ಬೆಂಗಳೂರಿನಲ್ಲಿ ಸ್ವಾಮಿ ವಿವೇಕಾನಂದರ ಜೀವನಾಧಾರಿತ 'ವೀರ ಸಂನ್ಯಾಸಿಯ ಆತ್ಮ ಗೀತೆ' ಪ್ರದರ್ಶನ: ಯಾವಾಗ?

Synopsis
ಪರಮ್ ಕಲ್ಚರ್ ವತಿಯಿಂದ 'ವೀರ ಸಂನ್ಯಾಸಿಯ ಆತ್ಮ ಗೀತೆ ಸ್ವಾಮಿ ' ವಿವೇಕಾನಂದರ ಜೀವನ, ಕೃತಿ ಆಧಾರಿತ ಅತ್ಯದ್ಭುತ ಮಲ್ಟಿಮೀಡಿಯಾ ಪ್ರದರ್ಶನವನ್ನು ಏಪ್ರಿಲ್ 25 ರಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಆಯೋಜಿಸಲಾಗಿದೆ.
ಬೆಂಗಳೂರು (ಏ.16): ಪರಮ್ ಕಲ್ಚರ್ ವತಿಯಿಂದ 'ವೀರ ಸಂನ್ಯಾಸಿಯ ಆತ್ಮ ಗೀತೆ ಸ್ವಾಮಿ ' ವಿವೇಕಾನಂದರ ಜೀವನ, ಕೃತಿ ಆಧಾರಿತ ಅತ್ಯದ್ಭುತ ಮಲ್ಟಿಮೀಡಿಯಾ ಪ್ರದರ್ಶನವನ್ನು ಏಪ್ರಿಲ್ 25 ರಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಆಯೋಜಿಸಲಾಗಿದೆ. ಒಟ್ಟು 2 ಗಂಟೆಗಳ ಕಾಲಾವಧಿಯ ಪ್ರದರ್ಶನವಾಗಿದ್ದು, ಸುಮಾರು 35ಕ್ಕೂ ಅಧಿಕ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು ಭಾಗಿಯಾಗಲಿದ್ದಾರೆ. ಪ್ರಖ್ಯಾತ ಸಂಗೀತ ಸಂಯೋಜಕರಾದ ಪಂ. ಪ್ರವೀಣ್ ಡಿ. ರಾವ್, ಹಾಗೂ ಚಲನಚಿತ್ರ ನಿರ್ದೇಶಕರಾದ ಕಾರ್ತಿಕ್ ಸರಗೂರು ಸಾರಥ್ಯದಲ್ಲಿ ಕಾರ್ಯಕ್ರಮ ನಡೆಯುತ್ತಿದೆ.
ಸಂಗೀತ, ನೃತ್ಯ, ನಾಟಕಗಳ ಮೂಲಕ ಸ್ವಾಮಿ ವಿವೇಕಾನಂದರ ಜೀವನ - ಚಿಂತನೆಗಳನ್ನು ವಿಜೃಂಭಣಾತ್ಮಕವಾಗಿ ತೋರಿಸುವ ಪ್ರಯತ್ನ ಇದಾಗಿದೆ. ಸ್ವಾಮಿ ವಿವೇಕಾನಂದರಿಂದಲೇ ಇಂಗ್ಲಿಷ್, ಬಂಗಾಳಿ, ಸಂಸ್ಕೃತದಲ್ಲಿ ರಚಿಸಲ್ಪಟ್ಟ ಹಾಡುಗಳನ್ನು ಹಾಗೂ ಕನ್ನಡ ಸಾರಸ್ವತ ಲೋಕದ ರತ್ನಗಳಾದ, ಜಿ.ಎಸ್.ಶಿವರುದ್ರಪ್ಪ, ಕುವೆಂಪು ಸೇರಿದಂತೆ ಹಲವು ಪ್ರಖ್ಯಾತ ಕವಿಗಳು ವಿವೇಕಾನಂದರ ಬಗ್ಗೆ ಬರೆದ ಹಾಡುಗಳನ್ನು ಸಾದರಪಡಿಸಲಾಗುತ್ತದೆ.
ಸ್ವಾಮಿ ವಿವೇಕಾನಂದರು ಕಾಮದ ಬಗ್ಗೆ ಏನು ಹೇಳುತ್ತಾರೆ? ನಿಮಗೆ ಗೊತ್ತೆ?
ಬೇಡಿಕೆ ಮೇರೆಗೆ ಮತ್ತೊಮ್ಮೆ ಆಯೋಜನೆ: ಜನವರಿಯಲ್ಲಿ ಪ್ರದರ್ಶಿಸಲ್ಪಟ್ಟಿದ್ದ "ವೀರ ಸಂನ್ಯಾಸಿಯ ಆತ್ಮಗೀತೆ"ಯು, ಆಗ ಕಂಡ ಅಭೂತಪೂರ್ವ ಯಶಸ್ಸಿನಿಂದಾಗಿ, ಪ್ರೇಕ್ಷಕರ ಬೇಡಿಕೆಯ ಮೇರೆಗೆ ಈಗ ಮರುಪ್ರದರ್ಶನ ಕಾಣುತ್ತಿದೆ. ಸ್ವಾಮಿ ವಿವೇಕಾನಂದರ ತತ್ತ್ವ- ಆದರ್ಶಗಳನ್ನು ಮನೆ ಮನೆಗೂ ತಲುಪಿಸುವ ಸಲುವಾಗಿ "ಪರಮ್" ಇಂತಹದ್ದೊಂದು ಅದ್ಭುತ ಕಾರ್ಯಕ್ರಮವನ್ನು ಮತ್ತೆ ಆಯೋಜಿಸಿದೆ. ಬೇಸಿಗೆಯ ರಜೆಯಲ್ಲಿ ಮಕ್ಕಳಿಗೂ ತೋರಿಸಬಹುದಾದಂತಹ, ಕುಟುಂಬ ಸಮೇತ ಆಸ್ವಾದಿಸುವಂತಹ ಕಾರ್ಯಕ್ರಮ ಇದಾಗಿದೆ.
ಏನಿದು ಪರಮ್ ವಿಜ್ಞಾನ ಮತ್ತು ಸಂಸ್ಕೃತಿ ಕೇಂದ್ರ?: ಬೆಂಗಳೂರಿನ ಮಾಗಡಿ ರಸ್ತೆಯ ಚನ್ನೇನಹಳ್ಳಿಯಲ್ಲಿ ಸುಮಾರು 15 ಎಕರೆ ಜಾಗದಲ್ಲಿ ಪರಮ್ ವಿಜ್ಞಾನ ಮತ್ತು ಸಂಸ್ಕೃತಿ ಕೇಂದ್ರ ನಿರ್ಮಾಣಗೊಳ್ಳುತ್ತಿದೆ. ಈ ಕೇಂದ್ರವು, ಭಾರತದಲ್ಲಿ ರೂಪುಗೊಳ್ಳುತ್ತಿರುವ ಅತಿದೊಡ್ಡ ಮಲ್ಟಿ ಎಕ್ಸ್ಪೀರಿಯನ್ಸ್ ತಾಣವಾಗಿದೆ. ಇದು, ವಿಜ್ಞಾನ, ಇತಿಹಾಸ, ಕಲೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ವೇದಿಕೆಯನ್ನು ಒದಗಿಸಿ ಕೊಡಲಿದೆ. ಇಲ್ಲಿ, ವೈಜ್ಞಾನಿಕ ಆವಿಷ್ಕಾರಗಳೂ, ಸಾಂಸ್ಕೃತಿಕ ಕಲಿಕಾ ಸೌಲಭ್ಯಗಳೂ ಇರಲಿವೆ.
ಪರಮ್ ವಿಜ್ಞಾನ ಮತ್ತು ಸಂಸ್ಕೃತಿ ಕೇಂದ್ರದಲ್ಲಿ, ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನ ಭವನ, ಪ್ರದರ್ಶನ ಭವನ, ವಿಜ್ಞಾನ ಕೇಂದ್ರ ಹಾಗೂ ಅತ್ಯುತ್ತಮ ಸೌಲಭ್ಯಗಳುಳ್ಳ ಅತಿಥಿ ಗೃಹಗಳು ನಿರ್ಮಾಣಗೊಳ್ಳುತ್ತಿವೆ. ಈ ಕೇಂದ್ರದ ಮೂಲಕ ಸೇವಾ ಸಂಸ್ಥೆಯು ಯುವ ಮನಸ್ಸುಗಳಿಗೆ ಆಧುನಿಕ ವಿಜ್ಞಾನ ಮತ್ತು ಭಾರತೀಯ ಪ್ರಾಚೀನ ವಿಜ್ಞಾನ, ಇತಿಹಾಸ, ಸಂಸ್ಕೃತಿ, ಕಲೆಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶ ಹೊಂದಿದೆ ಎನ್ನುತ್ತಾರೆ ಆಯೋಜನಕರು.
National Youth Day: ರಾಷ್ಟ್ರಕಾರ್ಯದ ಮಹಾ ಪ್ರೇರಣೆ ಸ್ವಾಮಿ ವಿವೇಕಾನಂದರು..!
ಎಲ್ಲಿ, ಯಾವಾಗ?
ದಿನಾಂಕ: ಏಪ್ರಿಲ್ 25
ಸಮಯ: ಸಂಜೆ 6.30 ರಿಂದ 8.30
ಸ್ಥಳ: ಚೌಡಯ್ಯ ಮೆಮೋರಿಯಲ್ ಹಾಲ್, ಮಲ್ಲೇಶ್ವರಂ, ಬೆಂಗಳೂರು
ಸಂಪರ್ಕ ಸಂಖ್ಯೆ: 9035034725, 8317431009