ಮಹಾರಾಷ್ಟ್ರದ ಔರಂಗಬಾದ್‌ನಿಂದ ಈರುಳ್ಳಿ ತುಂಬಿಕೊಂಡು ತಮಿಳುನಾಡಿನ ಕೊಯಮತ್ತೂರಿಗೆ ಹೋಗುತ್ತಿದ್ದ ಲಾರಿ| ಪಶು ಆಹಾರ ತುಂಬಿಕೊಂಡು ಬರುತ್ತಿದ್ದ ಮತ್ತೊಂದು ಲಾರಿ ಹಿಂಬದಿಯಿಂದ ಲಾರಿಗೆ ಡಿಕ್ಕಿ ಹೊಡೆದಿದೆ| ಸ್ಥಳದಲ್ಲಿಯೇ ಇಬ್ಬರ ಸಾವು| 

ಬೆಂಗಳೂರು(ಮೇ.03): ಎರಡು ಲಾರಿಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಕಾಮಾಕ್ಷಿಪಾಳ್ಯ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ.

Add Asianetnews Kannada as a Preferred SourcegooglePreferred

ತಮಿಳುನಾಡು ಮೂಲದ ಪಾಷಾ(45) ಹಾಗೂ ಅಲ್ಲಾವುದ್ದೀನ್‌(48) ಮೃತರು. ಘಟನೆಯಲ್ಲಿ ಮತ್ತೊಂದು ಲಾರಿಯ ಚಾಲಕರಾದ ಮುರುಗೇಶ್‌(48) ಮತ್ತು ಸುಬ್ರಮಣಿ(30) ಎಂಬುವರು ಗಾಯಗೊಂಡಿದ್ದಾರೆ ಎಂದು ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಬೆಂಗ್ಳೂರಲ್ಲಿ ಪ್ರತ್ಯೇಕ ಅಪಘಾತ: ಇಬ್ಬರ ಸಾವು

ಭಾನುವಾರ ನಸುಕಿನ ವೇಳೆ ಮೂರು ಗಂಟೆ ಸುಮಾರಿಗೆ ಮಹಾರಾಷ್ಟ್ರದ ಔರಂಗಬಾದ್‌ನಿಂದ ಅರುಣ್‌ ಪಾಷಾ ಮತ್ತು ಅಲ್ಲಾವುದ್ದೀನ್‌ ಲಾರಿಯಲ್ಲಿ ಈರುಳ್ಳಿ ತುಂಬಿಕೊಂಡು ತಮಿಳುನಾಡಿನ ಕೊಯಮತ್ತೂರಿಗೆ ಹೋಗುತ್ತಿದ್ದರು. ಈ ವೇಳೆ ನೈಸ್‌ ರಸ್ತೆಯ ಮಂಗನಹಳ್ಳಿ ಮೇಲ್ಸೇತುವೆ ಬಳಿ ಪಶು ಆಹಾರ ತುಂಬಿಕೊಂಡು ಬರುತ್ತಿದ್ದ ಮುರುಗೇಶ್‌ ಮತ್ತು ಸುಬ್ರಮಣಿ ಅವರಿದ್ದ ಲಾರಿ ಹಿಂಬದಿಯಿಂದ ಪಾಷಾ ಅವರಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿಗಳು ಪಲ್ಟಿ ಹೊಡೆದಿದ್ದು, ನೈಸ್‌ ರಸ್ತೆಯಿಂದ ತಡೆಗೋಡೆ ಡಿಕ್ಕಿಯಾಗಿ ಕೆಳಗೆ ಬಿದ್ದಿದೆ. ಸ್ಥಳದಲ್ಲಿಯೇ ಪಾಷಾ ಮತ್ತು ಅಲ್ಲಾವುದ್ದೀನ್‌ ಸಾವನ್ನಪ್ಪಿದ್ದಾರೆ.

ಸ್ಥಳದಲ್ಲಿ ಈರುಳ್ಳಿ ಚೀಲಗಳೆಲ್ಲಾ ಕೆಳಗೆ ಬಿದ್ದಿದ್ದವು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಲಾರಿ ಮತ್ತು ಈರುಳ್ಳಿ ಚೀಲಗಳನ್ನು ಒಂದೆಡೆ ಸರಿಸಿ ಇತರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಬೆಳಗ್ಗೆ ದಾಸನಪುರದ ಎಪಿಎಂಸಿಯಿಂದ ಕೆಲ ಸಿಬ್ಬಂದಿ ಮತ್ತೊಂದು ಲಾರಿಯಲ್ಲಿ ಈರುಳ್ಳಿ ಮೂಟೆಗಳನ್ನು ತುಂಬಿಕೊಂಡು ಹೋಗಿದ್ದಾರೆ ಎಂದು ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.