ಸೊರಬದ ದುರಂತ, ಕೆರೆಯಲ್ಲಿ ಮೀನು ಹಿಡಿಯಲು ಹೋದ ಮೂವರು ನೀರುಪಾಲು..!
ಅವರು ಬಾಳಿ ಬದುಕಬೇಕಾದ ಹುಡುಗರು. ಮೀನು ಹಿಡಿಯಬೇಕೆಂದು ಕೆರೆಗೆ ಇಳಿದವರು ಮೇಲೆ ಬಂದಿದ್ದು ಮಾತ್ರ ಹೆಣವಾಗಿ. ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ದಾರುಣ ಕತೆ ಅವರ ಕುಟುಂಬದವರಿಗೆ ಅರಗಿಸಿಕೊಳ್ಳುವುದು ಕಷ್ಟ ಕಷ್ಟ..
ಶಿವಮೊಗ್ಗ[ಜು. 21] ಸೊರಬ ತಾಲೂಕಿನ ಚಂದ್ರಗುತ್ತಿ ಸಮೀಪದ ಜೋಳದಗುಡ್ಡೆ ಗ್ರಾಮದ ಹೊಸಮಠ ಕೆರೆಯಲ್ಲಿ ಮುಳುಗಿ ಮೂವರು ಯುವಕರು ಭಾನುವಾರ ದಾರುಣ ಸಾವು ಕಂಡಿದ್ದಾರೆ.
ಸೊರಬ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿಗಳಾದ ಜೋಳದಗುಡ್ಡೆ ಗ್ರಾಮದ ಕಾರ್ತಿಕ್(16), ಶರತ್(17) ಹಾಗೂ ಗಾರೆ ಕೆಲಸ ಮಾಡುವ ಪ್ರದೀಪ್ (19) ಸಾವನ್ನಪ್ಪಿದವರು.
ಈ ಮೂವರು ಬೆಳಗ್ಗೆ ಸ್ನೇಹಿತರೊಂದಿಗೆ ಜೋಳದಗುಡ್ಡೆಯ ಹೊಸಮಠ ಕೆರೆಗೆ ಮೀನು ಹಿಡಿಯಲು ತೆರಳಿದ್ದರು. ನು ಹಿಡಿಯುವ ವೇಳೆ ಈಜು ಬರದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇವರ ಜತೆಯಲ್ಲಿ ಹೋಗಿದ್ದ ಅಭಿಶೇಖ್ ನೀರಿಗೆ ಇಳಿಯದೆ ದಡದಲ್ಲಿಯೇ ನಿಂತಿದ್ದು, ಕೆರೆಗಿಳಿದ ಮೂವರು ಮುಳುಗುತ್ತಿರುವುದನ್ನು ಕಂಡು ಚೀರಿಗೊಂಡಾಗ ಕೆರೆಯ ಸಮೀಪವಿರುವ ಗ್ರಾಮಸ್ಥರು ದೌಡಾಯಿಸಿ ಬಂದು ನೀರಿಗೆ ಇಳಿದು ರಕ್ಷಿಸುವಷ್ಟುರಲ್ಲಿ ಯುವಕರಿಂದ ಪ್ರಾಣಪಕ್ಷಿ ಹಾರಿಹೋಗಿತ್ತು.