Asianet Suvarna News Asianet Suvarna News

ಗೌಡರಿಗೆ ಎಲ್ಲಾ ಪಕ್ಷಗಳ ಅನುಭವದಡಿ ಟಿಕೆಟ್ : ಹಾಲಪ್ಪ

ಎಸ್. ಪಿ. ಮುದ್ದಹನುಮೇಗೌಡರಿಗೆ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಕೊಟ್ಟಿರುವ ಹಿಂದೆ ಅವರಿಗಿರುವ ಎಲ್ಲಾ ಪಕ್ಷದ ಅನುಭವವೇ ಮಾನದಂಡವಾಗಿರಬೇಕು, ಇದು ಕಾಂಗ್ರೆಸ್ ಟಿಕೆಟ್ ಅಕ್ಷಾಂಕ್ಷಿಯಾಗಿದ್ದ ಮುರಳೀಧರ ಹಾಲಪ್ಪ ಅವರ ಪ್ರತಿಕ್ರಿಯೆ.

Ticket for Gowda under experience of all parties : Halappa snr
Author
First Published Mar 11, 2024, 11:51 AM IST

ತುಮಕೂರು :ಎಸ್. ಪಿ. ಮುದ್ದಹನುಮೇಗೌಡರಿಗೆ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಕೊಟ್ಟಿರುವ ಹಿಂದೆ ಅವರಿಗಿರುವ ಎಲ್ಲಾ ಪಕ್ಷದ ಅನುಭವವೇ ಮಾನದಂಡವಾಗಿರಬೇಕು, ಇದು ಕಾಂಗ್ರೆಸ್ ಟಿಕೆಟ್ ಅಕ್ಷಾಂಕ್ಷಿಯಾಗಿದ್ದ ಮುರಳೀಧರ ಹಾಲಪ್ಪ ಅವರ ಪ್ರತಿಕ್ರಿಯೆ.

ತಮಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿರುವ ಕುರಿತಂತೆ ಮಾಧ್ಯಮಗಳಿಗೆ ಮೇಲಿನಂತೆ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ ಮುರಳೀಧರ ಹಾಲಪ್ಪ ಅವರು, ನಾನು ವಯಸ್ಸು, ಅನುಭವದಲ್ಲಿ ಅವರಿಗಿಂತ ಕಿರಿಯ. ಬೇರೆ ಬೇರೆ ಪಕ್ಷದಲ್ಲಿ ಗೌಡರು ಅನುಭವ ಪಡೆದಿರುವುದರಿಂದ ಅಲ್ಲಿನ ವ್ಯವಸ್ಥೆಗಳ ಅರಿವಿದ್ದು, ಚುನಾವಣೆಯಲ್ಲಿ ಅನುಕೂಲವಾಗಬಹುದೆಂದು ಅವರಿಗೆ ಟಿಕೆಟ್ ಕೊಟ್ಟಿರಬಹುದು ಎಂದು ವಿಶ್ಲೇಷಿಸಿದರು.

ನನಗೆ ಪಕ್ಷ ಹಿಂದೆ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಕೆಪಿಸಿಸಿ ವಕ್ತಾರ, ಪ್ರಧಾನ ಕಾರ್ಯದರ್ಶಿ, ಬೂತ್ ಮಟ್ಟದ ಸಮಿತಿ ಉಸ್ತುವಾರಿ ಹೀಗೆ ಹಲವು ಜವಾಬ್ದಾರಿಗಳನ್ನು ನೀಡಿತ್ತು. ಈ ಜವಾಬ್ದಾರಿಯನ್ನು ನಾಯಕರ ನಿರೀಕ್ಷೆಯಂತೆಯೇ ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ಲೋಕಸಭೆ ಚುನಾವಣೆಗೆ ಸಿದ್ಧರಾಗುವಂತೆ ಪಕ್ಷದ ನಾಯಕರು ಸೂಚಿಸಿದ್ದ ಮೇರೆಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ಕಾರ‍್ಯಕ್ರಮ, ಸಭೆಗಳನ್ನು ಮಾಡಿ ಕಾರ್ಯಕರ್ತರು, ಮತದಾರರನ್ನು ಸಂಘಟಿಸಿದ್ದೆ. ಈಗ ಟಿಕೆಟ್ ತಪ್ಪಿದೆ. ಆದರೆ ಮಾಡಿದ ಸಂಘಟನೆ ಪಕ್ಷದ ಗೆಲುವಿಗೆ ಪೂರಕವಾಗಲಿದೆ ಎಂದರು.

ಶುಕ್ರವಾರ ರಾತ್ರಿಯೇ ಸುರ‍್ಜೇವಾಲಾ ಕರೆ ಮಾಡಿ ಟಿಕೆಟ್ ಕೈ ತಪ್ಪಿರುವ ಕುರಿತು ಚರ್ಚಿಸಿದ್ದು, ದೆಹಲಿಗೆ ಬರುವಂತೆ ಹೇಳಿದ್ದಾರೆ. ಅವರೆದುರು ಚರ್ಚಿಸುತ್ತೇನೆ. ಮುಂದಿನ ಹಾದಿಯ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ. ನಮ್ಮ ನಾಯಕರಾದ ಡಾ.ಜಿ. ಪರಮೇಶ್ವರ ಅವರು ಹೇಳಿದಂತೆ ಇಲ್ಲಿಯವರೆಗೂ ಬಂದಿದ್ದೇನೆ. ಜಿಲ್ಲೆಯ ಇತರ ನಾಯಕರಾದ ಕೆ.ಎನ್. ರಾಜಣ್ಣ, ಟಿ.ಬಿ. ಜಯಚಂದ್ರ ಮೊದಲಾದವರ ಮಾರ್ಗದರ್ಶನದೊಂದಿಗೆ ಮುಂದುವರಿಯುವುದಾಗಿ ಹೇಳಿದರು.

ಮುರಳೀಧರ ಹಾಲಪ್ಪ ಅವರಿಗೆ ಟಿಕೆಟ್ ಕೈ ತಪ್ಪಿರುವ ಕುರಿತು ಜಿಲ್ಲೆಯ ವಿವಿಧೆಡೆಯ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ತುಮಕೂರಿನ ಜಯನಗರದಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿ ಬೇಸರ ವ್ಯಕ್ತಪಡಿಸುತ್ತಿದ್ದರು.

Follow Us:
Download App:
  • android
  • ios