Asianet Suvarna News Asianet Suvarna News

'ರಾಜ್ಯದ ಎಲ್ಲ ಹುದ್ದೆಗಳಲ್ಲಿ ಕನ್ನಡಿಗರಿರಬೇಕು'

ರಾಜ್ಯದ ಎಲ್ಲಾ ಹುದ್ದೆಗಳಲ್ಲಿ ಕನ್ನಡಿಗರು ಇರಬೇಕು. ಕೇಂದ್ರ ಅಥವಾ ರಾಜ್ಯ ಸರ್ಕಾರದ ಉದ್ಯೋಗವಾಗಲಿ ಅಲ್ಲಿ ಕನ್ನಡಿಗರೇ ಇರಬೇಕೆನ್ನುವುದು ಬೇಡಿಕೆಯಾಗಲಿ ಎಂದು ಮುಖಂಡರೋರ್ವರು ಹೇಳಿದರು.

Tumakuru Kannada Sahitya sammelana President Speaks About Kannadigas Job Reservation snr
Author
Bengaluru, First Published Feb 14, 2021, 9:56 AM IST

 ತುರುವೇಕೆರೆ (ಫೆ.14):  ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವುದೇ ಹುದ್ದೆಗಳಲ್ಲಿ ಬಹುಪಾಲು ಕನ್ನಡಿಗರೇ ಉದ್ಯೋಗಸ್ಥರಾಗಿರಬೇಕು ಎಂಬುದು ಕನ್ನಡಿಗರ ಸಾರ್ವತ್ರಿಕ ಬೇಡಿಕೆಯಾಗಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರೊ.ಜಿ.ಬಿ. ಶಿವರಾಜು ಪ್ರತಿಪಾದಿಸಿದರು.

ಪಟ್ಟಣದ ಕೆ.ಹಿರಣ್ಣಯ್ಯ ಬಯಲು ರಂಗಮಂದಿರದ ಆವರಣದ ಬಿ.ಎಂ. ಶ್ರೀಕಂಠಯ್ಯ ವೇದಿಕೆಯಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು ಕನ್ನಡಿಗರನ್ನು ಕನ್ನಡ ನಾಡಿನಲ್ಲೇ ಪರಕೀಯರಂತೆ ಕಾಣಲಾಗುತ್ತಿದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೇವಲ ಹತ್ತರಷ್ಟುಮಾತ್ರ ಕನ್ನಡಿಗರು ಕೆಲಸದಲ್ಲಿದ್ದಾರೆ. ಇದು ಖಂಡನೀಯ. ಕನ್ನಡ ನಾಡಿನಲ್ಲಿ ಇರುವ ಇಲಾಖೆಗಳಲ್ಲಿ ಕನ್ನಡಿಗರದ್ದೇ ಸಾರ್ವಭೌಮತ್ವವಿರಬೇಕು ಎಂದರು.

ಪೋಷಕರಿಗೂ ಸಹ ಕನ್ನಡ ಭಾಷೆಯ ಬಗ್ಗೆ ಅಸಡ್ಡೆ ಪ್ರಾರಂಭವಾಗಿದೆ. ಕಾರಣ ನಮ್ಮನ್ನಾಳುವ ಮಂದಿಯೇ ಕನ್ನಡದ ಬಗ್ಗೆ ತಾತ್ಸಾರ ತೋರುತ್ತಿದ್ದಾರೆ. ಮಕ್ಕಳಿಗೆ ಕನ್ನಡ ಭಾಷೆ ಜ್ಞಾನ ಕೊಡಿಸಲು ಹಿಂದೇಟು ಹಾಕುತ್ತಿದ್ದಾರೆ. ಇತರೆ ಭಾಷಾ ಪ್ರಾವಿಣ್ಯತೆ ಪಡೆಯಲಿ ಎಂದು ಹಂಬಲಿಸುತ್ತಿದ್ದಾರೆ. ಹೀಗಾಗಿ ಕನ್ನಡದ ನೋವನ್ನು ಕೇಳುವವರು ಯಾರೂ ಇಲ್ಲದಾಗಿದ್ದಾರೆ ಎಂದು ಶಿವರಾಜು ವಿಷಾದಿಸಿದರು.

ವಾರಕ್ಕಿನ್ನು ನಾಲ್ಕೇ ದಿನ ಕೆಲ್ಸ, ಯಾರಿಗೆ ಅನ್ವಯ? ದಿನಕ್ಕೆಷ್ಟು ಗಂಟೆ ದುಡೀಬೇಕು?

ಓದು ಸಂಸ್ಕಾರವನ್ನು ಕಲಿಸುತ್ತದೆ. ಮೊದಲು ಓದುವ ಗೀಳನ್ನು ಹಚ್ಚಿಸುವ ಕೆಲಸವನ್ನು ಶಿಕ್ಷಕರು ಮತ್ತು ಪೋಷಕರು ಮಾಡಬೇಕಿದೆ. ಅನ್ನವನ್ನು ಕೊಡದಿದ್ದರೆ ಒಂದು ದಿನ ಕೊರಗಬಹುದು. ಆದರೆ ಸೂಕ್ತ ಸಂಸ್ಕಾರವನ್ನು ನೀಡದಿದ್ದಲ್ಲಿ ಜೀವನಪರ್ಯಂತ ಕೊರಗಬೇಕಾದೀತು ಎಂದು ಶಿವರಾಜು ಎಚ್ಚರಿಸಿದರು.

ಜಿಲ್ಲೆಯಲ್ಲಿ ಕನ್ನಡಭವನವನ್ನು ನಿರ್ಮಿಸಿರುವ ಹಾಗೂ ಜಿಲ್ಲೆಯಲ್ಲಿ ಕನ್ನಡವನ್ನು ಜಾಗೃತಿಗೊಳಿಸಿದ ಸಂತೃಪ್ತಿ ತಮಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಹೇಳಿದರು. ಜಿಲ್ಲೆಯ ಹಲವು ತಾಲೂಕು ಕೇಂದ್ರಗಳಲ್ಲಿ ಕನ್ನಡ ಭವನವನ್ನು ನಿರ್ಮಿಸಿ ಅಲ್ಲಿ ಕನ್ನಡದ ಕಾಯಕವಾಗುತ್ತಿರುವುದು ಸಂತಸ ತಂದಿದೆ. ಕನ್ನಡಭವನಗಳು ಕನ್ನಡದ ಹೆಗ್ಗುರುತಾಗಿ ಕೆಲಸ ಮಾಡುತ್ತಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಬೆಮಲ್‌ ಕಾಂತರಾಜು ಮಾತನಾಡಿ, ಗ್ರಂಥಾಲಯಗಳು ಸಾಹಿತ್ಯಗಳ ಕಣಜಗಳಾಗಿವೆ. ಮಕ್ಕಳಿಗೆ ಪುಸ್ತಕಗಳನ್ನು ಓದಿಸುವ ಹವ್ಯಾಸ ಮೂಡಿಸಬೇಕಿದೆ. ಮೊಬೈಲ್‌ ಮತ್ತು ದೂರದರ್ಶನದಿಂದ ಮಕ್ಕಳನ್ನು ದೂರವಿರುಸುವುದು ಅತ್ಯಂತ ಪ್ರಮುಖವಾಗಿದೆ ಎಂದರು.

ನಿಕಟಪೂರ್ವ ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಹುಲಿಕಲ್‌ ನಟರಾಜು ಮಾತನಾಡಿ, ರಾಜ್ಯಕ್ಕೆ ತ್ರಿ ಭಾಷಾ ಸೂತ್ರ ಅಗತ್ಯವಿಲ್ಲ. ನಮ್ಮದು ಜಾತ್ಯತೀತ ರಾಷ್ಟ್ರ ಎಂದು ಹೇಳುತ್ತಲೇ ಮೀಸಲಾತಿಗಾಗಿ ಪಾದಯಾತ್ರೆಗಳು, ಇದಕ್ಕೆ ಮಠಾಧಿ​ೕಶರ ಬೆಂಬಲ ದೊರೆಯುತ್ತಿದೆ. ಇವೆಲ್ಲವನ್ನೂ ನೋಡಿದರೆ ನಾವಿನ್ನು ಯಾವ ಯುಗದಲ್ಲಿದ್ದೇವೆ ಎಂಬ ಸಂಶಯ ಹುಟ್ಟುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.

ತಾಲೂಕಿನ ಸಂಪಿಗೆಯಲ್ಲಿ ನಿರ್ಮಿಸಿರುವ ಬಿಎಂಶ್ರೀ ಭವನ ಇಂದು ದನದ ಕೊಟ್ಟಿಗೆಯಂತಾಗಿದೆ. ಮಹಾತ್ಮರ ಪುಸ್ತಕಗಳನ್ನು ಓದುವವರೇ ಇಲ್ಲದಾಗಿದ್ದಾರೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

Follow Us:
Download App:
  • android
  • ios