ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಂಗಳೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಫೆ.23ರ ಮಧ್ಯಾಹ್ನದಿಂದ ಫೆ.24ರ ಮಧ್ಯಾಹ್ನದ ವರೆಗೆ ನಗರದ ಕೆಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ನಗರ ಸಂಚಾರ ಪೊಲೀಸರು ಆಯ್ದ ಕೆಲ ರಸ್ತೆಗಳ ಎರಡೂ ಬದಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆ ನಿಷೇಧಿಸಿದ್ದಾರೆ.
ಬೆಂಗಳೂರು (ಫೆ.23): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಂಗಳೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಫೆ.23ರ ಮಧ್ಯಾಹ್ನದಿಂದ ಫೆ.24ರ ಮಧ್ಯಾಹ್ನದ ವರೆಗೆ ನಗರದ ಕೆಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ನಗರ ಸಂಚಾರ ಪೊಲೀಸರು ಆಯ್ದ ಕೆಲ ರಸ್ತೆಗಳ ಎರಡೂ ಬದಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆ ನಿಷೇಧಿಸಿದ್ದಾರೆ.
ಎಲ್ಲೆಲ್ಲಿ ಪಾರ್ಕಿಂಗ್ ನಿಷೇಧ?: ಬಳ್ಳಾರಿ ರಸ್ತೆ, ಮೇಖ್ರಿ ಸರ್ಕಲ್, ಕಾವೇರಿ ಥಿಯೇಟರ್ ಜಂಕ್ಷನ್, ರೇಸ್ಕೋರ್ಸ್ ರಸ್ತೆ, ತಾಜ್ವೆಸ್ಟ್ ಎಂಡ್, ಟೌನ್ಹಾಲ್, ಲಾಲ್ಬಾಗ್ ರಸ್ತೆ, ಮಿನರ್ವ ರಸ್ತೆ, ಜೆ.ಸಿ.ರಸ್ತೆ, ಎನ್.ಆರ್.ಚೌಕ. ಮೈಸೂರು ಬ್ಯಾಂಕ್ ವೃತ್ತ, ಪ್ಯಾಲೇಸ್ ರಸ್ತೆ, ಸಿಐಡಿ ಜಂಕ್ಷನ್, ಬಸವೇಶ್ವರ ಜಂಕ್ಷನ್, ರೇಸ್ಕೋರ್ಸ್ ರಸ್ತೆ, ಅಲಿ ಅಸ್ಕರ್ ರಸ್ತೆ, ಇನ್ಫೆಂಟ್ರಿ ರಸ್ತೆ, ಕಾಫಿ ಬೋರ್ಡ್ ಜಂಕ್ಷನ್ ಬಿಆರ್ವಿ ರಸ್ತೆ, ಮಣಿಪಾಲ್ ಜಂಕ್ಷನ್, ಎಂ.ಜಿ.ರಸ್ತೆ, ಟ್ರಿನಿಟಿ ಚಚ್ರ್ ಸರ್ಕಲ್, ಕಮಾಂಡ್ ಹಾಸ್ಪಿಟಲ್, ದೊಮ್ಮಲೂರು ವಾಟರ್ಟ್ಯಾಂಕ್, ಇಂದಿರಾನಗರ 100 ಅಡಿ ರಸ್ತೆ ಜಂಕ್ಷನ್, ಐಎಸ್ಆರ್ಓ ಜಂಕ್ಷನ್, ಎಚ್ಎಎಲ್, ಏರ್ಪೋರ್ಟ್ ರಸ್ತೆಗಳ ಎರಡೂ ಬದಿ ಎಲ್ಲಾ ಮಾದರಿಗಳ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಸಾರ್ವಜನಿಕರು ಅಂದು ಸಾಧ್ಯವಾದಷ್ಟುಪರ್ಯಾಯ ಮಾರ್ಗಗಳನ್ನು ಬಳಸಲು ಕೋರಿದ್ದಾರೆ.
ಅಧಿವೇಶನದಲ್ಲಿ ಬಿಎಸ್ವೈ ವಿದಾಯ ಭಾಷಣ: ವಿಧಾನಸಭೆಯಲ್ಲಿ ಮಾಜಿ ಸಿಎಂ ಭಾವುಕ ನುಡಿ
ಇಂದು ಬಳ್ಳಾರಿ, ಬೆಂಗಳೂರಲ್ಲಿ ಇಂದು ಅಮಿತ್ ಶಾ ಹವಾ: ಬಿಜೆಪಿಯ ಚುನಾವಣಾ ಚಾಣಕ್ಯ ಎಂದೇ ಕರೆಯಲ್ಪಡುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಂಬರುವ ಚುನಾವಣೆಗೆ ಪಕ್ಷವನ್ನು ಅಣಿಗೊಳಿಸುವ ಉದ್ದೇಶದಿಂದ ಗುರುವಾರ ರಾಜ್ಯದ ಬಳ್ಳಾರಿ ಜಿಲ್ಲೆ ಮತ್ತು ರಾಜಧಾನಿ ಬೆಂಗಳೂರಿನಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಮಧ್ಯಾಹ್ನ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಲಿರುವ ಅಮಿತ್ ಶಾ ಅವರು ಸಂಜೆ ಬೆಂಗಳೂರಿನಲ್ಲಿ ವಿವಿಧ ಕ್ಷೇತ್ರಗಳ ಆಯ್ದ ಪ್ರಮುಖರೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ರಾತ್ರಿ ಬೆಂಗಳೂರಿನಲ್ಲಿ ಪಕ್ಷ ಸಂಘಟನೆ ಕುರಿತು ಪ್ರಮುಖ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಮರುದಿನ ಶುಕ್ರವಾರ ಬೆಳಗ್ಗೆ ನಿರ್ಗಮಿಸಲಿದ್ದಾರೆ.
ದೆಹಲಿಯಿಂದ ಹುಬ್ಬಳ್ಳಿಗೆ ವಿಶೇಷ ವಿಮಾನದಲ್ಲಿ ಆಗಮಿಸುವ ಅಮಿತ್ ಶಾ ಅವರು ಗುರುವಾರ ಹೆಲಿಕಾಪ್ಟರ್ ಮೂಲಕ ಸಂಡೂರಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಇಲ್ಲಿನ ಹೊಸಪೇಟೆ ರಸ್ತೆಯ ಎಸ್ಆರ್ಎಸ್ ಮೈದಾನದಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಖಂಡ ಬಳ್ಳಾರಿ ಜಿಲ್ಲೆ ಮಾತ್ರವಲ್ಲದೆ ಕಲ್ಯಾಣ ಕರ್ನಾಟಕದ ಸುಮಾರು ಒಂದೂವರೆ ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ. ಸಮಾವೇಶದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಮಹದಾಯಿ ಐತೀರ್ಪು ಜಾರಿಗೆ ಕೇಂದ್ರ ಪ್ರಾಧಿಕಾರ:‘ಪ್ರವಾಹ್’ ಪ್ರಾಧಿಕಾರ ರಚನೆ
ವಿವಿಧ ಕ್ಷೇತ್ರಗಳ ಪ್ರಮುಖರೊಂದಿಗೆ ಸಂವಾದ: ಸಮಾವೇಶದ ಬಳಿಕ ಬೆಂಗಳೂರಿಗೆ ಆಗಮಿಸಲಿರುವ ಅಮಿತ್ ಶಾ ಅವರು ಸಂಜೆ 6ಗಂಟೆಗೆ ಪುರಭವನದಲ್ಲಿ ವಿವಿಧ ಕ್ಷೇತ್ರಗಳ ಆಯ್ದ ಸುಮಾರು 500 ಮಂದಿ ಪ್ರಮುಖರೊಂದಿಗೆ ‘ಭಾರತೀಯ ರಾಜಕೀಯ: 65 ವರ್ಷಗಳ ಸನ್ನಿವೇಶ ಮತ್ತು ಪ್ರಧಾನಿ ಮೋದಿ ನೇತೃತ್ವದಲ್ಲಿ ಮಾದರಿ ಬದಲಾವಣೆ’ ಎಂಬ ವಿಷಯ ಕುರಿತು ಸಂವಾದ ನಡೆಸಲಿದ್ದಾರೆ. ಬಳಿಕ ನಂತರ ರಾತ್ರಿ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ಬಿಜೆಪಿ ಮುಖಂಡರೊಂದಿಗೆ ಅಮಿತ್ ಶಾ ಅವರು ಬೆಂಗಳೂರು ನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಸಂಬಂಧ ಸಭೆ ನಡೆಸಿ ತಂತ್ರ ರೂಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
