Asianet Suvarna News Asianet Suvarna News

Udipi Krishna Mutt: ಕೃಷ್ಣಮಠ ಸರ್ಕಾರೀಕರಣಕ್ಕೆ ಸಿದ್ದರಾಮಯ್ಯ ಸರ್ಕಾರ ಸಿದ್ಧವಾಗಿತ್ತು

  • ಕೃಷ್ಣಮಠ ಸರ್ಕಾರೀಕರಣಕ್ಕೆ ಸಿದ್ದರಾಮಯ್ಯ ಸರ್ಕಾರ ಸಿದ್ಧವಾಗಿತ್ತು 
  • ಮತ್ತೊಮ್ಮೆ ಕಾಂಗ್ರೆಸ್‌ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿದ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌
     
The Siddaramaiah government was planning for Krishna Matha Take under government snr
Author
Bengaluru, First Published Dec 25, 2021, 7:28 AM IST

 ಉಡುಪಿ (ಡಿ.25):  ಇತ್ತೀಚೆಗೆ ಕೃಷ್ಣಮಠದ (Krishna Mutt) ರಥಬೀದಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮೋದಿಯನ್ನು (PM Modi) ಹೊಗಳಿ, ಕಾಂಗ್ರೆಸ್‌ (Conngress) ಪಕ್ಷದ ಮುಜುಗರಕ್ಕೆ ಕಾರಣವಾಗಿದ್ದ, ಕಾಂಗ್ರೆಸ್‌ನ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಇದೀಗ ಸಿದ್ದರಾಮಯ್ಯ (Siddaramaiah) ಸರ್ಕಾರದ ವಿರುದ್ಧ ಇನ್ನೊಂದು ಹೇಳಿಕೆಯನ್ನು ನೀಡಿ ಕಾಂಗ್ರೆಸ್‌ ಪಕ್ಷವನ್ನು ಪೇಚಿಗೆ ಸಿಲುಕಿಸಿದ್ದಾರೆ. ಕಾಕತಾಳೀಯ ಎಂಬಂತೆ ಅವರು ಈ ಹೇಳಿಕೆಯನ್ನೂ ನೀಡಿದ್ದು ಕೃಷ್ಣಮಠದ ರಾಜಾಂಗಣದಲ್ಲಿ.

‘ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರದಲ್ಲಿದ್ದಾಗ ಉಡುಪಿ ಕೃಷ್ಣಮಠವನ್ನು (Krishna Mutt) ಮುಜರಾಯಿ ಇಲಾಖೆಗೆ ಸೇರಿಸಲು ಸಿದ್ಧತೆಗಳು ನಡೆದಿದ್ದವು. ಇದು ಗೊತ್ತಾದಾಗ ನಾನು ಖುದ್ದು ಸಿದ್ದರಾಮಯ್ಯ ಬಳಿಗೆ ಹೋಗಿ ಮಠವನ್ನು ವಶಪಡಿಸಿಕೊಂಡರೆ ಮೊದಲಿಗೆ ನಾನೇ ರಾಜೀನಾಮೆ (Resignation) ನೀಡುತ್ತೇನೆ’ ಎಂದು ಹೇಳಿದ್ದೆ ಎಂದು ಪ್ರಮೋದ್‌ ಅವರು ಹೇಳಿದ್ದಾರೆ. ಅದಮಾರು ಪರ್ಯಾಯ ಸಮಾಪನ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದ್ದರು.

ಮಧ್ವಾಚಾರ್ಯರು ಪ್ರತಿಷ್ಠಾಪಿಸಿದ ಮಠಕ್ಕೆ ಎಂಟುನೂರು ವರ್ಷಗಳ ಇತಿಹಾಸ ಇದೆ. ದೇಶವಿದೇಶಗಳಲ್ಲಿ ಭಕ್ತರನ್ನ ಹೊಂದಿರುವ ಮಠ ಉಡುಪಿ ಜನರಿಗೊಂದು ಭಾಗ್ಯ. ಆದರೆ ನಮ್ಮದೇ ಸರ್ಕಾರ ಇದನ್ನು ವಶಪಡಿಸಲು ಮುಂದಾಗಿತ್ತು. ಆಗ ನಾನು ಮಠವನ್ನು ಮುಟ್ಟಿದರೆ ರಾಜೀನಾಮೆ ನೀಡುತ್ತೇನೆ ಎಂದು ಸಿದ್ದರಾಮಯ್ಯನವರಿಗೆ ಹೇಳಿದೆ. ಈ ವಿಷಯವನ್ನು ನಾನು ಹೊರಗೆ ಹೇಳಬಾರದು ಎಂದುಕೊಂಡಿದ್ದೆ. ಆದರೆ ಈಗ ಮಠದ ಕಾರ್ಯಕ್ರಮದಲ್ಲಿ ಹೇಳಬೇಕಾಯಿತು ಎಂದರು.

ಮೋದಿಯನ್ನು ಹೊಗಳಿದಾಗ ಪ್ರಮೋದ್‌ ಬಿಜೆಪಿ (BJP) ಸೇರುವ ತಯಾರಿಯಲ್ಲಿದ್ದಾರೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈಗ ಅವರ ಭಾಷಣ ಮತ್ತೊಮ್ಮೆ ವೈರಲ್‌ ಆಗುತ್ತಿದೆ.

ಮಠಗಳಿಂದ ನಂಬಿಕೆ ಉಳಿಕೆ :  ಧಾರ್ಮಿಕ ನಂಬಿಕೆಗಳು ಸಮಾಜದಲ್ಲಿ ಇಂದೂ ಕೂಡ ನೆಲೆಯೂರಿದೆ ಎಂದಾದರೆ ಅದರಲ್ಲಿ ಪ್ರಧಾನ ಪಾತ್ರ ಮಠ ಮಂದಿರಗಳದ್ದು ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು (Mangaluru) ಶಾಖೆಯ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದ್ದಾರೆ.

ಗುರುವಾರ, ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಅದಮಾರು ಮಠದ ಪರ್ಯಾಯ ಮಂಗಲೋತ್ಸವದ ‘ವಿಶ್ವಾರ್ಪಣಂ’ನ 19ನೇ ದಿನದ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಅಖಿಲ ಭಾರತ ಕುಟುಂಬ ಪ್ರಬೋಧನ್‌ ಸದಸ್ಯ ಸುಬ್ರಹ್ಮಣ್ಯ ಕಜಂಪಾಡಿ, ಸಂಸ್ಕಾರ ಸಂವರ್ಧನೆಯಲ್ಲಿ ಕುಟುಂಬದ ಪಾತ್ರ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪರ್ಯಾಯ ಪೀಠಾಧೀಶ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ವಿ.ಹಿಂ.ಪ. ನಾಯಕ ಎಂ.ಬಿ.ಪುರಾಣಿಕ್‌, ಬಳ್ಳಮಂಜ ಶ್ರೀ ಅನಂತೇಶ್ವರ ದೇವಳದ ಸೇವಕ ಪುರುಷೋತ್ತಮ ದೇವಾಡಿಗ, ಶ್ರೀ ಕೃಷ್ಣಮಠದ ಸೇವಕ ನಾರಾಯಣದಾಸ ಮತ್ತು ಗಮಕ ಮತ್ತು ಸುಗಮ ಸಂಗೀತ ಕಲಾವಿದ ಹಾರ್ಯಾಡಿ ಚಂದ್ರಶೇಖರ ಕೆದ್ಲಾಯ ಅವರನ್ನು ಸನ್ಮಾನಿಸಿ, ಅನುಗ್ರಹಿಸಿದರು.

ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಇದ್ದರು. ಮಠದ ವ್ಯವಸ್ಥಾಪಕ ಗೋವಿಂದರಾಜ್‌ ಸ್ವಾಗತಿಸಿದರು. ಆಸ್ಥಾನ ವಿದ್ವಾಂಸ ಕೃಷ್ಣರಾಜ ಭಟ್‌ ಕುತ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.

ಪ್ರತಿಯೊಬ್ಬರು ಒಳಗಣ್ಣು ತೆರೆಯಬೇಕು :  

ಎಲ್ಲವನ್ನು ಕಳಕೊಂಡು ಬೀದಿಪಾಲಾದರೂ ಭಗವಂತ (God) ನಮಗೆ ಪರ್ಯಾಯ ವ್ಯವಸ್ಥೆಯನ್ನು ಖಂಡಿತಾ ಒದಗಿಸಿರುತ್ತಾನೆ. ಆದರೆ ಅದನ್ನು ಕಂಡುಕೊಳ್ಳಬೇಕಾಗುತ್ತದೆ ಎಂದು ಪರ್ಯಾಯ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.

ಭಾನುವಾರ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಅದಮಾರು ಮಠದ ಪರ್ಯಾಯದ ಮಂಗಲೋತ್ಸವದ ‘ವಿಶ್ವಾರ್ಪಣಂ’ ಸಮಾರಂಭದಲ್ಲಿ ಮೂಡುಬಿದರೆಯ ವೈದ್ಯ ಡಾ.ಪದ್ಮನಾಭ ಉಡುಪ, ನೇತ್ರತಜ್ಞ ಡಾ.ಕೃಷ್ಣಪ್ರಸಾದ್‌, ವಿದ್ವಾಂಸ ಎಂ.ನಾರಾಯಣ ಮೂಡುಬಿದರೆ, ಮಂಡ್ಯದ ಸಮಾಜ ಸೇವಕ ಡಾ.ಎಸ್‌.ಎ.ಶಂಕರೇಗೌಡ ಅವರನ್ನು ಸನ್ಮಾನಿಸಿ, ಅನುಗ್ರಹ ಸಂದೇಶ ನೀಡಿದರು.

ಪರ್ಯಾಯ ಪೀಠಾಧೀಶ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಿ, ಭಗವದ್ಗೀತೆಯ ಮಾತು ಆರಂಭವಾಗುವುದು ನಮ್ಮಂತೆ ಕುರುಡನಾದ ಧೃತರಾಷ್ಟ್ರನ ಮಾತಿನಿಂದ, ಕೊನೆಗೊಳ್ಳುವುದು ಒಳಗಣ್ಣು ತೆರೆದಿರುವ ಸಂಜಯನ ಮಾತಿನಿಂದ, ಹಾಗೆ ನಾವು ಒಳಗಣ್ಣು ತೆರೆಯಬೇಕು ಎಂದವರು ಕರೆ ನೀಡಿದರು.

ಬೆಂಗಳೂರಿನ ವಕೀಲರಾದ ಸಿ.ಎ. ಹರಿಕುತ್ಸ ಅವರು ಕರ್ನಾಟಕ (Karnataka ) ರಾಜ್ಯದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳ ಪರಿಸ್ಥಿತಿಯ ಕುರಿತು ಮತ್ತು ಸರ್ವೋಚ್ಚ ನ್ಯಾಯಾಲಯದ ವಕೀಲ, ಲೇಖಕ ಸಾಯಿ ದೀಪಕ್‌ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಹಿಂದೂ ಧರ್ಮ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಟೀಲಿನ ಅನುವಂಶಿಕ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಮೈಸೂರಿನ ಡಾ.ಅನಿಲ್‌ ಸಾಂಗ್ಲಿ, ಶ್ರೀಪಾದ ಸಾಂಗ್ಲಿ ಉಪಸ್ಥಿತರಿದ್ದರು. ಮಠದ ವ್ಯವಸ್ಥಾಪಕ ಗೋವಿಂದರಾಜ್‌ ಸ್ವಾಗತಿಸಿ, ಆಸ್ಥಾನ ವಿದ್ವಾಂಸ ಕೃಷ್ಣರಾಜ ಭಟ್‌ ಕುತ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.

Follow Us:
Download App:
  • android
  • ios