Asianet Suvarna News Asianet Suvarna News

Tumakur : ಒನಕೆ ಓಬವ್ವನ ಸಾಹಸ ಹೆಣ್ಣು ಮಕ್ಕಳಿಗೆ ಸ್ಫೂರ್ತಿ

  ವೀರ ವನಿತೆ ಒನಕೆ ಓಬವ್ವನ ಸಮಯ ಪ್ರಜ್ಞೆ, ಧೈರ್ಯ ಮತ್ತು ಸಾಹಸಗಳು ನಮ್ಮ ನಾಡಿನ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಬೇಕು ಎಂದು ತುಮಕೂರು ಮೇಯರ್‌ ಪ್ರಭಾವತಿ ಸುಧೀಶ್ವರ್‌ ತಿಳಿಸಿದರು.

Tumkur : Onake Obavva is an inspiration for adventure girls snr
Author
First Published Nov 12, 2022, 4:43 AM IST

 ತುಮಕೂರು :  ವೀರ ವನಿತೆ ಒನಕೆ ಓಬವ್ವನ ಸಮಯ ಪ್ರಜ್ಞೆ, ಧೈರ್ಯ ಮತ್ತು ಸಾಹಸಗಳು ನಮ್ಮ ನಾಡಿನ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಬೇಕು ಎಂದು ತುಮಕೂರು ಮೇಯರ್‌ ಪ್ರಭಾವತಿ ಸುಧೀಶ್ವರ್‌ ತಿಳಿಸಿದರು.

ನಗರದ ಟೌನ್‌ಹಾಲ್‌ ಮುಂಭಾಗದಲ್ಲಿ ಅಖಿಲ ಭಾರತ ಡಾ.ಅಂಬೇಡ್ಕರ್‌ ಪ್ರಚಾರ ಸಮಿತಿ ಹಾಗೂ ದಸಂಸ ಜಂಟಿಯಾಗಿ ಆಯೋಜಿಸಿದ್ದ ಕನಕದಾಸರು ಹಾಗೂ ವೀರ ವನಿತೆ ಒನಕೆ ಓಬವ್ವ ಅವರ ಜಯಂತಿ ಕಾರ್ಯಕ್ರಮದಲ್ಲಿ ಇಬ್ಬರು ಮಹನೀಯರಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಎದುರಾಳಿ ಸೈನಿಕರು ಕೋಟೆಯನ್ನು ಮುತ್ತಿದಾಗ ತನ್ನ ಮನೆಯಲ್ಲಿ ಆಹಾರ ಸಂಸ್ಕೃರಣೆಗೆ ಬಳಸುವಂತಹ ಒನಕೆಯನ್ನೇ ಆಯುಧವಾಗಿ ಬಳಸಿ ನೂರಾರು ಸೈನಿಕರ ರುಂಡಗಳನ್ನು ಚಂಡಾಡಿ, ಕೋಟೆಯನ್ನು ರಕ್ಷಿಸಿ ಮಹಾಮಾತೆ ನಮ್ಮ ಓಬವ್ವ, ಇಂತಹವರ ಚರಿತ್ರೆಗಳು ನಾಡಿನಾಚೆಗೂ ಪಸರಿಸುವಂತಹ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದರು.

ಕುಲ ನೆಲೆಯನ್ನೇ ಪ್ರಶ್ನಿಸಿದ ಕನಕದಾಸರ ಆ ನಡೆ ಇಂದಿಗೂ ಪ್ರಸ್ತುತ. ಜಾತಿ ಹೀನನ ಮನೆಯ ಜೋತಿ ತಾ ಹೀನವೇ ಎಂದು ಪ್ರಶ್ನಿಸುವ ಮೂಲಕ ಅಸ್ೊ್ರಶ್ಯತೆ ಆಚರಣೆಯ ವಿರುದ್ದ ಸಮರ ಸಾರಿದ್ದ ಕನಕದಾಸರು, ತಮ್ಮ ಹಲವಾರು ಕೃತಿಗಳ ಮೂಲಕ ಚಾತುರ್ವಣ ವ್ಯವಸ್ಥೆಯನ್ನೇ ಪ್ರಶ್ನಿಸಿದ್ದರು. ಇಂತಹ ಮಹನೀಯರ ಜಯಂತಿಗಳನ್ನು ಒಟ್ಟಾಗಿ ಆಚರಿಸುವ ಮೂಲಕ ಅಖಿಲ ಭಾರತ ಡಾ.ಅಂಬೇಡ್ಕರ್‌ ಪ್ರಚಾರ ಸಮಿತಿ ಹಾಗೂ ದಸಂಸ ಸಂಘಟನೆಗಳು ನಾಡಿಗೆ ಒಳ್ಳೆಯ ಸಂದೇಶ ಸಾರಿವೆ ಎಂದು ಮೇಯರ್‌ ಪ್ರಭಾವತಿ ಪ್ರಶಂಶಿಸಿದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಎನ್‌.ರಾಮಯ್ಯ ಮಾತನಾಡಿ, ವೀರ ವಿನಿತೆ ಒನಕೆ ಓಬವ್ವ ನಮಗೆಲ್ಲರಿಗೂ ಆದರ್ಶ ಪ್ರಾಯರಾಗಿದ್ದಾರೆ. ಮಹಿಳೆಯರು ಅವರ ಆದರ್ಶಗಳನ್ನು ಪಾಲಿಸುವ ಮೂಲಕ ನಾಡಿನ ಐಕ್ಯತೆಗೆ ಪಣತೊಡಬೇಕು. ಕನಕದಾಸು ಜಾತಿ, ಮತ, ಪಂಥಗಳನ್ನು ಬಿಟ್ಟು ಹೊರಬರಲು ಕರೆ ನೀಡಿದ್ದರು. ಈ ಇಬ್ಬರು ನಾಯಕರ ತತ್ವಾದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕಿದೆ ಎಂದರು.

ಅಖಿಲ ಭಾರತ ಡಾ.ಅಂಬೇಡ್ಕರ್‌ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್‌.ಕೆ. ನಿಧಿಕುಮಾರ್‌ ಮಾತನಾಡಿ, ಕನಕದಾಸರು ಮತ್ತು ವೀರ ವನಿತೆ ಒನಕೆ ಓಬವ್ವ ಅವರ ಜಯಂತಿಗಳನ್ನು ದಸಂಸ ಹಾಗೂ ಅಖಿಲ ಭಾರತ ಡಾ.ಅಂಬೇಡ್ಕರ್‌ ಪ್ರಚಾರ ಸಮಿತಿ ಒಟ್ಟಿಗೆ ಆಚರಿಸುವ ಮೂಲಕ ಶೂದ್ರ ಸಮುದಾಯಗಳೆಲ್ಲಾ ಒಗ್ಗೂಡಬೇಕು ಎಂಬ ಹೊಸ ಸಂದೇಶ ನೀಡಿದೆ ಎಂದರು.

ಅಖಿಲ ಭಾರತ ಡಾ.ಅಂಬೇಡ್ಕರ್‌ ಪ್ರಚಾರ ಸಮಿತಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್‌. ಶ್ರೀನಿವಾಸ್‌ ಮಾತನಾಡಿ, ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೆನಾದರೂ ಬಲ್ಲಿರಾ ಎಂದು ಪ್ರಶ್ನಿಸುವ ಮೂಲಕ ಇಡೀ ನಾಡಿಗೆ ಸೌಹಾರ್ದದ ಸಂದೇಶ ಸಾರಿದವರು ಕನಕದಾಸರು, ಹಾಗೆಯೇ ಒರ್ವ ಕೋಟೆ ಕಾವಲುಗಾರನ ಹೆಂಡತಿಯಾಗಿ, ಕೋಟೆಗೆ ಆಪತ್ತು ಎದುರಾದಾಗ, ಸಮಯಪ್ರಜ್ಞೆಯಿಂದ ವೈರಿಗಳ ರುಂಡ ಚಂಡಾಡಿದ ವೀರ ವನಿತೆ ಓಬವ್ವ ಎಲ್ಲರಿಗೂ ಮಾದರಿಯಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಗುರು ಪ್ರಸಾದ್‌, ರಂಜನ್‌, ಚಲ ವಾದಿ ಶೇಖರ್‌, ಹೆಗ್ಗರೆ ಕೃಷ್ಣಮೂರ್ತಿ, ಹಬ್ಬತ್ತನಹಳ್ಳಿ ಶ್ರೀನಿವಾಸ್‌, ಸಿದ್ದರಾಜು, ನಿವೃತ್ತ ಅಧಿಕಾರಿ ಶಿವಣ್ಣ, ಜಿ.ಆರ್‌.ಸುರೇಶ್‌, ಶಬ್ಬೀರ್‌ ಅಹಮದ್‌, ನಾರಾಯಣ್‌ ಎಸ್‌. ಬಾಲರಾಜು, ರಾಮ ಚಂದ್ರ ರಾವ್‌, ಮನು.ಟಿ, ಶ್ರೀನಿವಾಸ್‌ ಎನ್‌.ವಿ. ಶಿವರಾಜು ಕುಚ್ಚಂಗಿ, ಟಿ.ಆರ್‌.ರಘು, ರಂಗ ಸ್ವಾಮಯ್ಯ, ಗೋವಿಂದರಾಜು, ಶಿವಣ್ಣ, ಗಂಗಾಧರ್‌ ಜಿ.ಆರ್‌., ಸುನಿಲ್‌,ಕುಶಾಲ್‌, ಕೋಮಲ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕನಕದಾಸರು ಮತ್ತು ವೀರ ವನಿತೆ ಓಬವ್ವ ಜಯಂತಿ ಅಂಗವಾಗಿ ಸಿಹಿ ಹಂಚಿ ಸಂಭ್ರಮಿಸಲಾಯಿತು. 

Follow Us:
Download App:
  • android
  • ios