* ಸಾಂಕ್ರಾಮಿಕ ರೋಗಗಳು ಹರಡುವ ಭೀತಿ, * ಲಸಿಕೆ ಪಡೆಯಲು ಜನರು ಹಿಂದೇಟು* ಸ್ವಚ್ಛತೆಗೆ ಮುಂದಾಗದ ಅಧಿಕಾರಿಗಳು 

ಶಹಾಪುರ(ಜು.12): ನಗರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಹನುಮಾನ್‌ ದೇವಾಲಯದ ಮುಂದೆ ಶೌಚಾಲಯದ ಸೆಪ್ಟಿಕ್‌ ಟ್ಯಾಂಕಿನ ನೀರು ನಿಂತು ದುರ್ನಾತ ಬೀರುತ್ತಿದೆ. ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಶುರುವಾಗಿದೆ. ಈ ಕುರಿತು ಮುಖ್ಯ ವೈದ್ಯಾ​ಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಆಸ್ಪತ್ರೆ ಸಿಬ್ಬಂದಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಕಾಣದಾದ ಆಸ್ಪತ್ರೆ ಮುಖ್ಯಸ್ಥರು:

ಆಸ್ಪತ್ರೆ ಆವರಣದೊಳಗೆ ಪುಟ್ಟದೊಂದು ಹನುಮಾನ್‌ ದೇವಾಲಯ ನಿರ್ಮಿಸಲಾಗಿತ್ತು. ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಆಸ್ಪತ್ರೆ ಸಿಬ್ಬಂದಿಗಳು ಈ ದೇವಾಲಯವನ್ನು ಪ್ರತಿನಿತ್ಯ ಸ್ವಚ್ಛಗೊಳಿಸಿ ಭಕ್ತಿಯಿಂದ ಪೂಜಿಸಿ ನಮಸ್ಕರಿಸುತ್ತಿದ್ದರು. ಆದರೆ, ಇತ್ತೀಚೆಗೆ ಶೌಚಾಲಯದ ಸೆಪ್ಟಿಕ್‌ ಟ್ಯಾಂಕಿನಿಂದ ನೀರು ಹರಿದು ಈ ದೇವಾಲಯದ ಮುಂದೆ ನಿಂತು ದೇವಸ್ಥಾನದ ಒಳಗೆ ಹೋಗಲು ದಾರಿ ಇಲ್ಲದಂತಾಗಿದೆ. ಹೀಗಾಗಿ ಆಸ್ಪತ್ರೆಯ ಆವರಣ ದುರ್ನಾತದಿಂದ ಕೂಡಿದೆ. ಇದರಿಂದ ರೋಗಗಳು ಹರಡುವ ಭೀತಿ ಆಡಳಿತ ವೈದ್ಯಾ​ಧಿಕಾರಿಗಳಿಗೆ ತಿಳಿದಿದ್ದರೂ ಸಹ ದೇವಾಲಯದ ಸ್ವಚ್ಛತೆಗೆ ಮುಂದಾಗಿಲ್ಲ. ಇದಕ್ಕೆ ಯಾವುದೇ ರೀತಿ ಹಣ ಬರದ ಕಾರಣ ನಿಷ್ಕಾಳಜಿ ತೋರುತ್ತಿದ್ದಾರೆ ಎಂದು ಆಸ್ಪತ್ರೆಗೆ ಬರುವ ಜನರ ಆರೋಪವಾಗಿದೆ.

ಬೆಳೆಸಾಲಕ್ಕೆ ರೈತರ ಸೆಲ್ಫಿ, ವಂಶಾವಳಿ ಕಡ್ಡಾಯ..!

ಲಸಿಕೆ ಪಡೆಯಲು ಹಿಂದೇಟು:

ಹನುಮಾನ್‌ ದೇವಾಲಯದ ಮುಂಭಾಗದಲ್ಲಿ ಕೋವಿಡ್‌ ಲಸಿಕಾ ಕೇಂದ್ರವಿದ್ದು, ಲಸಿಕೆ ಪಡೆಯಲು ಬರುವ ಜನರಿಗೆ ಇದರ ದುರ್ನಾತ ತಡೆದುಕೊಳ್ಳಲು ಆಗುತ್ತಿಲ್ಲ. ಇದರಿಂದ ಕೋವಿಡ್‌ ಲಸಿಕೆ ಪಡೆದುಕೊಳ್ಳಲು ಜನರು ಹಿಂದೇಟ ಹಾಕುತ್ತಿದ್ದಾರೆ. ಇಂತ ಪರಿಸ್ಥಿತಿಯಲ್ಲಿ ಲಸಿಕೆ ಕೇಂದ್ರವನ್ನು ಸ್ಥಳಾಂತರಿಸಿ, ಇಲ್ಲವೇ ದೇವಾಲಯವನ್ನು ಸ್ವಚ್ಛಗೊಳಿಸಿ ಎಂದು ಲಸಿಕೆ ಪಡೆಯಲು ಆಸ್ಪತ್ರೆಗೆ ಬರುವ ಜನರ ಒತ್ತಾಯವಾಗಿದೆ.

ಆಸ್ಪತ್ರೆ ಮತ್ತು ದೇವಾಲಯ ಎರಡು ಅತ್ಯಂತ ಪವಿತ್ರ ಸ್ಥಳಗಳು. ಈ ಎರಡು ಸ್ಥಳಗಳು ಸ್ವಚ್ಛವಾಗಿರಬೇಕು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ಬದಲು ಸಾಂಕ್ರಮಿಕ ರೋಗ ತಗಲುವ ಪರಿಸ್ಥಿತಿ ಇದೆ. ಸಂಬಂಧಪಟ್ಟ ಅಧಿ​ಕಾರಿಗಳು ಇತ್ತ ಗಮನ ಹರಿಸಬೇಕು ಎಂದು ಕರ್ನಾಟಕ ಮಾದಿಗರ ಸಂಘದ ಶಹಾಪುರ ತಾಲೂಕಾಧ್ಯಕ್ಷ ಶಿವಕುಮಾರ್‌ ದೊಡ್ಮನಿ ತಿಳಿಸಿದ್ದಾರೆ.