ಹಿಂದೊಮ್ಮೆ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಆಮೆಗತಿಯಲ್ಲಿ ಸಾಗುತ್ತಿದ್ದ ಕಾಮಗಾರಿ, ಇದೀಗ ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಂಡಿದೆ.

ಆರ್‌. ತಾರಾನಾಥ್‌

ಚಿಕ್ಕಮಗಳೂರು *ಜೂ.26) : ಹಿಂದೊಮ್ಮೆ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಆಮೆಗತಿಯಲ್ಲಿ ಸಾಗುತ್ತಿದ್ದ ಕಾಮಗಾರಿ, ಇದೀಗ ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಂಡಿದೆ.

- ಕಾಮಗಾರಿಯ ಮೇಲೆ ರಾಜಕೀಯ ಕರಿ ನೆರಳು ಆವರಿಸಿಕೊಂಡಿದೆ. ಇನ್ನೊಂದೆಡೆ ಈ ಕೆರೆಯ ಮೂಲ ಸ್ವರೂಪಕ್ಕೆ ದಕ್ಕೆಯಾಗಿದೆ ಎಂದು ವಕೀಲರು ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ.

ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ನಡೆಯುವ ಕಾಮಗಾರಿಗಳು ಒಂದಲ್ಲಾ ಒಂದು ಕಾರಣಕ್ಕಾಗಿ ಅಡೆ ತಡೆಗಳು ಅನುಭವಿಸುತ್ತಿವೆ. ಇವುಗಳ ಸಾಲಿನಲ್ಲಿ ಒಳಚರಂಡಿ ಕಾಮಗಾರಿ, ಕುಡಿಯುವ ನೀರಿನ ಅಮೃತ್‌ ಯೋಜನೆ, ಶತಮಾನೋತ್ಸವ ಕ್ರೀಡಾಂಗಣದಲ್ಲಿ ಸಿಂಥಟಿಕ್ಸ್‌ ಟ್ರ್ಯಾಕ್‌ ನಿರ್ಮಾಣ ಕಾಮಗಾರಿಗಳು ಮಾತ್ರ ಇದ್ದವು. ಇದೀಗ ಇವುಗಳ ಸಾಲಿನಲ್ಲಿ ಕಳೆದ ಒಂದು ತಿಂಗಳಿಂದ ಮೆಡಿಕಲ್‌ ಕಾಲೇಜು ಕಟ್ಟಡ, ದಂಟರಮಕ್ಕಿ ಕೆರೆ ಅಭಿವೃದ್ಧಿ ಕಾಮಗಾರಿಗಳು ಸೇರಿಕೊಂಡಿವೆ.

ಶಿವಮೊಗ್ಗ: ನೂರಾರು ಶಾಲಾ ಕೊಠಡಿಗಳು ಶಿಥಿಲ; ಮಳೆಗಾಲ ಶುರುವಾದರೂ ಕಣ್ಮುಚ್ಚಿ ಕುಳಿತ ಶಿಕ್ಷಣ ಇಲಾಖೆ!

36 ಕೋಟಿ ರು. ಯೋಜನೆ:

ದಂಟರಮಕ್ಕಿ ಕೆರೆಯಲ್ಲಿನ ಹೂಳನ್ನ ತೆಗೆದು, ಪ್ರವಾಸಿ ಕೇಂದ್ರವನ್ನಾಗಿ ಮಾಡಲು 36 ಕೋಟಿ ರುಪಾಯಿಗಳ ಕಾಮಗಾರಿಗೆ ಆಡಳಿತಾತ್ಮಕ ಮಂಜೂರಾತಿ ಹಿಂದಿನ ಸರ್ಕಾರದಲ್ಲಿ ನೀಡಲಾಗಿತ್ತು. ಕೆರೆಯ ಮಣ್ಣನ್ನು ತೆಗೆಯುವ ಕಾರ್ಯ ಪೂರ್ಣಗೊಂಡಿದೆ. ಆದರೆ, ಇತರೆ ಕಾಮಗಾರಿ ಶೇ. 25 ರಷ್ಟುಮಾತ್ರ ಪೂರ್ಣಗೊಂಡಿದೆ. ಇನ್ನುಳಿದ ಕಾಮಗಾರಿ ಬಾಕಿ ಇದೆ. ಇದನ್ನು ಮುಂದುವರೆಸಲು ಸದ್ಯಕ್ಕೆ ದಾರಿ ಸುಗಮವಾಗಿಲ್ಲ. ರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹಿಂದಿನ ಸರ್ಕಾರದಲ್ಲಿ ನಡೆಸಲಾಗಿದ್ದ ಎಲ್ಲಾ ಕಾಮಗಾರಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ನೂತನ ಸರ್ಕಾರ ಸೂಚನೆ ನೀಡಿದೆ.

ಇನ್ನೊಂದೆಡೆ, ದಂಟರಮಕ್ಕಿ ಕೆರೆಯಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದರಿಂದ ನೀರಿನ ಸಂಗ್ರಹ ಪ್ರಮಾಣ ಇಳಿಮುಖವಾಗಲಿದೆ ಎಂದು ನಗರದ ಹಿರಿಯ ವಕೀಲರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.

ದಂಟರಮಕ್ಕಿ ಕೆರೆಯ ವಿಸ್ತೀರ್ಣ 47.75 ಹೆಕ್ಟೇರ್‌. ಇದು, 310 ಹೆಕ್ಟೇರ್‌ ಪ್ರದೇಶಕ್ಕೆ ನೀರಿನ ಆಶ್ರಯವಾಗಿದೆ. ಕೆರೆಯ ಪೂರ್ವ ಹಾಗೂ ಪಶ್ಚಿಮ ಭಾಗದಲ್ಲಿ ಮಣ್ಣು ಹಾಕಿ ತಡೆ ಗೋಡೆ ಕಟ್ಟಲಾಗಿದೆ. ಅದರಿಂದ ನೀರಿನ ಸಂಗ್ರಹ ಕಡಿಮೆಯಾಗಲಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಅಂದರೆ, ಭಾರೀ ಮತ್ತು ಮಧ್ಯಮ ನೀರಾವರಿ ಇಲಾಖೆಯ ಮಾಹಿತಿ ಪ್ರಕಾರ ಈ ಕೆರೆಯ ಸುತ್ತಳತೆ 40 ಹೆಕ್ಟೇರ್‌ಗೆ ಇಳಿಯಲಿದೆ. ಆದರೆ, ನೀರಿನ ಸಂಗ್ರಹ ಹಿಂದಿನ ಪ್ರಮಾಣದಂತೆ ಹೆಚ್ಚು ಮಾಡಲು ಪ್ಲಾನ್‌ ಮಾಡಿಕೊಳ್ಳಲಾಗಿದೆ.

ಅನಾಥ ಪ್ರಜ್ಞೆ :

ದಂಟರಮಕ್ಕಿ ಕೆರೆ ಒಂದಲ್ಲಾ ಒಂದು ಕಾರಣಕ್ಕಾಗಿ ವಿವಾದ ಎದುರಿಸುತ್ತಿದೆ. ಕಾಮಗಾರಿಯಲ್ಲಿ ಅಕ್ರಮವಾಗಿದೆ ಎಂದು ಕಾಂಗ್ರೆಸ್‌ ಪಕ್ಷದ ಆರೋಪವಾಗಿತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದ್ದರಿಂದ ಕಾಮಗಾರಿ ಸಹಜವಾಗಿ ಸ್ಥಗಿತಗೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಎಲ್ಲಾ ಕಾಮಗಾರಿಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ.

ಕಾರ್ಯಕರ್ತರು ಎದ್ದರೆ ಕಾಂಗ್ರೆಸ್ ಧೂಳಿಪಟವಾಗುತ್ತೆ; ಆರ್.ಅಶೋಕ್

ದಂಟರಮಕ್ಕಿ ಕೆರೆಯ ಈಗಿನ ಪರಿಸ್ಥಿತಿ ನೋಡಿದರೆ, ಕಾಮಗಾರಿಗೆ ಕೈ ಹಾಕುವ ಬದಲು ಹಾಗೆಯೇ ಬಿಟ್ಟಿದ್ದರೆ, ಕೆರೆಯ ಅಚ್ಚುಕಟ್ಟು ಪ್ರದೇಶಕ್ಕೆ ಮಳೆಗಾಲದಲ್ಲಿ ಬೆಳೆ ಬೆಳೆಯಲು ನೀರು ಸಿಗುತ್ತಿತ್ತು ಎಂಬುದು ರೈತರ ಅಭಿಪ್ರಾಯವಾಗಿದೆ. ಒಟ್ಟಾರೆ, ಕೆರೆಯ ಕಾಮಗಾರಿ ಅತಂತ್ರ ಸ್ಥಿತಿಯಲ್ಲಿದ್ದು, ಈ ವಿಚಾರದಲ್ಲಿ ಯಾರಿಗೆ ದೂಷಿಸಬೇಕೆಂಬ ಗೊಂದಲದಿಂದಾಗಿ ಮೌನ ವಾಗಿದ್ದಾರೆ.