ಕೊರೋನಾ ಸೋಂಕಿನಿಂದ ಭಯಗೊಂಡು ಪ್ರತ್ಯೇಕವಾಗಿ ಇಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆಗಳು ನಗರದಲ್ಲಿ ನಡೆದಿವೆ. ಮತ್ತಿಕೆರೆಯ ಎಂಎಸ್‌ಆರ್‌ ನಗರದ ನಿವಾಸಿ 54 ವರ್ಷದ ಪಾನ್‌ ಬೀಡಾ ವ್ಯಾಪಾರಿ ಹಾಗೂ ಹೆಸರುಘಟ್ಟದಲ್ಲಿ 50 ವರ್ಷದ ಖಾಸಗಿ ಕಂಪನಿ ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರು(ಜು.22): ಕೊರೋನಾ ಸೋಂಕಿನಿಂದ ಭಯಗೊಂಡು ಪ್ರತ್ಯೇಕವಾಗಿ ಇಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆಗಳು ನಗರದಲ್ಲಿ ನಡೆದಿವೆ. ಮತ್ತಿಕೆರೆಯ ಎಂಎಸ್‌ಆರ್‌ ನಗರದ ನಿವಾಸಿ 54 ವರ್ಷದ ಪಾನ್‌ ಬೀಡಾ ವ್ಯಾಪಾರಿ ಹಾಗೂ ಹೆಸರುಘಟ್ಟದಲ್ಲಿ 50 ವರ್ಷದ ಖಾಸಗಿ ಕಂಪನಿ ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಇಬ್ಬರು ಕುಟುಂಬದ ಸದಸ್ಯರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

Add Asianetnews Kannada as a Preferred SourcegooglePreferred

ಸೋಂಕಿತ ಆತ್ಮಹತ್ಯೆ

ಯಶವಂತಪುರದಲ್ಲಿ ಪಾನ್‌ ಬೀಡಾ ಶಾಪ್‌ ನಡೆಸುತ್ತಿದ್ದ ಮೃತ ವ್ಯಕ್ತಿ, ತನ್ನ ಕುಟುಂಬದ ಜತೆ ಎಂಎಸ್‌ಆರ್‌ ನಗರದಲ್ಲಿ ನೆಲೆಸಿದ್ದ. ಸೋಮವಾರ ರಾತ್ರಿ ಆತನಿಗೆ ಸೋಂಕು ದೃಢಪಟ್ಟಿತ್ತು. ಆರೋಗ್ಯ ಇಲಾಖೆ ಅಧಿಕಾರಿಗಳು ಕರೆ ಮಾಡಿ ಹೋಂ ಕ್ವಾರಂಟೈನ್‌ನಲ್ಲಿರುವಂತೆ ವ್ಯಾಪಾರಿಗೆ ಸೂಚಿಸಿದ್ದರು. ಈ ಕರೆ ಬಂದ ಹಿನ್ನೆಲೆಯಲ್ಲಿ ಆತಂಕಗೊಂಡ ಆತ, ಮನೆ ಮಹಡಿಗೆ ತೆರಳಿ ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಗಳವಾರ ಬೆಳಗ್ಗೆ ಮೃತನ ಸಂಬಂಧಿ ಕೊಠಡಿಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆರೆಹೊರೆಯವರ ಮೇಲೆ ಆರೋಪ:

ಹೆಸರಘಟ್ಟಕೆರೆ ಸಮೀಪ ಮತ್ತೊಬ್ಬ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೊಡ್ಡಬಳ್ಳಾಪುರದಲ್ಲಿ ನೆಲೆಸಿದ್ದ ಮೃತನ ಪತ್ನಿ ಮತ್ತು ಮಗನಿಗೆ ಸೋಂಕು ಕಾಣಿಸಿಕೊಂಡಿತ್ತು. ಇದರಿಂದ ಜಿಗುಪ್ಸೆಗೊಂಡ ಆತ, ತನ್ನ ಹುಟ್ಟೂರು ಹೆಸರುಘಟ್ಟಕ್ಕೆ ಸೋಮವಾರ ರಾತ್ರಿ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಗಳವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ ಎಂದು ಸೋಲದೇವನಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಕೊರೋನಾ ಸೋಂಕಿತರ ಶವ ಸಂಸ್ಕಾರಕ್ಕೆ 4 ಚಿತಾಗಾರ

ಸೋಂಕು ಕಾಣಿಸಿಕೊಂಡ ಬಳಿಕ ನೆರೆಹೊರೆಯವರು ನಿಂದಿಸಿದ್ದರು. ಅದರಲ್ಲೂ ಸ್ಥಳೀಯ ರಾಜಕೀಯ ಮುಖಂಡನೊಬ್ಬ ನಮ್ಮ ತಂದೆಗೆ ನಿಂದಿಸಿದ್ದರು. ಈ ಮಾತುಗಳಿಂದ ಬೇಸತ್ತು ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]