ಉಡುಪಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶ್ಲಾಘಿಸಿದ ಹಿಂದೂ-ಮುಸ್ಲಿಂ ಸೌಹಾರ್ದತೆಯ ಘಟನೆಯೊಂದು ಹೊಸ ತಿರುವು ಪಡೆದಿದೆ. ವೃದ್ಧೆಗೆ ಸಹಾಯ ಮಾಡಿದ ಮುಸ್ಲಿಂ ಮಹಿಳೆ ನೆರೆಮನೆಯವರಲ್ಲ, ಬದಲಿಗೆ ಆಕೆಯ ಮತಾಂತರಗೊಂಡ ಸ್ವಂತ ಮಗಳು ಎಂಬ ಸತ್ಯ ಬಹಿರಂಗವಾಗಿದ್ದು, ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಉಡುಪಿ: ಜಿಲ್ಲೆಯಲ್ಲೊಂದು ಘಟನೆ ಮೊದಲು ಧಾರ್ಮಿಕ ಸೌಹಾರ್ದತೆಯ ಉದಾಹರಣೆಯಾಗಿ ಬಿಂಬಿತವಾಗಿದ್ದರೂ, ಇದೀಗ ಅದೇ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಭೇಟಿ ವೇಳೆ ನಡೆದ ಘಟನೆಯಲ್ಲಿ, ಅಸಹಾಯಕ ಹಿಂದೂ ವೃದ್ಧ ಮಹಿಳೆಯನ್ನು ಇಬ್ಬರು ಮುಸ್ಲಿಂ ಮಹಿಳೆಯರು ಕರೆದುಕೊಂಡು ಬಂದು ನೆರವು ಕೇಳಿದ್ದ ದೃಶ್ಯವು ಬಹಳ ಗಮನ ಸೆಳೆದಿತ್ತು. ಈ ಘಟನೆ ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿ ಎಂಬಂತೆ ವ್ಯಾಪಕವಾಗಿ ಚರ್ಚೆಯಾಗಿತ್ತು. ಜೊತೆಗೆ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಇದು ಸೌಹಾರ್ದತೆಗೆ ಉದಾಹರಣೆ ಎಂದು ಹೇಳಿಕೆ ನೀಡಿದ್ದರು. ಆದರೆ ಈಗ ಘಟನೆಯ ಅಸಲಿಯತ್ತು ಈಗ ಬಿಜೆಪಿಯ ಕೋಪಕ್ಕೆ ಕಾರಣವಾಗಿದೆ.

ಸೌಹಾರ್ದತೆಯ ಉದಾಹರಣೆಯಾಗಿ ಬಿಂಬಿತವಾದ ಘಟನೆ
ಶನಿವಾರ ನಡೆದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ, ವಾಕರ್ ಹಿಡಿದುಕೊಂಡು ಬಂದ ವೃದ್ಧ ಮಹಿಳೆ ತನ್ನ ಸಂಕಷ್ಟವನ್ನು ಸಚಿವರ ಮುಂದೆ ವಿವರಿಸಿದರು. ಐದು ಸೆಂಟ್ಸ್ ಜಮೀನಿನ ದಾಖಲೆ ಸಮಸ್ಯೆಯಿಂದ ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ಅಳುತ್ತಾ ಮನವಿ ಮಾಡಿದರು. ಅವರನ್ನು ಕರೆದುಕೊಂಡು ಬಂದಿದ್ದು ಮುಸ್ಲಿಂ ಮಹಿಳೆಯರು, “ಈ ಅಜ್ಜಿಗೆ ಯಾರೂ ದಿಕ್ಕಿಲ್ಲ. ನಾವು ನೆರೆಮನೆಯವರು. ಆಕೆಗೆ ಊಟ ಕೊಡುತ್ತೇವೆ. ಹಲವೆಡೆ ಸಹಾಯ ಕೇಳಿದ್ದರೂ ಪ್ರಯೋಜನವಾಗಿಲ್ಲ. ಬೆಳಿಗ್ಗೆಯೇ ಕರೆದುಕೊಂಡು ಬಂದು ಇಲ್ಲಿ ಕಾಯುತ್ತಿದ್ದೇವೆ,” ಎಂದು ಹೇಳಿ ಕಣ್ಣೀರು ಹಾಕಿದರು.
ಈ ದೃಶ್ಯದಿಂದ ಸ್ಪಂದಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, “ಇದು ನಿಜವಾದ ಹಿಂದೂ-ಮುಸ್ಲಿಂ ಸೌಹಾರ್ದತೆ. ಬಿಜೆಪಿಯವರು ಇದನ್ನು ನೋಡಿ ಕಲಿಯಬೇಕು,” ಎಂದು ಹೇಳಿ ಘಟನೆಯನ್ನು ಉದಾಹರಣೆಯಾಗಿ ಉಲ್ಲೇಖಿಸಿದ್ದರು.
ಘಟನೆಗೆ ಟ್ವಿಸ್ಟ್ ನೀಡಿದ್ದು ಮತಾಂತರಿ ಮಹಿಳೆ
ಆದರೆ, ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಹೊಸ ವಿಚಾರಗಳು ಬೆಳಕಿಗೆ ಬಂದಿದೆ. ಘಟನೆಯ ನೈಜ ಸ್ವರೂಪದ ಬಗ್ಗೆ ಚರ್ಚೆ ಆರಂಭವಾಗಿದೆ. ಮಾಹಿತಿ ಪ್ರಕಾರ, ನೆರವು ಕೇಳಿದ ಮುಸ್ಲಿಂ ಮಹಿಳೆಯರಲ್ಲಿ ಒಬ್ಬರು ಹಿಂದೂ ವೃದ್ಧ ಮಹಿಳೆಯ ಸ್ವಂತ ಮಗಳು ಎಂಬುದು ಬಹಿರಂಗವಾಗಿದೆ.
ಸುಮಾರು 25 ವರ್ಷಗಳ ಹಿಂದೆ ಆಕೆ ಹಿಂದೂ ಧರ್ಮದಿಂದ ಮತಾಂತರಗೊಂಡಿದ್ದು, ತಾಯಿಯನ್ನು ಕರೆದುಕೊಂಡು ಬಂದು ಸಹಾಯಕ್ಕಾಗಿ ಮನವಿ ಮಾಡಿದ್ದಾಳೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಇದರಿಂದ, ಮೊದಲಿಗೆ ನೆರೆಮನೆಯವರಂತೆ ಬಿಂಬಿತವಾಗಿದ್ದ ಸಂಬಂಧ ವಾಸ್ತವದಲ್ಲಿ ತಾಯಿ-ಮಗಳು ಎಂಬುದು ತಿಳಿದು ಬಂದಿದೆ.
ಬಿಜೆಪಿಯಿಂದ ತಿರುಗೇಟು
ಈ ಬೆಳವಣಿಗೆಯ ನಂತರ ಭಾರತೀಯ ಜನತಾ ಪಕ್ಷ ಹಾಗೂ ಅದರ ಮಹಿಳಾ ಮೋರ್ಚಾ ನಾಯಕಿಯರು ಸಚಿವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ಸ್ವಂತ ಮಗಳಾಗಿದ್ದರೂ ನೆರೆಮನೆಯವರು ಎಂದು ಹೇಳಿಕೊಂಡು ಸೌಹಾರ್ದತೆಯ ಉದಾಹರಣೆ ನೀಡುವುದು ಎಷ್ಟು ಸಮಂಜಸ? ಈ ರೀತಿಯ ಘಟನೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ,” ಎಂದು ಟೀಕಿಸಿದ್ದಾರೆ. ಇದೇ ವೇಳೆ, “ಸೌಹಾರ್ದತೆಯ ಪಾಠವನ್ನು ನಿಮ್ಮಿಂದ ಕಲಿಯಬೇಕಾಗಿಲ್ಲ” ಎಂದು ಹೇಳಿ ಸಚಿವರಿಗೆ ತಿರುಗೇಟು ನೀಡಿದ್ದಾರೆ. ಜೊತೆಗೆ, ಜಿಲ್ಲೆಗೆ ಬರುವ ಸಂದರ್ಭಗಳಲ್ಲಿ ಇಂತಹ ಘಟನೆಗಳನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದಾರೆ.
ರಾಜಕೀಯ ಚರ್ಚೆಗೆ ಕಾರಣವಾದ ಘಟನೆ
ಒಟ್ಟಾರೆ, ಆರಂಭದಲ್ಲಿ ಮಾನವೀಯತೆ ಮತ್ತು ಸೌಹಾರ್ದತೆಯ ಸಂಕೇತವಾಗಿ ಕಂಡಿದ್ದ ಈ ಘಟನೆ, ಇದೀಗ ಕುಟುಂಬ ಸಂಬಂಧ ಬಹಿರಂಗವಾದ ಹಿನ್ನೆಲೆ ಹೊಸ ವಿವಾದಕ್ಕೆ ಕಾರಣವಾಗಿದೆ. ಇದರಿಂದ ರಾಜಕೀಯ ವಾಗ್ವಾದ ಹೆಚ್ಚಾಗಿದ್ದು, ಸತ್ಯಾಸತ್ಯತೆ ಕುರಿತು ಚರ್ಚೆಗಳು ಮುಂದುವರಿದಿವೆ. ಈ ಪ್ರಕರಣವು ಮಾನವೀಯತೆ, ಧಾರ್ಮಿಕ ಸೌಹಾರ್ದತೆ ಮತ್ತು ರಾಜಕೀಯ ವ್ಯಾಖ್ಯಾನಗಳ ನಡುವೆ ಇರುವ ಸೂಕ್ಷ್ಮ ಸಂಬಂಧವನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ.


