ತುಮಕೂರು ಜಿಲ್ಲೆಯ ಶಿರಾದಲ್ಲಿ ಆರು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಪೋಷಕರ ವಿರೋಧದ ನಡುವೆ ಪ್ರೇಮ ವಿವಾಹವಾಗಿದ್ದಾರೆ. ಯುವತಿಯ ಕುಟುಂಬದಿಂದ ಜೀವ ಬೆದರಿಕೆ ಎದುರಾಗಿದ್ದು, ನವದಂಪತಿ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ.

ಪೋಷಕರ ವಿರೋಧದ ನಡುವೆ ಪ್ರೇಮ ವಿವಾಹವಾದ ಜೋಡಿ:

ತುಮಕೂರು: ತುಮಕೂರು ಜಿಲ್ಲೆ ಶಿರಾ ತಾಲೂಕಿನಲ್ಲಿ 6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿಯೊಂದು ಪ್ರೇಮ ವಿವಾಹವಾಗಿದ್ದು, ಈಗ ತಮಗೆ ರಕ್ಷಣೆ ನೀಡಬೇಕು ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಶಿರಾ ತಾಲ್ಲೂಕು ಹುಲಿಕುಂಟೆ ಹೋಬಳಿಯ ತಿಮ್ಮನಹಳ್ಳಿ ಗ್ರಾಮದ ಮೋಹನ್ ಕುಮಾರ್ ಅವರು ಲಟ್ಟನಹಳ್ಳಿ ಗ್ರಾಮದ ಸಂಗೀತಾ ಎಂಬ ಹುಡುಗಿಯನ್ನು ಪ್ರೀತಿಸಿದ್ದು, ಇಬ್ಬರು ಶಿರಾದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ತಮ್ಮ ಮದುವೆಯನ್ನು ನೋಂದಣಿ ಮಾಡಿದ್ದಾರೆ. ನಾವಿಬ್ಬರು ಮದುವೆಯಾಗಿದ್ದೇವೆ ನಮಗೇ ಇಲ್ಲಿಯವರೆಗೆ ಯಾವುದೇ ತೊಂದರೆ ಆಗಿಲ್ಲ, ಮುಂದೆಯೂ ತೊಂದರೆ ಆಗಬಾರದು. ನಾವು ಇವತ್ತು ಮದುವೆಯಾಗಿ ನಮ್ಮ ಊರಿಗೆ ಹೋಗುತ್ತಿದ್ದೇವೆ. ಈ ವೇಳೆ ತನಗೆ ಹಾಗೂ ತನ್ನ ಗಂಡ ಹಾಗೂ ಅವರ ಕುಟುಂಬಕ್ಕೆ ನನ್ನ ತಂದೆಯವರ ಕುಟುಂಬದಿಂದ ಬೆದರಿಕೆ ಇದ್ದು, ತಮ್ಮ ಜೀವಕ್ಕಾಗಲಿ ತನ್ನ ಪತಿ ಮನೆಯವರ ಜೀವಕ್ಕಾಗಲಿ ಅಥವಾ ನಮಗೆ ಮದುವೆ ಮಾಡಿಸಿದವರಿಗಾಗಲಿ ಯಾವುದೇ ಹಾನಿ ಆದರೆ ಅದಕ್ಕೆ ನನ್ನ ತಂದೆ ಹಾಗೂ ಕುಟುಂಬದವರೇ ಕಾರಣ ಆಗಿರುತ್ತಾರೆ. ಅವರಿಂದ ನಮಗೆ ರಕ್ಷಣೆ ಬೇಕು ಎಂದು ಯುವತಿ ವೀಡಿಯೋ ಮೂಲಕ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಪಕ್ಷ ಬೇಧವಿಲ್ಲದೇ ಎಲ್ಲಾ ರಾಜಕಾರಣಿಗಳ ಮನಗೆದ್ದ ಗಿಲ್ಲಿ: ಮನೆಗೆ ಕರೆಸಿ ಬೆನ್ನುತಟ್ಟಿದ ಗಾಲಿ

ಯುವಕ ಮೋಹನ್ ಕುಮಾರ್ ಮಾತನಾಡಿ ನಾನು ಲಟ್ಟನಹಳ್ಳಿ ರಂಗಸ್ವಾಮಿ ಅವರ ಮಗಳನ್ನು ಆರು ವರ್ಷಗಳಿಂದ ಪ್ರೀತಿಸುತ್ತಿದ್ದು, ಮದುವೆ ಮಾಡಿ ಕೊಡಿ ಎಂದು ಅವರನ್ನು ಹಿಂದೊಮ್ಮೆ ಕೇಳಿದ್ದೆ. ಆದರೆ ಅವರು ಆಗ ಮದುವೆ ಮಾಡಿ ಕೊಡುವುದಾಗಿ ಹೇಳಿ ನಂತರ ಆಗುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ನಾವು ಅನಿವಾರ್ಯವಾಗಿ ರಿಜಿಸ್ಟ್ರಾರ್ ಮದುವೆ ಆಗಿದ್ದೇವೆ. ಮದುವೆ ಆದ ನಂತರ ಹುಡುಗಿಯ ತಂದೆ ನಮಗೆ ಜೀವ ಬೆದರಿಕೆ ಹಾಕಿದ್ದಾರೆ. ನಮಗೂ ಹಾಗೂ ನಮಗೆ ಮದುವೆ ಮಾಡಿಸಿದವರಿಗೂ ಕಡಿತಿನಿ ಇರಿತಿನಿ ಎಂದು ಜೀವ ಬೆದರಿಕೆ ಹಾಕಿದ್ದು, ನನ್ನ ಸಹೋದರನಿಗೂ ಬೆದರಿಕೆ ಹಾಕಿದ್ದಾರೆ. ಊರಿಗೆ ಬಂದ ಮೇಲೆ ನೋಡಿಕೊಳ್ಳುವೆ ಎಂದಿದ್ದಾರೆ. ಹೀಗಾಗಿ ಅವರಿಂದ ನಮಗೆ ಯಾವುದೇ ತೊಂದರೆ ಆಗದಂತೆ ಕಾಪಾಡಬೇಕು ಎಂದು ಮೋಹನ್ ಕುಮಾರ್ ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಪಿಜ್ಜಾ ಡೆಲಿವರಿ ಬಾಯ್ ಆದ ಕ್ಲಾಸ್‌ಮೇಟ್‌ಗೆ ಅವಮಾನಿಸಿದ ಯುವತಿ: ವೀಡಿಯೋ ವೈರಲ್ ಆಗ್ತಿದ್ದಂತೆ ತೀವ್ರ ಆಕ್ರೋಶ

ಈ ಜೋಡಿಗೆ ಮುಂದೆ ನಿಂತು ಮದುವೆ ಮಾಡಿಸಿದ ವ್ಯಕ್ತಿಯೊಬ್ಬರು ಮಾತನಾಡಿ, ಇವರು ಒಂದೇ ಜನಾಂಗದವರಾಗಿದ್ದು, ನೆಂಟರೂ ಕೂಡ ಆಗಿದ್ದಾರೆ. ಆದರೆ ಮದುವೆಗೆ ಅವರು ನಿರಾಕರಿಸುತ್ತಿರುವುದಕ್ಕೆ ಕಾರಣ ಏನು ಎಂದು ಗೊತ್ತಿಲ್ಲ, ಇವರ ಈ ಮದುವೆಯಿಂದ ಎರಡು ಕುಟುಂಬಗಳ ಮದುವೆ ವೈಮನಸ್ಸಿಗೆ ಕಾರಣವಾಗಿದ್ದು, ಈ ನವದಂಪತಿಗೆ ಪೊಲೀಸರು ಸೂಕ್ತವಾದ ರಕ್ಷಣೆ ನೀಡಬೇಕು. ಇವರು ಒಂದೇ ಸಮುದಾಯದವರು ಆಗಿದ್ದರು ಪೋಷಕರು ನಿರಾಕರಿಸುತ್ತಿರುವುದು ಏಕೆ ಎಂಬುದು ಗೊತ್ತಿಲ್ಲ, ಈ ರೀತಿ ಮಾಡಬಾರದು ಎಂದ ಅವರು ಉತ್ತರ ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಮರ್ಯಾದಾ ಹತ್ಯೆಯನ್ನು ನೆನಪಿಸಿಕೊಂಡ ಅವರು ಇದರಿಂದಾಗಿ ಒಂದು ಕುಟುಂಬ ಧೃತಿಗೆಟ್ಟರೇ ಇನ್ನೊಂದು ಕುಟುಂಬದವರು ಜೈಲಿನಲ್ಲಿದ್ದಾರೆ, ದೇವಾನುದೇವತೆಗಳೇ ಪ್ರೇಮ ವಿವಾಹವಾಗಿದ್ದಾರೆ. ಹೀಗಿರುವಾಗ ನಾವು ವಿರೋಧಿಸುವುದು ಏಕೆ ಎಂದು ಹೇಳಿದ ಅವರು ಪ್ರೇಮಿಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದರು.