ಈಗ ಕೆಲವು ಕಂಪನಿಗಳು ವಾರಕ್ಕೆ ಆರು ದಿನ ಹಾಗೂ ಐದು ದಿನಗಳವರೆಗೆ ಕೆಲಸ ಮಾಡಿಸಿಕೊಳ್ಳುತ್ತಿವೆ. ಆದರೆ, ಹೊಸ ಕಾರ್ಮಿಕ ಸಂಹಿತೆ ಜಾರಿಯಾದರೆ ವಾರಕ್ಕೆ ನಾಲ್ಕೇ ದಿನ ಕೆಲಸ ಮಾಡಬೇಕಾಗಬಹುದು. ಹಾಗಂತ ಇದು ಒತ್ತಾಯದ ಕ್ರಮವಲ್ಲ. ಉದ್ಯೋಗಿಗಳು ಮತ್ತು ಉದ್ಯೋಗದಾತರ ಆಯ್ಕೆಗೆ ಬಿಟ್ಟದ್ದಾಗಿದೆ.
ವಾರಕ್ಕೆ ನಾಲ್ಕೇ ದಿನ ಕೆಲ್ಸಾ ಮಾಡಿ. ಹಾಗಂತ ಹೆಚ್ಚು ಗಂಟೆ ಕೆಲಸ ಮಾಡಬೇಕಿಲ್ಲ. ಅದು ಒಟ್ಟಾರೆ 48 ಗಂಟೆ ಮೀರುವುದಿಲ್ಲ!.
ಹೌದು, ಇಂಥದೊಂದು ಕಾರ್ಮಿಕ ಸಂಹಿತೆಯನ್ನು ಕೇಂದ್ರ ಸರ್ಕಾರ ಸಿದ್ಧ ಮಾಡುತ್ತಿದೆ. ಈ ಬಗ್ಗೆ ಕಾರ್ಮಿಕ ಮತ್ತು ಉದ್ಯೋಗ ಇಲಾಖೆ ಕಾರ್ಯದರ್ಶಿ ಅಪೂರ್ವಾ ಚಂದ್ರ ಅವರೇ ಸ್ವತಃ ಮಾಹಿತಿಯನ್ನು ನೀಡಿದ್ದಾರೆ.
ವಾರಕ್ಕೆ ನಾಲ್ಕು ದಿನಗಳ ಕೆಲಸ ನೀಡುವ ಪ್ರಸ್ತಾಪಿತ ಸಂಹಿತೆ ಮಾತ್ರವಲ್ಲದೇ ಇನ್ನೂ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಪೂರ್ಣಗೊಳಿಸುವ ಪ್ರಕ್ರಿಯೆಯನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಪೂರ್ತಿಗೊಳಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಫೈನಲ್ ಇಯರ್ ಡಿಗ್ರಿಯಲ್ಲಿದ್ದಾಗಲೇ 30 ಲಕ್ಷ ರೂಪಾಯಿ ವೇತನದ ನೌಕರಿ
ಹೊಸ ಕಾರ್ಮಿಕ ಸಂಹಿತೆ ಪೂರ್ತಿಗೊಳಿಸುವ ಪ್ರಕ್ರಿಯೆಗಳಿಗೆ ವೇಗ ನೀಡಲಾಗಿದ್ದು, ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯಗಳೊಂದಿಗೆ ಈ ಬಗ್ಗೆ ಸಮಾಲೋಚನೆ ಮಾಡಲಾಗುತ್ತಿದೆ. ವಾರದೊಳಗೆ, ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಉತ್ತರ ಪ್ರದೇಶ, ಮಧ್ಯ ಪ್ರದೇಶ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳು ರಾಜ್ಯ ಮಟ್ಟದ ಕಾರ್ಮಿಕ ಸಂಹಿತೆಗಳನ್ನು ಪೂರ್ತಿಗೊಳಿಸಲಿವೆ. ಇಎಸ್ಐ(ಎಂಪ್ಲಾಯೀ ಸ್ಟೇಟ್ ಇನ್ಶೂರೆನ್ಸ್ ಕಾರ್ಪೊರೇಷನ್) ಮೂಲಕ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಸೇವೆ ಒದಗಿಸುವ ಬಗ್ಗೆಯೂ ಚಿಂತಿಸಲಾಗುತ್ತಿದೆ ಎಂದು ಚಂದ್ರ ಅವರು ತಿಳಿಸಿದ್ದಾರೆ.
ಈಗ ವಾರಕ್ಕೆ ಐದು ದಿನಗಳ ಕೆಲಸ ಅವಧಿ ಇದ್ದು ಅದನ್ನು ಕಡಿಮೆಗೊಳಿಸಲಾಗುವುದು. ಒಂದು ವೇಳೆ ವಾರಕ್ಕೆ ನಾಲ್ಕು ದಿನಗಳ ಕೆಲಸದ ಅವಧಿಯನ್ನು ಮಾಡಿದರೆ ನೀವು ಸಂಬಳ ಸಹಿತ ಮೂರು ರಜೆಗಳನ್ನು ನೀಡಬೇಕಾಗುತ್ತದೆ. ಹಾಗಾಗಿ, ಅದು ಏಳು ದಿನಗಳ ವಾರವಾಗಬೇಕಾದರೆ ಅದನ್ನು 4 ಅಥಾವ 5 ಅಥವಾ 6 ಕೆಲಸದ ದಿನಗಳಾಗಿ ವಿಂಗಡಿಸಬೇಕಾಗುತ್ತದೆ. ಹಾಗೆಯೇ ವಾರಕ್ಕೆ 48 ಗಂಟೆ ಕೆಲಸದ ಅವಧಿ ಎಂಬ ನಿಯಮದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಚಂದ್ರ ಅವರು ಹೇಳಿದ್ದಾರೆ.
ಉದ್ಯೋಗದಾತರ ಆಯ್ಕೆಯ ಮೇಲೆ ನಿರ್ಧಾರವಾಗಲಿದೆ. ಒಂದು ವೇಳೆ ಅವರು ವಾರಕ್ಕೆ ನಾಲ್ಕು ದಿಗನಳ ಕೆಲಸವನ್ನು ಆಯ್ಕೆ ಮಾಡಿಕೊಂಡರೆ ಮೂರು ದಿನಗಳ ವಿರಾಮ ನೀಡಬೇಕಾಗುತ್ತದೆ. ಒಂದು ವಾರಕ್ಕೆ ಐದು ದಿನಗಳನ್ನು ಆಯ್ಕೆ ಮಾಡಿಕೊಂಡರೆ ಎರಡು ದಿನಗಳ ರಜೆ ನೀಡಬೇಕಾಗುತ್ತದೆ. ಯಾವ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಉದ್ಯೋಗಾತರನ್ನು ಅವಲಂಬಿಸಿದೆ ಎನ್ನುತ್ತಾರೆ ಅವರು.
ಇದೇ ವೇಳೆ, ವಾರಕ್ಕೆ ನಾಲ್ಕು ದಿನಗಳ ಕೆಲಸ ಮಾಡುವ ಸಿಸ್ಟಮ್ ಅನ್ನು ಅನ್ವಯಿಸಿಕೊಳ್ಳುವಂತೆ ಉದ್ಯೋಗಿಗಳಿಗೆ ಅಥವಾ ಉದ್ಯೋಗದಾತರಿಗೆ ನಾವು ಒತ್ತಾಯ ಮಾಡುವುದಿಲ್ಲ. ಇದು ಫ್ಲೆಕ್ಸಿಬಿಲಿಟಿಯಾಗಿದೆ. ಬೇಕಿದ್ದರೆ ಮಾತ್ರ ಈ ಆಯ್ಕೆಗಳನ್ನು ಬಳಸಿಕೊಳ್ಳಬಹುದು ಎಂದು ಅವರು ತಿಳಿಸಿದರು. ವಲಸೆ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರ ನೋಂದಣಿ ಮತ್ತು ಇತರ ಸೌಲಭ್ಯಗಳಿಗಾಗಿ 2021ರ ಜೂನ್ ತಿಂಗಳೊಳಗೇ ಜಾಲತಾಣವನ್ನು ಆರಂಭಿಸಲಾಗುವುದು ಎಂದು ಸರ್ಕಾರ ಹೇಳಿಕೊಂಡಿದೆ.
ಈ ಅಕ್ಕ-ತಂಗಿ ಎಲ್ಲರಂತಲ್ಲ, ಗಣಿತ ಎಂದರೆ ಇವರಿಗೆ ಲೆಕ್ಕವೇ ಅಲ್ಲ
ನಿಯಮಗಳ ರಚನೆಯ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಮುಂದಿನ ವಾರದೊಳಗೆ ಅದು ಪೂರ್ಣಗೊಳ್ಳಬಹುದು. ನಿಯಮಗಳನ್ನು ಮಾಡುವಾಗ ಸಂಬಂಧಿಸಿದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ. ವೇತನ ಸಂಹಿತೆ, ಕೈಗಾರಿಕಾ ಸಂಬಂಧಗಳು, ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸ ಸ್ಥಿತಿ(ಒಎಸ್ಎಚ್) ಸಾಮಾಜಿಕ ಭದ್ರತೆಯ ಸಂಹಿತೆಗಳನ್ನು ಕಾರ್ಮಿಕ ಸಚಿವಾಲಯ ಜಾರಿಗೆ ತರಲು ಮುಂದಾಗಿದೆ ಎಂದು ಅವರು ತಿಳಿಸಿದ್ದಾರೆ.
ಏಪ್ರಿಲ್ 1ರಿಂದಲೇ ಈ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಏಕ ಕಾಲಕ್ಕೆ ಜಾರಿಗೆ ತರಲು ಉದ್ದೇಶಿತ್ತು. ಕೇಂದ್ರ 44 ಕಾರ್ಮಿಕ ಕಾನೂನುಗಳನ್ನು ವೇತನ, ಔದ್ಯೋಗಿಕ ಸುರಕ್ಷತೆ, ಕೈಗಾರಿಕಾ ಸಂಬಂಧಗಳು ಮತ್ತು ಸಾಮಾಜಿಕ ಭದ್ರತೆ ಹಾಗೂ ಆರೋಗ್ಯ, ಕೆಲಸದ ಸ್ಥಿತಿಯ ಸಂಹಿತೆಯಲ್ಲಿ ಅಡಕವಾಗಲಿವೆ.
ಇನ್ನು ಅಸಂಘಟಿತ ವಲಯದ ಕಾರ್ಮಿಕರಿಗೆ ರೂಪಿಸಲಾಗುತ್ತಿರುವ ಪೋರ್ಟಲ್ನಿಂದ ಕಾರ್ಮಿಕರಿಗೆ ಸಾಕಷ್ಟು ಲಾಭಗಳು ದೊರೆಯಲಿವೆ. ಈ ಪೋರ್ಟಲ್ಗೆ ನೋಂದಣಿ ಮಾಡಿಕೊಳ್ಳುವ ಕಾರ್ಮಿಕರಿಗೆ ಒಂದು ವರ್ಷದವರೆಗಿನ ಉಚಿತ ಅಪಘಾತ ವಿಮೆ ದೊರೆಯಲಿದೆ. ಪ್ರಧಾನ ಮಂತ್ರಿ ಸುರಕ್ಷಾ ವಿಮೆ ಯೋಜನೆಯಡಿ ದೈಹಿಕ ಊನ ಆದವರಿಗೆ ನೆರವು ದೊರೆಯಲಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 10, 2021, 1:49 PM IST