ಉಡುಪಿಯ ಕೋಟ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಯುವಕನೊಬ್ಬ ಟೇಬಲ್, ಟಿವಿ ಇಟ್ಟು ರಸ್ತೆ ತಡೆದು ಹುಚ್ಚಾಟ ಮೆರೆದಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರ ಮೇಲೆಯೇ ಕತ್ತಿ ಬೀಸಿ ಹಲ್ಲೆಗೆ ಯತ್ನಿಸಿದ್ದು, ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉಡುಪಿ (ಜು.14): ಕೋಟ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಯುವಕನೊಬ್ಬ ನಡೆಸಿದ ಹುಚ್ಚಾಟ ವಾಹನ ಸವಾರರು ಮತ್ತು ಸ್ಥಳೀಯ ನಾಗರಿಕರನ್ನು ಬೆಚ್ಚಿಬೀಳಿಸಿದೆ. ಹೆದ್ದಾರಿಯ ಮಧ್ಯೆಯೇ ಟೇಬಲ್ ಇಟ್ಟು, ಅದರ ಮೇಲೆ ಟಿವಿ ಹಾಗೂ ಮ್ಯೂಸಿಕ್ ಸಿಸ್ಟಮ್ ಹಾಕಿ ವಾಹನಗಳನ್ನು ತಡೆಗಟ್ಟಿದ ಘಟನೆ ನಡೆದಿದ್ದು, ಸ್ಥಳದಲ್ಲಿ ಭಾರೀ ಆತಂಕ ಸೃಷ್ಟಿಯಾಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಡೆದಿದ್ದೇನು?

ಬೆಲ್ಲದ ಗಣಪತಿ ದೇವಸ್ಥಾನದ ಸಮೀಪದ ನಿವಾಸಿ ರಂಜಿತ್ ಸೋಮಯಾಜಿ (25) ಎಂಬಾತನೇ ಈ ಕೃತ್ಯ ಎಸಗಿದ ಯುವಕ. ಈತ ಉದ್ದನೆಯ ತಲೆಕೂದಲು ಮತ್ತು ಗಡ್ಡ ಬಿಟ್ಟಿದ್ದು, ವಿಚಿತ್ರವಾದ ನೋಟದಿಂದಲೇ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನ ಸವಾರರನ್ನು ಭಯಭೀತರನ್ನಾಗಿಸಿದ್ದಾನೆ. ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯಲ್ಲಿ ಟೇಬಲ್ ಹಾಕಿ, ಅದರ ಮೇಲೆ ಟಿವಿಯ ಸೌಂಡ್ ಸ್ಪೀಕರ್ ಇಟ್ಟು ಜೋರಾಗಿ ಹಾಡುಗಳನ್ನು ಹಾಕುತ್ತಾ ರಸ್ತೆಯನ್ನು ಅಡ್ಡಗಟ್ಟಿದ್ದಾನೆ. ಇದರಿಂದ ಸಂಚಾರ ದಟ್ಟಣೆ ಉಂಟಾಗಿ ಜನರು ಹೆದರಿದ್ದಾರೆ.

ಪೊಲೀಸರ ಮೇಲೆ ಕತ್ತಿ ಬೀಸಿದ ರಂಜಿತ್:

ಯುವಕನ ಈ ವಿಲಕ್ಷಣ ವರ್ತನೆಯನ್ನು ಕಂಡು ಗಾಬರಿಗೊಂಡ ಸ್ಥಳೀಯರು ತಕ್ಷಣ ಕೋಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಯುವಕನಿಗೆ ಬುದ್ಧಿ ಹೇಳಲು ಪ್ರಯತ್ನಿಸಿದಾಗ, ಆತ ತನ್ನ ಬಳಿಯಿದ್ದ ಕತ್ತಿಯನ್ನು ತೆಗೆದು ಪೊಲೀಸರಿಗೆ ತೋರಿಸಿದ್ದಾನೆ. ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ರಂಜಿತ್‌ನನ್ನು ಸತತ ಪ್ರಯತ್ನದ ನಂತರ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಾನಸಿಕ ಅಸ್ವಸ್ಥನೇ?

ಬಂಧಿತ ಯುವಕ ರಂಜಿತ್ ಸೋಮಯಾಜಿಯನ್ನು ವಿಚಾರಣೆ ನಡೆಸಿದಾಗ ಆತ ಮಾನಸಿಕ ಅಸ್ವಸ್ಥನಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಆದರೆ, ಆತನ ಕುಟುಂಬದವರು ಆತನ ಮಾನಸಿಕ ಚಿಕಿತ್ಸೆಗೆ ಸಂಬಂಧಿಸಿದ ಯಾವುದೇ ಅಧಿಕೃತ ದಾಖಲೆಗಳನ್ನು ಹಾಜರುಪಡಿಸಲು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಟ ಪೊಲೀಸರು ಆತನ ವಿರುದ್ಧ ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಇಡೀ ಘಟನೆಯನ್ನು ಸ್ಥಳೀಯರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ. ಹೆದ್ದಾರಿಯಲ್ಲಿ ಅಟ್ಟಹಾಸ ಮೆರೆದ ಯುವಕನ ಧೈರ್ಯ ಮತ್ತು ಪೊಲೀಸರ ಮೇಲಿನ ಹಲ್ಲೆ ಯತ್ನ ಕಂಡು ಜನರು ಆತಂಕ ವ್ಯಕ್ತಪಡಿಸಿದ್ದಾರೆ.