Asianet Suvarna News Asianet Suvarna News

ಸಂಪೂರ್ಣ ಹದಗೆಟ್ಟಶಿರಸಿ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ!

 ನಗರದ ಹೊರವಲಯದ ಗೌಡಳ್ಳಿ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಶಿರಸಿ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯು ಸಂಪೂರ್ಣ ಹದಗೆಟ್ಟಿದೆ. ಭಾರೀ ಗ್ರಾತದ ಹೊಂಡಗಳು ಉಂಟಾದ ಪರಿಣಾಮ ವಾಹನ ಸವಾರರು ನರಕಯಾತನೆ ಅನುಭವಿಸುತ್ತಿದ್ದಾರೆ.

The Shirsi-Hubli National Highway is completely destroyed rav
Author
First Published Jul 9, 2023, 4:49 AM IST | Last Updated Jul 9, 2023, 4:49 AM IST

ಶಿರಸಿ (ಜು.9):  ನಗರದ ಹೊರವಲಯದ ಗೌಡಳ್ಳಿ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಶಿರಸಿ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯು ಸಂಪೂರ್ಣ ಹದಗೆಟ್ಟಿದೆ. ಭಾರೀ ಗ್ರಾತದ ಹೊಂಡಗಳು ಉಂಟಾದ ಪರಿಣಾಮ ವಾಹನ ಸವಾರರು ನರಕಯಾತನೆ ಅನುಭವಿಸುತ್ತಿದ್ದಾರೆ. ಸಾಗರಮಾಲಾ ಯೋಜನೆಯಲ್ಲಿ ಕುಮಟಾ-ತಡಸ್‌ ಹೆದ್ದಾರಿ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಅನುದಾನ ನೀಡಿದೆ. ಆದರೆ ಅಭಿವೃದ್ಧಿಗೆ ಇಲಾಖೆ ಮೌನವಹಿಸಿದ್ದು, ದುರಸ್ತಿ ಕಾರ್ಯವನ್ನೂ ನಡೆಸುತ್ತಿಲ್ಲ.

ಶಿರಸಿ ಹೊರವಲಯದ ಗೌಡಳ್ಳಿಯಲ್ಲಿ ಬೃಹತ್‌ ಪ್ರಮಾಣದಲ್ಲಿ ಹೊಂಡ-ಗುಂಡಿಯಿಂದ ಕೂಡಿದ್ದು, ಹೊಂಡಗಳಿಗೆ ತೇಪೆ ಹಾಕುವ ಕೆಲಸವೂ ನಡೆದಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಮುಖ ನಗರಗಳಾದ ಹುಬ್ಬಳಿ-ಹಾವೇರಿ ಸಂಪರ್ಕಿಸಲು ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ದ್ವಿಚಕ್ರ ವಾಹನ ಸವಾರರ ಬೆನ್ನುಮೂಳೆ ಮುರಿಯಲಿ, ವಾಹನ ಸವಾರರು ಗುಂಡಿಗಳಲ್ಲಿ ಬೀಳಲಿ, ಆದರೆ, ಅದಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಹೆದ್ದಾರಿಗಳ ನಿರ್ವಹಣೆ ಹೊತ್ತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವರ್ತಿಸುತ್ತಿದೆ ಎಂದು ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ.

ಆನ್‌ಲೈನ್‌ ಗೇಮ್ ಚಟಕ್ಕೆ 65 ಲಕ್ಷ ರೂ ಕಳೆದುಕೊಂಡು ಆತ್ಮಹತ್ಯೆಗೆ ಶರಣಾದ ಶಿರಸಿ ಯುವಕ!

ಮಳೆಗಾಲ ಪೂರ್ವದಲ್ಲಿ ಹೆದ್ದಾರಿಯಲ್ಲಿ ಸಣ್ಣ ಪ್ರಮಾಣದ ಹೊಂಡ ಬಿದ್ದಿತ್ತು. ಆ ಸಮಯದಲ್ಲೇ ದುರಸ್ತಿ ಮಾಡಿದ್ದರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹೊಂಡ ಬೀಳುತ್ತಿರಲಿಲ್ಲ. ಆಗ ಹೆದ್ದಾರಿ ಪ್ರಾಧಿಕಾರ ನಿರ್ಲಕ್ಷ್ಯ ವಹಿಸಿತ್ತು. ಹೊಂಡದಲ್ಲಿ ನೀರು ನಿಂತು ಅದರಲ್ಲಿ ವಾಹನಗಳು ಓಡಾಡುವುದರಿಂದ ದೊಡ್ಡ ಪ್ರಮಾಣದಲ್ಲಿ ಹೊಂಡ ಉಂಟಾಗಿದೆ. ಅಪಘಾತ ಉಂಟಾಗಿ ಸಾವು-ನೋವು ಸಂಭವಿಸುವುದನ್ನು ತಪ್ಪಿಸಲು ತುರ್ತು ನಿರ್ವಹಣೆ ಅಗತ್ಯವಾಗಿದೆ. ಇಲ್ಲವಾದಲ್ಲಿ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯ ಎಂದು ಸಾಮಾಜಿಕ ಕಾರ್ಯಕರ್ತ ರವಿತೇಜ ರೆಡ್ಡಿ ಎಚ್ಚರಿಕೆ ನೀಡಿದಾರೆ.

ಹೊಂಡ-ಗುಂಡಿಗಳಲ್ಲಿ ರಾಡಿ ಮಿಶ್ರಿತ ನೀರು ತುಂಬಿರುವುದರಿಂದ ದ್ವಿಚಕ್ರ ವಾಹನ ಸವಾರರಿಗೆ ಯಾವ ಬದಿಗೆ ತೆರಳಬೇಕು ಎಂಬುದು ಗೋಚರಿಸುವುದಿಲ್ಲ. ಆ ಸಮಯದಲ್ಲಿಯೇ ದೊಡ್ಡ ವಾಹನ ಬಂದರೆ ರಾಡಿ ನೀರು ಸವಾರರ ಮೈ ಮೇಲೆ ಎರಚುತ್ತದೆ. ಆದಷ್ಟುಶೀಘ್ರವಾಗಿ ಸಣ್ಣ ಜೆಲ್ಲಿಯಿಂದ ಹೊಂಡಗಳನ್ನು ಮುಚ್ಚಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಹೆದ್ದಾರಿ ಪ್ರಾಧಿಕಾರ ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ವಾಡಿಕೆ ಮಳೆಯಲ್ಲಿ ಶೇ.70 ಕೊರತೆ: 'ಬರಗಾಲ ಕ್ಷೇತ್ರ' ಘೊಷಣೆಗೆ ಶಿವರಾಮ್ ಹೆಬ್ಬಾರ್ ಆಗ್ರಹ

ಪ್ರತಿನಿತ್ಯ ನೂರಾರು ವಾಹನಗಳು ಹುಬ್ಬಳ್ಳಿ-ಶಿರಸಿ ರಾಷ್ಟ್ರೀಯ ಹೆದ್ದಾರಿಗಳು ಓಡಾಡುತ್ತವೆ. ಹೊಂಡ-ಗುಂಡಿಗಳನ್ನು ತಪ್ಪಿಸುವುದೇ ದೊಡ್ಡ ಸಾಹಸ. ಹೊಂಡ ತಪ್ಪಿಸುವ ವೇಳೆ ಅಪಘಾತ ಉಂಟಾಗುವ ಸಂಭವ ಅಧಿಕವಾಗಿದೆ.

ರವಿತೇಜ ರೆಡ್ಡಿ, ಸಾಮಾಜಿಕ ಕಾರ್ಯಕರ್ತ

Latest Videos
Follow Us:
Download App:
  • android
  • ios