* ಹರಕೆ ಕುರಿಗಳ ಕತ್ತು ಕಚ್ಚಿ ರಕ್ತ ಹೀರಿ ಕೊಡುವ ಅರ್ಚಕ * ದೊಡ್ಡಮ್ಮ ತಾಯಿ ಉತ್ಸವದಲ್ಲಿ ಅರ್ಚಕ ಹಸಿ ರಕ್ತ ಕುಡಿಯುವುದು ವಿಶೇಷ* ಚಾಮರಾಜನಗರದ ಅಣ್ಣೂರುಕೇರಿಯಲ್ಲಿ

ವರದಿ - ಪುಟ್ಟರಾಜು. ಆರ್.ಸಿ. ಏಷ್ಯಾನೆಟ್, ಸುವರ್ಣ ನ್ಯೂಸ್

Add Asianetnews Kannada as a Preferred SourcegooglePreferred

ಚಾಮರಾಜನಗರ, (ಮಾ.19): ಜಾನಪದ ತವರು, ಸಂಪ್ರದಾಯಗಳ ನಾಡು ಎಂದೇ ಖ್ಯಾತಿ ಪಡೆದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಯುಗಾದಿ ಸಮೀಪಿಸುತ್ತಿದ್ದಂತೆ ಹಳ್ಳಿ ಹಳ್ಳಿಗಳಲ್ಲಿ ಸುಗ್ಗಿಯ ಸಂಭ್ರಮ. ಪ್ರತಿ ಗ್ರಾಮದಲ್ಲಿ ಕೊಂಡೋತ್ಸವ ಸಾಮಾನ್ಯ. ಭಕ್ತರು ಕೊಂಡ ಹಾಯುವುದು, ಮರುದಿನ ಭರ್ಜರಿ ಬಾಡೂಟ ಮಾಡುವುದು ಸಹ ಸಾಮಾನ್ಯ. 

ಆದ್ರೆ ಅಣ್ಣೂರುಕೇರಿಯಲ್ಲಿ ಮಾತ್ರ ದೊಡ್ಡಮ್ಮ ತಾಯಿ ಉತ್ಸವದಲ್ಲಿ ಅರ್ಚಕ ಹಸಿ ರಕ್ತ ಕುಡಿಯುವುದು ವಿಶೇಷ. ಹರಕೆ ಹೊತ್ತ ಭಕ್ತರು ಕುರಿಗಳನ್ನ ಕುಯ್ದು ದೊಡ್ಡಮ್ಮ ತಾಯಿಗೆ ರಕ್ತ ನೈವೇಧ್ಯ ಮಾಡುತ್ತಾರೆ. ಈ ವೇಳೆ ಅರ್ಚಕ ಮರಿಗಳ ಹಸಿ ರಕ್ತ ಕುಡಿದು ನಂತ್ರ ಭಕ್ತರಿಗೆ ಕುರಿಗಳನ್ನ ನೀಡುತ್ತಾನೆ. 

ಮದುವೆಯಾಗದ ಚಿಂತೆ: ವಿಷ ಕುಡಿದು ಯುವಕ ಆತ್ಮಹತ್ಯೆ

ವರ್ಷಕ್ಕೊಮ್ಮೆ ಯುಗಾದಿ ಹಬ್ಬದ ವೇಳೆ ಅಣ್ಣೂರುಕೇರಿಯಲ್ಲಿ ಊರಹಬ್ಬವನ್ನು ಆಚರಣೆ ಮಾಡ್ತಾರೆ. ಪ್ರತಿ ವರ್ಷ ಗ್ರಾಮದೇವತೆಗೆ ಹರಕೆ ಹೊತ್ತು ಊರಿನ ಜನ ಕುರಿಗಳನ್ನು ಕುಯ್ತಾರೆ. ಹಬ್ಬದಲ್ಲಿ ದೇವರ ಗುಡ್ಡ ಈ ಹರಕೆಯ ಕುರಿಗಳ ಕುತ್ತಿಗೆಗೆ ಬಾಯಿ ಹಾಕಿ ಹಸಿ ರಕ್ತವನ್ನು ಹೀರುತ್ತಾನೆ. ಗುಂಡ್ಲುಪೇಟೆ ತಾಲೂಕಿನ ಅಣ್ಣೂರು ಕೇರಿಯ ಗ್ರಾಮ ದೇವತೆ ದೊಡ್ಡಮ್ಮ ತಾಯಿ ಹಬ್ಬದ ಸಂಭ್ರಮದ ಪರಿ ಇದು. 

ಪ್ರತಿ ವರ್ಷ ಈ ದೊಡ್ಡಮ್ಮ ತಾಯಿಯ ಹಬ್ಬದ ವೇಳೆ ಭಕ್ತರು ಹರಕೆ ಹೊತ್ತುಕೊಳ್ತಾರೆ. ಹರಕೆ ಹೊತ್ತು ಕೊಂಡ ಭಕ್ತರು ಗ್ರಾಮ ದೇವತೆಗೆ ಕುರಿ ಬಲಿ ಕೊಡ್ತಾರೆ. ಈ ವೇಳೆ ದೇವರ ಗುಡ್ಡ ಪ್ರತಿ ಕುರಿಯ ರಕ್ತದ ರುಚಿ ನೋಡ್ತಾರೆ. ಕುರಿಯ ರಕ್ತ ಹೀರುವ ವೇಳೆ ವೇಳೆ ಜನರ ಶಿಳ್ಳೆ, ಚಪ್ಪಾಳೆಯ ಸದ್ದು ಮುಗಿಲುಮುಟ್ಟುತ್ತದೆ. ದೇವರ ಗುಡ್ಡ ಒಂದೆರಡು ಮರಿಯ ರಕ್ತದ ರುಚಿ ನೋಡಲ್ಲ, ಬದಲಿಗೆ ಆ ಊರಿನಲ್ಲಿ ಭಕ್ತರು ಕುಯ್ಯುವ ಎಲ್ಲಾ ಮರಿಗಳ ರಕ್ತ ಹೀರುತ್ತಾನೆ. ಆದ್ರೆ ಇದು ನಿನ್ನೆ ಮೊನ್ನೆ ಸಂಪ್ರದಾಯವಲ್ಲ ನಾನೂರು ವರ್ಷಗಳಿಂದಲೂ ನಡೆದು ಬಂದಿರೋದು ಜಾತ್ರೆ ಇದಾಗಿದೆ ಈ ಹಬ್ಬಕ್ಕೆ ಸಂಬಂಧಿಸಿದಂತೆ ಒಂದು ಕಥೆಯೂ ಕೂಡ ಇದೆ. ಗ್ರಾಮ ದೇವತೆ ದೊಡ್ಡಮ್ಮ ತಾಯಿ ರಾಕ್ಷಕರ ನಡುವೆ ಯುದ್ದ ನಡೆಯುತ್ತೆ ಈ ಯುದ್ದದಲ್ಲಿ ದೊಡ್ಡಮ್ಮ ಜಯಗಳಿಸ್ತಾಳೆ. ಅಂದಿನಿಂದ ಆ ದೊಡ್ಡಮ್ಮ ತಾಯಿಯನ್ನು ಶಾಂತಿಗೊಳಿಸಲು ಮರಿ ಕುಯ್ದು ರಕ್ತ ಕೊಡ್ತಾರೆ. ರಕ್ತ ಹೀರಿದ ದೊಡ್ಡಮ್ಮ ತಾಯಿ ಶಾಂತಚಿತ್ತಳಾಗುತ್ತಾಳೆ ಎಂಬ ನಂಬಿಕೆ ಇದೆ.

 ಅರ್ಚಕ ಕುರಿಯ ರಕ್ತ ಹೀರಿದ ನಂತರ ಭಕ್ತರು ಮನೆಗೆ ಕೊಂಡೋಯ್ದು ಅದೇ ಕುರಿಯಿಂದ ಭರ್ಜರಿ ಬಾಡೂಟ ಮಾಡಿ ಊಟ ಸವಿಯುತ್ತಾರೆ. ಬಲಿ ಕೊಟ್ಟ ಮರಿಯ ರಕ್ತವನ್ನ ಗುಡ್ಡ ಸೇವನೆ ಮಾಡಿದರೆ ಸಾಕ್ಷತ್ ದೊಡ್ಡಮ್ಮ ತಾಯಿಯೇ ಸೇವನೆ ಮಾಡಿದ್ದಾಳೆ ಎಂಬ ನಂಬಿಕೆ ಭಕ್ತರಲ್ಲಿ ಇದೆ. ಹೀಗಾಗಿ ರಾತ್ರಿ ಇಡೀ ನಡೆಯುವ ದೊಡ್ಡಮ್ಮ ತಾಯಿ ಜಾತ್ರೆ ವೇಳೆ ಬಲಿ ಪದ್ದತಿ ನಡೆಯುತ್ತದೆ. ಛತ್ರಿ ಚಾಮರಗಳ ಜೊತೆಗೆ ದೊಡ್ಡಮ್ಮ ತಾಯಿ ಮೆರವಣಿಗೆ ಕೂಡ ನಡೆಯುತ್ತದೆ. ಹರಕೆ ಹೊತ್ತವರ ಮನೆ ಬಳಿ ದೊಡ್ಡಮ್ಮ ತಾಯಿ ಬರುತ್ತಿದ್ದಂತೆ ಮರಿಯನ್ನ ಬಲಿ ಕೊಡಲಾಗುತ್ತದೆ. ಬಲಿ ಕೊಟ್ಟ ಮರಿಯ ರಕ್ತವನ್ನ ಗುಡ್ಡಪ್ಪ ಹೀರಿದ ನಂತ್ರವೇ ಮರಿಯನ್ನ ಮನೆಗೆ ತೆಗೆದು ಕೊಂಡು ಹೋಗಲಾತ್ತದೆ

ಅಣ್ಣೂರು ಕೇರಿ,ಶಿವಪುರ, ಬೊಮ್ಮಲಾಪುರ,ಅಂಕಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಜನರು ದೊಡ್ಡಮ್ಮನ ಹಬ್ಬ ಮಾಡ್ತಾರೆ. ತಾಯಿಗೆ ರಕ್ತದ ನೈವೇದ್ಯದ ನಂತರ ಭರ್ಜರಿ ಬಾಡೂಟ ಮಾಡ್ತೇವೆ. ಇದು ಅನಾದಿ ಕಾಲದಿಂದಲೂ ನಡೆದು ಬಂದಿರುವ ಸಂಸ್ಕೃತಿ.ನಾವೂ ಕೂಡ ಅದೇ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗ್ತಿದ್ದೇವೆ. ಅನಾರೋಗ್ಯ ಪೀಡಿತರು, ಮಕ್ಕಳಾಗದವರು, ಅವಿವಾಹಿತರು ತಾಯಿಯ ಬಳಿ ಹರಕೆ ಮಾಡಿಕೊಳ್ತಾರೆ. ಅವರು ಇಚ್ಚೆ ಈಡೇರಿದ ನಂತರ ದೇವರ ಹರಕೆ ತೀರಿಸ್ತಾರೆ ಎನ್ನುತ್ತಾರೆ ಗ್ರಾಮಸ್ಥರು

 ಆಧುನಿಕತೆ ಎಷ್ಟೇ ಮುಂದುವರಿದರೂ ಕೂಡ ಜನರ ಸಂಪ್ರದಾಯ ಆಚರಣೆಗಳೂ ಇಂದಿಗೂ ನಿಂತಿಲ್ಲ ಎಂಬುದಕ್ಕೆ ಅಣ್ಣೂರುಕೇರಿ ಗ್ರಾಮದೇವತೆ ಹಬ್ಬ ಒಂದು ತಾಜಾ ನಿದರ್ಶನವಾಗಿದೆ.