ಕಿತ್ತೂರ ಗ್ರಾಮದ ಪದವೀಧರೆ ಲತಾ ಹಳ್ಳಿಕೇರಿ ಅವರು, ರಾಸಾಯನಿಕ ಬಳಸದೆ ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಡ್ರ್ಯಾಗನ್ ಫ್ರುಟ್ ಬೆಳೆದು ಯಶಸ್ಸು ಕಂಡಿದ್ದಾರೆ. ಒಂದು ಎಕರೆ ಜಮೀನಿನಲ್ಲಿ ವರ್ಷಕ್ಕೆ 10 ಟನ್ಗೂ ಅಧಿಕ ಇಳುವರಿ ಪಡೆದು, ಉತ್ತಮ ಆದಾಯ ಗಳಿಸುವ ಮೂಲಕ ಇತರ ರೈತ ಮಹಿಳೆಯರಿಗೆ ಮಾದರಿಯಾಗಿದ್ದಾರೆ.
ರಫೀಕ್ ಕಲೇಗಾರ
ಅಣ್ಣಿಗೇರಿ: ಯಾವುದೇ ರಾಸಾಯನಿಕ ಬಳಸದೇ, ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಇಲ್ಲಿಯ ಮಹಿಳೆಯೊಬ್ಬರು ಡ್ರ್ಯಾಗನ್ ಫ್ರುಟ್ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದು, ರೈತರ ಗಮನ ಸೆಳೆದಿದ್ದಾರೆ.
ತಾಲೂಕಿನ ಕಿತ್ತೂರ ಗ್ರಾಮದ ಲತಾ ಸಂಗಪ್ಪ ಹಳ್ಳಿಕೇರಿ ಅವರು 1 ಎಕರೆ ಜಮೀನಿನಲ್ಲಿ ಡ್ರ್ಯಾಗನ್ ಫ್ರುಟ್ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಲತಾ ಪದವೀಧರೆ, ಸುಸಂಸ್ಕೃತ ಕುಟುಂಬದವರು. ಅವರು ಆಯ್ಕೆ ಮಾಡಿಕೊಂಡ ಉದ್ಯೋಗ ಕೃಷಿ. ತಮ್ಮ ಸ್ವಂತ ಹೊಲದಲ್ಲಿ ಸಾವಯವ ಪದ್ಧತಿಯಲ್ಲಿ ಸಗಣಿ ಗೊಬ್ಬರ, ಬೇವಿನ ಹಿಂಡಿ, ಸಾವಯವ ಎಣ್ಣೆ ಬಳಸಿ ವರ್ಷಕ್ಕೆ 10 ಟನ್ ವರೆಗೂ ಡ್ರ್ಯಾಗನ್ ಫ್ರುಟ್ ಬೆಳೆದು ₹ 80 ಸಾವಿರಕ್ಕೂ ಹೆಚ್ಚು ಆದಾಯ ಗಳಿಸುತ್ತಾರೆ.
10 ಟನ್ಗೂ ಅಧಿಕ ಹಣ್ಣು ಉತ್ಪಾದನೆ
ಡ್ರ್ಯಾಗನ್ ಫ್ರುಟ್ ಒಂದು ಲಾಭದಾಯಕ ಬೆಳೆ. ಕಡಿಮೆ ನಿರ್ವಹಣೆ ಸಾಕಾಗುತ್ತದೆ. ಕಲ್ಲುಕಂಬಗಳ ಆಸೆರೆಯೊಂದಿಗೆ ಒಮ್ಮೆ ಸಸಿ ನೆಟ್ಟರೆ 5ರಿಂದ 6 ಸಲ ಹಣ್ಣು ಕಟಾವಿಗೆ ಬರುತ್ತದೆ. ಏಪ್ರಿಲ್-ಮೇ ತಿಂಗಳಲ್ಲಿ ಮೊಗ್ಗು ಶುರುವಾಗಿ 15 ದಿನದಲ್ಲಿ ಹೂ ಬಿಟ್ಟು, ಆನಂತರ ಹಣ್ಣು ಆಗಿ ಕಟಾವಿಗೆ ಬರುತ್ತದೆ. ಪ್ರತಿ ವರ್ಷಕ್ಕೆ 10 ಟನ್ಗೂ ಅಧಿಕ ಹಣ್ಣು ಉತ್ಪಾದನೆಯಾಗುತ್ತದೆ ಎಂದು ಲತಾ ಹೇಳುತ್ತಾರೆ.
ಡ್ರ್ಯಾಗನ್ ಫ್ರುಟ್ ಜತೆಗೆ 30 ಗುಂಟೆಯಲ್ಲಿ ಸಾವಯವ ಮಾದರಿಯಲ್ಲೇ ತರಕಾರಿ ಬೆಳೆಯುತ್ತಿದ್ದೇನೆ. ತೆಂಗು, ಲಿಂಬು, ಮಾವು, ಸೇಬು, ಪೇರಲ ಹಣ್ಣು ಬೆಳೆಯುತ್ತೇನೆ. ಜತೆಗೆ ಹಿರೇಕಾಯಿ, ನುಗ್ಗಿ, ಸವತೆ ಇತರ ತರಕಾರಿಗಳನ್ನು ಮನೆ ಬಳಕೆಗಾಗಿ ಬೆಳೆಯುತ್ತಿದ್ದೇನೆ ಎಂದು ಹೇಳಿದರು. ನಮ್ಮ ಪರಿಪೂರ್ಣ ಆರೋಗ್ಯಕ್ಕೆ ಸಾವಯವ ಕೃಷಿ ಬಹಳ ಮುಖ್ಯ. ಆರೋಗ್ಯ ಸಂಪತ್ತು ಮತ್ತು ದೇಶದ ಸಂಪತ್ತು ಉಳಿಸಲು ಸಾವಯವ ಕೃಷಿಯಿಂದ ಮಾತ್ರ ಸಾಧ್ಯ. ವಿಷಪೂರಿತ ರಾಸಾಯನಿಕ ಗೊಬ್ಬರ ಬಿಟ್ಟು ಸಾವಯವ ಕೃಷಿ ಮಾಡಿ ಎಂದು ಇತರ ರೈತರಿಗೆ ಸಲಹೆ ನೀಡುತ್ತಾರೆ.
ಡ್ರ್ಯಾಗನ್ ಫ್ರುಟ್ ಉಪಯುಕ್ತವಾದ ಹಣ್ಣಾಗಿದ್ದು ದೇಹಕ್ಕೆ ಹೆಚ್ಚು ಸಿ ವಿಟಮಿನ್, ಪೈಬರ್ ದೊರೆಯುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಜೀರ್ಣಕ್ರಿಯೆ ಸುಧಾರಿಸಲು, ಹೃದಯ ಒತ್ತಡ, ಮಧುಮೇಹ ನಿಯಂತ್ರಿಸಲು ಹಾಗೂ ಚರ್ಮದ ಆರೋಗ್ಯ ಕಾಪಾಡಲು ಈ ಹಣ್ಣು ಸಹಕಾರಿಯಾಗಿದೆ ಎಂದು ಸ್ಥಳೀಯ ವೈದ್ಯರಾಗಿರುವ ಪಿ.ಆರ್.ಅಕ್ಕಿ ಹೇಳುತ್ತಾರೆ.
ಇದನ್ನೂ ಓದಿ: ಮೈಸೂರು ವೀಳ್ಯದೆಲೆ, ನಂಜನಗೂಡು ರಸಬಾಳೆ ಇಂಡಿಯ ಲಿಂಬೆಕಾಯಿ ಬಗ್ಗೆ ಪ್ರಧಾನಿ ಮೋದಿ ಫಿದಾ
ಸಾವಯವ ಕೃಷಿಗೆ ಬೇಕಿದೆ ಪ್ರೋತ್ಸಾಹ
ಈ ಭಾಗದಲ್ಲಿ ಒಣಬೇಸಾಯ ಮಾಡುವ ಜಾಗದಲ್ಲಿ ಹೆಚ್ಚು ಆಸಕ್ತಿ ವಹಿಸಿ ಲತಾ ಹಳ್ಳಿಕೇರಿ ಅವರು ಡ್ರ್ಯಾಗನ್ ಫ್ರುಟ್ ಬೆಳೆದಿದ್ದಾರೆ. ಸಾವಯಕ ಪದ್ಧತಿಯಲ್ಲಿ ಬೆಳೆಯುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅಂಥವರನ್ನು ಸರ್ಕಾರ ಗುರುತಿಸಿ ಪ್ರೋತ್ಸಾಹಿಸಬೇಕು. ಅದರಿಂದ ಇತರ ಮಹಿಳೆಯರಿಗೆ ಸಾವಯವ ಕೃಷಿ ಕೈಗೊಳ್ಳಲು ಪ್ರೋತ್ಸಾಹ ದೊರೆಯುತ್ತದೆ ಎಂದು ಗ್ರಾಮದ ನಿವೃತ್ತ ಅಧಿಕಾರಿ ಸಂಗಪ್ಪ ಹಳ್ಳಿಕೇರಿ ಹೇಳಿದ್ದಾರೆ.
ಇದನ್ನೂ ಓದಿ: Climate Change Effect on Mango ಹವಾಮಾನ ವೈಪರೀತ್ಯದಿಂದ ಈ ವರ್ಷವೂ ಮಾವಿನ ಹಣ್ಣು ಬಲು ದುಬಾರಿ?
