ತುಮಕೂರಿನ ಸಿದ್ದಗಂಗಾ ಮಠದ ಗೋಕಟ್ಟೆಯಲ್ಲಿ ಬಿದ್ದು ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ನಾಲ್ವರು ನೀರಿನಲ್ಲಿ ಮುಳುಗಿ ದುರಂತ ಸಾವಿಗೀಡಾಗಿದ್ದಾರೆ.

ವರದಿ : ಮಹಂತೇಶ್ ಕುಮಾರ್, ಏಷ್ಯನೆಟ್ ಸುವರ್ಣ ನ್ಯೂಸ್

Add Asianetnews Kannada as a Preferred SourcegooglePreferred

ತುಮಕೂರು (ಆ.13): ರಾಜ್ಯದ ತ್ರಿವಿಧ ದಾಸೋಹ ಮಠಗಳಲ್ಲಿ ಒಂದಾಗಿರುವ ತುಮಕೂರಿನ ಸಿದ್ದಗಂಗಾ ಮಠದ ಗೋಕಟ್ಟೆಯ ಬಳಿ ಊಟ ಮಾಡಿ ಕೈತೊಳೆಯಲು ಹೋದ ವೇಳೆ ಇಬ್ಬರು ಮಠದ ವಿದ್ಯಾರ್ಥಿಗಳು ಹಾಗೂ ಇಬ್ಬರು ಮಕ್ಕಳ ಪೋಷಕರು ಗೋಕಟ್ಟೆಗೆ ಬಿದ್ದು ಸಾವನ್ನಪ್ಪಿದ ದುರ್ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ರಾಜ್ಯದಲ್ಲಿ ಶಿಕ್ಷಣ, ಊಟ ಮತ್ತು ವಸತಿ ಸೇವೆ ಒಳಗೊಂಡ ತ್ರಿವಿಧ ದಾಸೋಹಕ್ಕೆ ಪ್ರಸಿದ್ಧವಾದ ಸಿದ್ದಗಂಗಾ ಮಠದಲ್ಲಿ ರಾಜ್ಯದ ಮೂಲೆ ಮೂಲೆಯಿಂದ ವಿದ್ಯಾರ್ಥಿಗಳು ಸೇರಿ ಅಭ್ಯಾಸ ಮಾಡುತ್ತಾರೆ. ಇನ್ನು ಮಠದಲ್ಲಿರುವ ಮಕ್ಕಳನ್ನು ಭೇಟಿ ಮಾಡಲು ಪ್ರತಿ ಭಾನುವಾರ ರಜಾದಿನದಂದು ಪೋಷಕರು ಮಠಕ್ಕೆ ಬರುತ್ತಾರೆ. ಹೀಗೆ, ಇಂದು ಮಕ್ಕಳನ್ನು ನೋಡಲು ಬಂದ ಪೋಷಕರು ಊರಿನಿಂದ ಬುತ್ತಿ ಕಟ್ಟಿಕೊಂಡು ಬಂದು ಊಟಕ್ಕೆ ಕರೆದುಕೊಂಡು ಹೋಗಿದ್ದಾರೆ. ಸಿದ್ದಗಂಗಾ ಮಠದ ಹಿಂಭಾಗದಲ್ಲಿರುವ ಗೋಕಟ್ಟೆಯ ಬಳಿ ಊಟವನ್ನು ಮಾಡಿದ ಒಬ್ಬ ವಿದ್ಯಾರ್ಥಿ ಕೈ ತೊಳೆಯಲು ನೀರಿನ ಕಟ್ಟೆಯ ಬಳಿ ಹೋಗಿದ್ದಾನೆ.

ಸಾಯಲೆಂದು ಬಾವಿಗೆ ಬಿದ್ದ ಮಹಿಳೆ ಕಾಪಾಡಿದ ಕಾಲೇಜು ವಿದ್ಯಾರ್ಥಿಗಳು: ರಕ್ಷಣಾ ಕಾರ್ಯದ ಝಲಕ್‌ ನೋಡಿ...

ಇನ್ನು ಕೈತೊಳೆಯಲು ಹೋದ ವಿದ್ಯಾರ್ಥಿ ಕಾಲುಜಾರಿ ನೀರಿಗೆ ಬಿದ್ದಿದ್ದಾನೆ. ನೀರಿಗೆ ಬಿದ್ದ ವಿದ್ಯಾರ್ಥಿ ಕಾಪಾಡಲು ಆತನ ತಾಯಿ ಬಿದ್ದಿದ್ದಾಳೆ. ಆಗ ಇಬ್ಬರೂ ಮುಳುಗುವುದನ್ನು ನೋಡಿ ಇನ್ನಿಬ್ಬರು ವಿದ್ಯಾರ್ಥಿಗಳು ನೀರಿಗೆ ಧುಮುಕಿದ್ದಾರೆ. ಆದರೆ, ಅವರು ಕೂಡ ಮುಳುಗುವುದನ್ನು ನೋಡಿ, ಇನ್ನೊಬ್ಬ ವಿದ್ಯಾರ್ಥಿಯ ಪೋಷಕ ಮಹದೇವಪ್ಪ ಕೂಡ ನೀರಿಗೆ ಧುಮುಕಿದ್ದಾರೆ. ಒಟ್ಟು 3 ವಿದ್ಯಾರ್ಥಿಗಳು ಇಬ್ಬರು ಪೋಷಕರು ಸೇರಿ 5 ಜನರು ನೀರಿಗೆ ಬಿದ್ದಿದ್ದಾರೆ. ಇಲ್ಲಿ ಮೊದಲು ಕೈತೊಳೆಯಲು ಹೋಗಿ ನೀರಿಗೆ ಬಿದ್ದ ಎನ್ನಲಾದ ವಿದ್ಯಾರ್ಥಿಯನ್ನು ರಕ್ಷಣೆ ಮಾಡಲಾಗಿದೆ. ಆದರೆ, ರಕ್ಷಣೆ ಮಾಡಲು ಹೋದ ಇಬ್ಬರು ವಿದ್ಯಾರ್ಥಿಗಳು ಹಾಗೂ ಇಬ್ಬರು ಪೋಷಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮೃತರನ್ನು ಹೆಚ್ .ಆರ್ ಶಂಕರ್ (11), 6ನೇ ತರಗತಿ, ಹರ್ಷಿತ್ (11) 6ನೇ ತರಗತಿ ಹಾಗೂ ವಿದ್ಯಾರ್ಥಿಗಳ ಪೋಷಕರಾದ ಲಕ್ಷ್ಮೀ (33) ಮತ್ತು ಮಹದೇವಪ್ಪ (40) ನೀರಿನ ಕಟ್ಟೆಯಲ್ಲಿ ಮೃತಪಟ್ಟಿದ್ದಾರೆ. ಇನ್ನು ಇದರಲ್ಲಿ ಊಟಕ್ಕೂ ಮೊದಲು ರಂಜಿತ್‌ ಎನ್ನುವ ವಿದ್ಯಾರ್ಥಿಯ ಪೋಷಕಿಯಾದ ಲಕ್ಷ್ಮೀ ಗೋಕಟ್ಟೆ ಬಳಿ ಪೋಟೋ ತೆಗೆದುಕೊಂಡಿದ್ದು, ವಾಟ್ಸಾಪ್‌ ಸ್ಟೇಟಸ್‌ ಕೂಡ ಹಾಕಿದ್ದರು. ಇಲ್ಲಿ ಮೊದಲು ಕೈತೊಳೆಯಲು ಹೋಗಿ ನೀರಿಗೆ ಬಿದ್ದ ವಿದ್ಯಾರ್ಥಿ ಕೂಡ ರಂಜಿತ್‌ ಆಗಿದ್ದು, ಈತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ, ಈತನ ರಕ್ಷಣೆಗೆ ಹೋದವರು ಮಾತ್ರ ಮಸಣ ಸೇರಿದ್ದಾರೆ.

ಇನ್ನು ಘಟನಾ ಸ್ಥಳಕ್ಕೆ ಬಂದ ತುಮಕೂರು ಠಾಣೆ ಪೊಲೀಸರು ಪರಿಶೀಲನೆ ಮಾಡಿದ್ದಾರೆ, ಅಗ್ನಿಶಾಮಕ ದಳಸದ ಸಿಬ್ಬಂದಿ ನೆರವಿನೊಂದಿಗೆ ನೀರಿಗೆ ಬಿದ್ದ ಲಕ್ಷ್ಮೀ ಹಾಗೂ ಹರ್ಷಿತ್ ಮೃತದೇಹವನ್ನ ಹೊರ ತೆಗೆಯಲಾಗಿದೆ. ಉಳಿದಂತೆ ಎರಡು ಮೃತದೇಹಗಳಿಗಾಗಿ ಹುಡುಕಾಟ ಮಾಡಲಾಗುತ್ತಿದೆ. ಕ್ಯಾತಸಂದ್ರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಮೃತದೇಹಕ್ಕೆ ಶೋಧ ಕಾರ್ಯ ನಡೆಸಿದ್ದಾರೆ. ಇನ್ನು ಮೃತ ಮಹಿಳೆ ಬೆಂಗಳೂರು ಮೂಲದವರಾಗಿದ್ದಾರೆ. ಮೃತ ಪೋಷಕ ಯಾದಗಿರಿ ಮೂಲದವರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬುದ್ಧಿವಂತ ನಟ ಉಪೇಂದ್ರ ಹೊಲೆಗೇರಿ ಹೇಳಿಕೆ: ಎಫ್‌ಐಆರ್‌ ದಾಖಲಿಸಿದ ಸಮಾಜ ಕಲ್ಯಾಣ ಇಲಾಖೆ

35 ಅಡಿ ಆಳದ ಗೋಕಟ್ಟೆ: ಇನ್ನು ಗೋಕಟ್ಟೆಯ ಬಳಿ ಸೆಲ್ಫಿ ತೆಗೆದುಕೊಂಡಿದ್ದ ವಿದ್ಯಾರ್ಥಿ ರಂಜಿತ್‌ ತಾಯಿ ಲಕ್ಷ್ಮೀ ಅದನ್ನು ವಾಟ್ಸಾಪ್‌ ಸ್ಟೇಟಸ್‌ ಹಾಕಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಕ್ಕಳು ಕೂಡ ಸೆಲ್ಫಿ ತೆಗೆಯಲು ಹೋಗಿ ಬಿದ್ದಿದದಾರೆಯೇ ಎಂಬ ಅನುಮಾನ ಬಂದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಗೋಕಟ್ಟೆ ಸುಮಾರು 35 ಅಡಿ ಆಳ ಇದೆ‌. ಇನ್ನಿಬ್ಬರ ಮೃತ ದೇಹಗಳನ್ನು ಬೋರವೇಲ್ ಕ್ಯಾಮರ ತರಿಸಿ ಹುಡುಕಾಟ ನಡೆಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಯ ಬಗ್ಗೆ ವಿದ್ಯಾರ್ಥಿಗಳ ಪೋಷಕರ ಮನೆಗೆ ಮಾಹಿತಿ ರವಾನಿಸಲಾಗಿದೆ. ಜೊತೆಗೆ, ಗೋ ಕಟ್ಟೆಗೆ ಭದ್ರತೆ ಒದಗಿಸುವಂತೆ ಸ್ವಾಮೀಜಿಗಳಿಗೆ ಸೂಚಿಸಲಾಗಿದೆ. ಆದರೆ, ಇದಕ್ಕೆ ಪರಿಹಾರ ಬರುವುದಿಲ್ಲ ಎಂದು ಹೇಳಲಾಗುತ್ತಿದ್ದು, ಸಿಎಂ ಅವರ ವಿಶೇಷ ನಿಧಿಗೆ ಪರಿಹಾರ ಕೊಡಿಸುವಂತೆ ಕ್ರಮ ತಗೋಳ್ತಿವಿ ಎಂದು ಜಿಲ್ಲಾಧಿಕಾರಿ ಶ್ರೀನಿವಾಸ್ ಭರವಸೆ ನೀಡಿದ್ದಾರೆ.