Asianet Suvarna News Asianet Suvarna News

ಬೀದರ್‌ ಉತ್ಸವಕ್ಕೆ ಗಾಯಕ ವಿಜಯಪ್ರಕಾಶ, ಸಂಜಿತ ಹೆಗಡೆ, ಮಂಗ್ಲಿ, ಕುಮಾರ ಸಾನು

ಬೀದರ್‌ ಉತ್ಸವ ಜನರ ನಿರೀಕ್ಷೆಯಂತೆ ಆಗಲಿ, ಬೀದರ್‌ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉತ್ಸವದ ಲೋಗೋ ಬಿಡುಗಡೆ ಮಾಡಿದ ಕೇಂದ್ರ ಸಚಿವ ಖೂಬಾ

Vijay Prakash Sanjith Hegde Mangli Kumar Sanu Will Be Perform to Bidar Utsav grg
Author
First Published Nov 26, 2022, 12:55 PM IST

ಬೀದರ್‌(ನ.26):  ಜನವರಿ 7, 8 ಮತ್ತು 9 ರಂದು ನಡೆಯಲ್ಲಿರುವ ಬೀದರ್‌ ಉತ್ಸವ ಸಾಮೂಹಿಕ ಪ್ರಯತ್ನದಿಂದ ಜನರ ನಿರೀಕ್ಷೆಯಂತೆ ಆಗಬೇಕೆಂದು ಕೇಂದ್ರ ಸಚಿವರಾದ ಭಗವಂತ ಖೂಬಾ ಹೇಳಿದರು. ಶುಕ್ರವಾರ ಜಿಲ್ಲಾ​ಧಿಕಾರಿ ಕಚೇರಿ ಸಭಾಂಗಣದಲ್ಲಿ ಬೀದರ್‌ ಉತ್ಸವದ ಲೋಗೊ ಬಿಡುಗಡೆಗೊಳಿಸಿ ಮಾತನಾಡಿದ ಸಚಿವರು, ಅನೇಕ ವರ್ಷದಿಂದ ಸಾರ್ವಜನಿಕರು, ಜನಪ್ರತಿನಿ​ಧಿಗಳು ಮತ್ತು ಪತ್ರಕರ್ತರು ಬೀದರ್‌ ಉತ್ಸವ ಆಚರಣೆ ಮಾಡಬೇಕೆಂಬ ಬೇಡಿಕೆಯಾಗಿತ್ತು. ಹಾಗಾಗಿ ಕಳೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗ ಇದನ್ನು ಪ್ರಸ್ತಾಪಿಸಿ ಬೀದರ್‌ ಉತ್ಸವ ಆಚರಣೆಗೆ ನಿರ್ಧರಿಸಲಾಯಿತು.

ಈ ಉತ್ಸವ ತಮ್ಮೆಲ್ಲರ ಆಸಕ್ತಿಗೆ ಮೆರಗು ತರುವಂತಿರಬೇಕು. ಈ ಉತ್ಸವದಲ್ಲಿ ಹಲವಾರು ಸಮಿತಿಗಳನ್ನು ರಚಿಸಿದ್ದು, ಇವುಗಳಿಗೆ ಒಂದೊಂದು ಜವಾಬ್ದಾರಿಗಳನ್ನು ನೀಡಲಾಗಿದೆ ಮತ್ತು ಆಸಕ್ತರು ತಮ್ಮ ಕ್ಷೇತ್ರಗಳಲ್ಲಿ ಅನುಭವ ಇರುವವರು ತಮ್ಮ ಸಲಹೆ ಮತ್ತು ಸೂಚನೆಗಳನ್ನು ನೀಡುವುದರ ಜೊತೆಗೆ ಸಾರ್ವಜನಿಕರು ಭಾಗವಹಿಸಿ ಎಲ್ಲರೂ ಸಕ್ರೀಯವಾಗಿ ಪಾಲ್ಗೊಳ್ಳುವುದರ ಮೂಲಕ ಜನರ ನಿರೀಕ್ಷೆಯಂತೆ ಬೀದರ್‌ ಉತ್ಸವವನ್ನು ಆಚರಿಸಬೇಕೆಂದರು.

ತಳಮಟ್ಟದಿಂದ ಬಲಿಷ್ಠಗೊಳ್ಳಬೇಕಿದೆ ಜೆಡಿಎಸ್‌: ಬಂಡೆಪ್ಪ ಖಾಶೆಂಪೂರ್‌

ಜಿಲ್ಲಾಧಿ​ಕಾರಿ ಗೋವಿಂದ ರೆಡ್ಡಿ ಮಾತನಾಡಿ, ಜನವರಿ 7, 8 ಮತ್ತು 9 ರಂದು ಬೇರೆ ಬೇರೆ ವೇದಿಕೆಯಲ್ಲಿ ಇತರೆ ಉತ್ಸವಗಳು ನಡೆಯಲಿವೆ. ಅದನ್ನು ನೋಡಿಕೊಳ್ಳಲು ನೋಡಲ್‌ ಅ​ಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇದರಲ್ಲಿ ಕೆಲಸ ಮಾಡಲು ಉತ್ಸುಕತೆ ಇರುವ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಸ್ವ-ಇಚ್ಛೆಯಿಂದ ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕು. ಉತ್ಸವಕ್ಕೆ ಇನ್ನೂ ಒಂದು ತಿಂಗಳಿಗಿಂತಲೂ ಹೆಚ್ಚು ಸಮಯವಿದೆ. ಇದರಲ್ಲಿ ಮೆರವಣಿಗೆ ಉತ್ಸವ, ಮ್ಯಾರಾಥಾನ್‌, ಕ್ರೀಡಾ, ಕುಸ್ತಿ, ಕವಿಗೋಷ್ಠಿ, ಸ್ಮರಣ ಸಂಚಿಕೆ, ಗಾಳಿಪಟ, ಪಶುಮೇಳ, ಉದ್ಯೋಗ ಮೇಳ, ಗಡಿನಾಡು ಕನ್ನಡಿಗರ ಉತ್ಸವ, ಸ್ಥಳೀಯ ಕಲಾವಿದರ ಉತ್ಸವ ಸೇರಿದಂತೆ ಹಲವಾರು ಉತ್ಸವಗಳು ನಡೆಯಲಿವೆ ಎಂದರು.

ಉತ್ಸವಕ್ಕೆ ಲೋಗೋ ಆಯ್ಕೆ:

ಬೀದರ್‌ ಉತ್ಸವಕ್ಕೆ ಲೋಗೊ ತಯಾರಿಸಲು ಸಾರ್ವಜನಿಕರಿಗಾಗಿ ಪ್ರಕಟಣೆ ನೀಡಲಾಗಿತ್ತು. ಒಟ್ಟು 15 ಲೋಗೊಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ ಉಮೇಶ ಅಷ್ಠೂರ ಅವರು ತಯಾರಿಸಿದ ಲೋಗೊ ಬೀದರ್‌ ಉತ್ಸವಕ್ಕೆ ಆಯ್ಕೆಯಾಗಿದೆ. ಸ್ಥಳೀಯ ಕಲಾವಿದರಿಗೆ ಮುಖ್ಯ ವೇದಿಕೆಯಲ್ಲಿ ಸಂಜೆ 5.30 ರಿಂದ 7.15ರವರೆಗೆ ಅವರ ಕಲೆ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಮತ್ತು ಜ.26 ರಂದು ಬೀದರ್‌ ನಗರದ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ಭಾರತ ಭಾಗ್ಯವಿದಾತ್‌ ನಾಟಕವನ್ನು ಪ್ರದರ್ಶಿಸಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬೀದರ್‌ ಬುಡಾ ಅಧ್ಯಕ್ಷ ಬಾಬುವಾಲಿ, ಜಿಪಂ ಸಿಇಓ ಶಿಲ್ಪಾ ಎಂ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್‌ ಬಾಬು ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆಯ ಅಧಿ​ಕಾರಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು.

ಉತ್ಸವಕ್ಕೆ ಹಿನ್ನೆಲೆ ಗಾಯಕ ವಿಜಯಪ್ರಕಾಶ, ಸಂಜಿತ ಹೆಗಡೆ, ಮಂಗ್ಲಿ

ಬೀದರ್‌ ಉತ್ಸವಕ್ಕೆ ದೇಶ ವಿದೇಶದಲ್ಲಿ ಸಂಗೀತದ ರಸದೌತಣ ಉಣಿಸಿ ಕೋಟ್ಯಂತರ ಪ್ರೇಕ್ಷಕರ ಮನಗೆದ್ದಿರುವ ಖ್ಯಾತ ಹಿನ್ನೆಲೆ ಗಾಯಕ ವಿಜಯಪ್ರಕಾಶ, ಸಂಜಿತ ಹೆಗಡೆ, ಕುಮಾರ ಸಾನು ಸೇರಿದಂತೆ ಅನೇಕರು ಮೂರು ದಿನಗಳ ಬೀದರ್‌ ಉತ್ಸವದ ಮೆರಗು ಹೆಚ್ಚಿಸಲು ಆಗಮಿಸಲಿದ್ದಾರೆ. ಜನವರಿ 7, 8 ಮತ್ತು 9ರಂದು ನಡೆಯಲಿರುವ ಬೀದರ್‌ ಉತ್ಸವಕ್ಕೆ ಜ. 7ರಂದು ಕನ್ನಡ ಹಿನ್ನೆಲೆ ಗಾಯಕ ಸಂಜೀತ ಹೆಗಡೆ ಸಿನಿ ಗೀತೆಗಳ ರಸದೌತಣ ಉಣಬಡಿಸಿದರೆ ಆಶಿಶ್‌ ಕೌರ್‌ ಮತ್ತು ಸಾಬರಿ ಸಹೋದರರು ಹಿಂದಿ ಗಾಯನದ ಝೇಂಕಾರ ಬಾರಿಸಲಿದ್ದಾರೆ.

ಜ. 8ರಂದು ಎಣ್ಣೆಗೂ ಹೆಣ್ಣಿಗೂ ಗೀತೆಯ ಖ್ಯಾತಿಯ ತೆಲಗು ಚಿತ್ರ ಗೀತೆಗಳ ಗಾಯಕಿ ಮಂಗ್ಲಿ, ಕನ್ನಡದ ಖ್ಯಾತ ಗಾಯಕಿ ಅನುರಾಧಾ ಭಟ್‌ ಹಾಗೂ ಸಂಗೀತ ನಿರ್ದೇಶಕ ವೀರ ಸಮರ್ಥ ಸಂಗೀತ ಸಂಜೆ ನಡೆಸಿದರೆ, ಚುಮುಚುಮು ಚಳಿಯ ರಾತ್ರಿಯಲ್ಲಿ ಖ್ಯಾತ ಹಿಂದಿ ಹಿನ್ನೆಲೆ ಗಾಯಕ ಕುಮಾರ ಸಾನು ಹಿಂದಿ ಗೀತೆಗಳ ಮೂಲಕ ಲಕ್ಷಾಂತರ ಜನ ಪ್ರೇಕ್ಷಕರ ಮನತಣಿಸಲಿದ್ದಾರೆ.

ಬೀದರ್‌: ಡಿಸಿ ಗ್ರಾಮ ವಾಸ್ತವ್ಯ ಯೋಜನೆ ಸದುಪಯೋಗವಾಗಲಿ, ಈಶ್ವರ ಖಂಡ್ರೆ

ಇನ್ನು ಉತ್ಸವದ ಕೊನೆ ದಿನ ಜ.9 ರಂದು ಸಂಜೆ ಕನ್ನಡ ಖ್ಯಾತ ಹಿನ್ನೆಲೆ ಗಾಯಕ ಬೊಂಬೆ ಹೇಳುತೈತಿ, ಸಿಂಗಾರ ಸಿರಿಯೇ ಹಾಡುಗಳಲ್ಲದೆ ಸಹಸ್ರಾರು ಹಾಡುಗಳ ಮೂಲಕ ದೇಶ ವಿದೇಶಗಳಲ್ಲಿ ಕನ್ನಡ ನಾಡಿನ ಖ್ಯಾತಿಯನ್ನು ಮೇರು ಪರ್ವತಕ್ಕೇರಿಸಿದ ಖ್ಯಾತಿಯ ವಿಜಯಪ್ರಕಾಶ ಹಾಗೂ ಅವರ ತಂಡ ಅದೇ ದಿನ ರಾತ್ರಿ ಹಿಂದಿ ಗೀತೆಗಳನ್ನು ಸುಖವಿಂದರ್‌ ಸಿಂಣ್‌ ಅವರು ನಡೆಸಿಕೊಡಲಿದ್ದಾರೆ.

ನಿರೂಪಕರಾಗಿ ಅನುಪಮಾ ಭಟ್‌ ಹಾಗೂ ಆಸೀಫ್‌ ಇಡೀ ಕಾರ್ಯಕ್ರಮದ ನಡೆಸಿಕೊಡುವ ಜವಾಬ್ದಾರಿ ಹೊತ್ತಿದ್ದಾರೆ ಅಲ್ಲದೆ ಗಾವಾನ್‌ ವೃತ್ತದಲ್ಲಿ ಈ ಮೂರು ದಿನಗಳ ಕಾಲ ರಾತ್ರಿ ಮುಶಾಯರಾ ಕಾರ್ಯಕ್ರಮ ನಡೆಯಲಿದ್ದು ಜ. 26ರಂದು ನೆಹರು ಕ್ರೀಡಾಂಗಣದಲ್ಲಿ ಭಾರತ ಭಾಗ್ಯ ವಿಧಾತ ನಾಟಕ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು.
 

Follow Us:
Download App:
  • android
  • ios