ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಖಂಡಿಸಿ ವಾಟಾಳ್ ನಾಗರಾಜ್ ತಮಟೆ ಚಳವಳಿ
ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಮೈಸೂರಿನ ಹಾರ್ಡಿಂಜ್ ವೃತ್ತದಲ್ಲಿ ತಮಟೆ ಚಳವಳಿ ಹಮ್ಮಿಕೊಂಡಿದ್ದರು.
ಮೈಸೂರು (ಸೆ.04): ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಮೈಸೂರಿನ ಹಾರ್ಡಿಂಜ್ ವೃತ್ತದಲ್ಲಿ ತಮಟೆ ಚಳವಳಿ ಹಮ್ಮಿಕೊಂಡಿದ್ದರು. ಈ ವೇಳೆ ವಾಟಾಳ್ ನಾಗರಾಜ್ ಮಾತನಾಡಿ, ತಮಿಳುನಾಡು ಕಾವೇರಿ ವಿಚಾರದಲ್ಲಿ ಉದ್ದಟತನ ತೋರುತ್ತಿದೆ. ತಮಿಳುನಾಡಿನ ಎಲ್ಲಾ ಮುಖ್ಯಮಂತ್ರಿಗಳು ಕಾವೇರಿ ವಿಚಾರದಲ್ಲಿ ತಕರಾರು ಮಾಡುತ್ತಲೇ ಬಂದಿದ್ದಾರೆ. ಕಾವೇರಿ ನೀರಿನ ವಿಚಾರದಲ್ಲಿ ತಮಿಳುನಾಡು ಇದೇ ರೀತಿ ಮುಂದುವರೆದರೆ ತಮಿಳು ಚಿತ್ರ ಬಂದ್ ಮಾಡ್ತೇವೆ, ಗಡಿ ಬಂದ್ ಮಾಡ್ತೇವೆ.
ಬೆಂಗಳೂರಿನ ಎಲ್ಲಾ ತಮಿಳರನ್ನ ವಾಪಸ್ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ಕಾಡಿನ ಹುಲಿಯಂತಿದ್ರು. ಈಗ ಬೋನಿಗೆ ಹಾಕಿರುವ ಗಿಣಿಯಂತಾಗಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ತಮಿಳುನಾಡಿಗೆ ಬಿಡುತ್ತಿರುವ ನೀರನ್ನ ನಿಲ್ಲಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ರೈತರೊಂದಿಗೆ ಪ್ರತಿಭಟಿಸುತ್ತೇವೆ. ರೈತರು, ಕನ್ನಡಪರ ಹೋರಾಟಗಾರರನ್ನ ಬಂಧಿಸಿದ್ರು ಜಗ್ಗಲ್ಲ ಎಂದು ಅವರು ತಿಳಿಸಿದರು.
ಕಾವೇರಿ ನೀರು ಹೋರಾಟಕ್ಕೆ ಧುಮುಕಿದ ಪುಟಾಣಿಗಳು!
ಬಿಎಂಟಿಸಿ ಬಸ್ಗಳನ್ನು ತಡೆದು ಧರಣಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಗರದ ಮೆಜೆಸ್ಟಿಕ್ನಲ್ಲಿ ಮಧ್ಯಾಹ್ನ ಬಿಎಂಟಿಸಿ ಬಸ್ಸುಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ರಾಜ್ಯದ ರೈತರು ಕೃಷಿಗೆ ನೀರಿಲ್ಲದೆ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಕೆಆರ್ಎಸ್ ಅಣೆಕಟ್ಟಲ್ಲಿ ನೀರಿನ ಮಟ್ಟ99 ಅಡಿಗೆ ಕುಸಿದಿದೆ. ಹೀಗೆಯೇ ಮುಂದುವರಿದರೆ ಬೆಂಗಳೂರಿಗರಿಗೆ ಮುಖ ತೊಳೆಯಲೂ ನೀರು ಇರುವುದಿಲ್ಲ ಎಂದರು.
ತಮಿಳುನಾಡು ಮುಖ್ಯಮಂತ್ರಿ ಸ್ಟ್ಯಾಲಿನ್ ತಮ್ಮ ಹಠಮಾರಿತನ ಬಿಡಬೇಕು. ಇಲ್ಲದಿದ್ದರೆ, ಕರ್ನಾಟಕದಲ್ಲಿರುವ ಎಲ್ಲ ತಮಿಳರನ್ನೂ ವಾಪಸ್ ತಮ್ಮ ರಾಜ್ಯಕ್ಕೆ ಬರುವಂತೆ ಆದೇಶ ಹೊರಡಿಸಬೇಕು. ಅಲ್ಲಿನ ಸರ್ಕಾರ ತನ್ನ ಧೋರಣೆ ಮುಂದುವರಿಸಿದರೆ ಕರ್ನಾಟಕದಲ್ಲಿ ತಮಿಳು ಚಲನಚಿತ್ರಗಳನ್ನು, ತಮಿಳು ನಟರನ್ನು ಬ್ಯಾನ್ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಪಾರ್ಥಸಾರಥಿ, ಮುಬಾರಕ್ ಪಾಷಾ, ಜಾಫರ್ ಸಾದಿಕ್ ಸೇರಿ ಹಲವರಿದ್ದರು.
ಕಾವೇರಿ ತವರಿನಲ್ಲಿ ಮಳೆಗಾಲದಲ್ಲೇ ಕುಡಿಯುವ ನೀರಿಗೆ ಸಮಸ್ಯೆ: ಜನರ ಪರದಾಟ
ಮುದ್ದೆ ವಿತರಿಸಿ ವಾಟಾಳ್ ವಿನೂತನ ಚಳವಳಿ: ಹೋಟೆಲ್ ತಿಂಡಿ, ತಿನ್ನಿಸುಗಳ ಬೆಲೆ ಹೆಚ್ಚಳ, ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆ, ಹಾಲಿನ ದರ ಹೆಚ್ಚಳ ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವತಿಯಿಂದ ಮೆಜೆಸ್ಟಿಕ್ನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಒಂದು ರೂಪಾಯಿಗೆ ಮುದ್ದೇ ಹಾಗೂ ಸೊಪ್ಪು ಸಾರು ಮಾರಾಟ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಚಳವಳಿ ನಡೆಸಲಾಯಿತು. ಹಾಲಿನ ದರ ಹೆಚ್ಚಳ ಮಾಡಿರುವುದು ಒಳ್ಳೆಯದಲ್ಲ. ಸರ್ಕಾರ ಏರಿಕೆ ಮಾಡಿರುವ 3 ರು. ಹಾಲಿ ದರವನ್ನು ಕೂಡಲೇ ಕಡಿಮೆ ಮಾಡಬೇಕು. ಕೆಂಪೇಗೌಡ ಬಸ್ ನಿಲ್ದಾಣದ ಹೋಟೆಲ್ಗಳಲ್ಲಿ ತಿಂಡಿ, ತಿನ್ನಿಸುಗಳ ದರ ಹೆಚ್ಚಳ ಕಡಿಮೆ ಮಾಡಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.