ಚಿಕ್ಕಮಗಳೂರಿನ ಹಳೆ ಉಪ್ಪಳ್ಳಿಯ ಈಶ್ವರ ದೇವಸ್ಥಾನದಲ್ಲಿ ಜಾಗಂಟೆ ಶಬ್ದಕ್ಕೆ ಅನ್ಯಕೋಮಿನ ವ್ಯಕ್ತಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶಬ್ದ ಹೊರಗೆ ಕೇಳಿಸದಂತೆ ಕ್ರಮ ಕೈಗೊಳ್ಳಲು ಪೊಲೀಸರು ಅರ್ಚಕರಿಗೆ ಸೂಚಿಸಿದ್ದು, ಈ ನಡೆಗೆ ಅರ್ಚಕರು ಬೇಸರ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು :ಚಿಕ್ಕಮಗಳೂರು ನಗರದಲ್ಲಿ ದೇವಸ್ಥಾನದ ಜಾಗಂಟೆ ಶಬ್ದಕ್ಕೆ ಸಂಬಂಧಿಸಿದಂತೆ ವಿವಾದ ಒಂದು ಉಂಟಾಗಿದೆ. ಹಳೆ ಉಪ್ಪಳ್ಳಿಯ ಈಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ಹಾಗೂ ಸಂಜೆ ಜಾಗಂಟೆ ಹಾಕುವ ವಿಚಾರಕ್ಕೆ ಅನ್ಯಕೋಮಿನ ವ್ಯಕ್ತಿಯಿಂದ ಆಕ್ಷೇಪ ವ್ಯಕ್ತವಾಗಿದೆ. ಇದೇ ಇದೀಗ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಈಗ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.
ದೇವಸ್ಥಾನದಿಂದ ಬರುವ ಶಬ್ದದಿಂದ ತೊಂದರೆ
ಚಿಕ್ಕಮಗಳೂರು ನಗರದ ಹಳೆ ಉಪ್ಪಳ್ಳಿಯ ಈಶ್ವರ ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ ಸುಮಾರು 6.30 ರಿಂದ 7 ಗಂಟೆಯವರೆಗೆ ಸುಪ್ರಭಾತ ಹಾಗೂ ಜಾಗಂಟೆ ಮೊಳಗಿಸಲಾಗುತ್ತದೆ. ಜೊತೆಗೆ ಬೆಳಿಗ್ಗೆ 15 ನಿಮಿಷ ಮತ್ತು ಸಂಜೆ 15 ನಿಮಿಷ ಜಾಗಂಟೆ ಹಾಕುವ ಆಚರಣೆ ನಡೆದು ಬರುತ್ತಿದೆ.ಆದರೆ ಈ ಶಬ್ದದಿಂದ ತೊಂದರೆ ಆಗುತ್ತಿದೆ ಎಂದು ಫಾರೂಕ್ ಎಂಬ ಅನ್ಯಕೋಮಿನ ವ್ಯಕ್ತಿ ಬಸವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ದೇವಸ್ಥಾನದ ಅರ್ಚಕರಾದ ಜಗದೀಶ್ ಭಟ್ ಅವರಿಗೆ ಜಾಗಂಟೆ ಶಬ್ದ ಹೊರಗೆ ಕೇಳಿಸದಂತೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರೆಂದು ತಿಳಿದುಬಂದಿದೆ.
ಪೊಲೀಸರ ನಡೆ ಬಗ್ಗೆ ಬೇಸರ :
ಜಾಗಂಟೆಯನ್ನು ಗರ್ಭಗುಡಿಯಲ್ಲಿ ಇಟ್ಟುಕೊಳ್ಳುವುದು ಹಾಗೂ ದೇವಸ್ಥಾನದ ಸುತ್ತ ಎತ್ತರದ ಗೋಡೆ ನಿರ್ಮಿಸುವಂತೆ ಸಲಹೆ ನೀಡಲಾಗಿದೆ ಎನ್ನಲಾಗಿದೆ.ಹಿಂದೂ ದೇವರ ಪೂಜೆಗೆ ಇಂತಹ ಪರಿಸ್ಥಿತಿ ಎದುರಾಗುತ್ತಿದೆ ಎನ್ನುವುದು ನೋವು ತಂದಿದೆ. ನಾವು ನಮ್ಮ ಆಚರಣೆ ಮಾಡುತ್ತೇವೆ. ಇತರರ ಆಚರಣೆಗಳಿಗೆ ಗೌರವ ನೀಡುತ್ತೇವೆ. ನಮ್ಮ ಆಚರಣೆಗೂ ಗೌರವ ನೀಡಬೇಕು ಎಂದು ಅರ್ಚಕ ಜಗದೀಶ್ ಭಟ್ ಬೇಸರ ವ್ಯಕ್ತಪಡಿಸಿದ್ದಾರೆ.ಧಾರ್ಮಿಕ ಆಚರಣೆ, ಶಬ್ದಮಾಲಿನ್ಯ ಹಾಗೂ ಪರಸ್ಪರ ಗೌರವ. ಈ ಮೂರು ವಿಚಾರಗಳ ಮಧ್ಯೆ ಸಮತೋಲನ ಸಾಧಿಸುವುದು ಅಗತ್ಯವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಾಗೂ ಸ್ಥಳೀಯರು ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳುವ ನಿರೀಕ್ಷೆ ಇದೆ


