ. ಗಂಟಲು ದ್ರವದ ಪರೀಕ್ಷೆಯನ್ನು ತೀವ್ರಗೊಳಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಅಗತ್ಯವಿದ್ದಲ್ಲಿ ಮಾತ್ರ ಮಹಾರಾಷ್ಟ್ರಕ್ಕೆ ಪ್ರಯಾಣಿಸಿ..!
ಇದೆ ವೇಳೆ ಜಿಲ್ಲಾ ಪಂಚಾಯತ್ ಸಿಇಓ ರಾಹುಲ್‌ ಶಿಂಧೆ ಅವರು ಮಾತನಾಡಿ, ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡ ಸಿದ್ದಾಪುರ, ಸಿರಾಡೋಲ, ಧೂಳಖೇಡ ಚೆಕಪೋಸ್ಟನಿಂದ ಮಹಾರಾಷ್ಟ್ರದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಿಜಯಪುರ ಪ್ರವೇಶಿಸುತ್ತಾರೆ. ಚಡಚಣ, ಪಂಢರಾಪುರ, ಸೊಲ್ಲಾಪುರ, ಸಾಂಗ್ಲಿ ಬೇರೆ ಬೇರೆ ಕಡೆಗೆ ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಾರೆ. ಕೋವಿಡ್ ಹಿನ್ನೆಲೆಯಲ್ಲಿ ಜನತೆ ಮುನ್ನೆಚ್ಚರಿಕೆ ವಹಿಸಬೇಕು. ಅಗತ್ಯವಿದ್ದರೆ ಮಾತ್ರ ಪ್ರಯಾಣ ಮಾಡಬೇಕು ಎಂದು ಸಲಹೆ ಮಾಡಿದರು.

ಕೋವಿಡ್ ಪಾಜಿಟೀವ್ ಪ್ರಕರಣಗಳು ಏಪ್ರಿಲ್ 19 ಮತ್ತು 20ಕ್ಕೆ ತಲಾ ಒಂದು, ಏ.23‌ ಮತ್ತು ಏ. 24ಕ್ಕೆ ತಲಾ ಮೂರು, ಏ.25ಕ್ಕೆ ಎರಡು, ಏಪ್ರೀಲ್ 26ಕ್ಕೆ 4 ಪ್ರಕರಣಗಳು ವರದಿಯಾಗಿವೆ. ಪಾಜಿಟೀವ್ ಪ್ರಕರಣಗಳ ಸಂಖ್ಯೆ ದಿನೇದಿನೆ ಏರಿಕೆಯಾಗುತ್ತಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಆರ್ಟಿಪಿಸಿಆರ್ ಪರೀಕ್ಷಾ ಕಿಟ್, ಮಾಸ್ಕ ಮತ್ತು ಔಷಧಿ ಅಗತ್ಯ ಪ್ರಮಾಣದಲ್ಲಿ ಲಭ್ಯವಿದೆ ಎಂದು ಅಧಿಕಾರಿಗಳು ವಿವರಿಸಿದರು.

ಸಭೆಯಲ್ಲಿ ಡಬ್ಲ್ಯುಎಚ್ಓ ಎಸ್ಎಂಓ ಡಾ.ಮುಕುಂದ ಗಲಗಲಿ, ಡಿಎಚ್ಓ ಡಾ.ರಾಜಕುಮಾರ ಯರಗಲ್, ಡಿಎಸ್ಓ ಡಾ.ಕವಿತಾ, ಆರ್ಸಿಎಚ್ ಅಧಿಕಾರಿ ಡಾ.ಕೆ.ಡಿ.ಗುಂಡಲವಾಡಿ, ಡಾ.ಈರಣ್ಣ ಧಾರವಾಡಕರ ಹಾಗೂ ಇತರರು ಇದ್ದರು.